ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಆರೋಪಿಗಳಲ್ಲೋರ್ವನಾದ ಸುಳ್ಯದ ಕಲ್ಲುಮುಟ್ಲು ನಿವಾಸಿ ಉಮ್ಮರ್ ಫಾರೂಕ್ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ ಕೇರಳದ ಕೊಚ್ಚಿಯಲ್ಲಿ ಬಂಧಿಸಿರುವುದಾಗಿ ವರದಿಯಾಗಿದೆ. ಈ ಪ್ರಕರಣದಲ್ಲಿ 20 ಕ್ಕೂ ಹೆಚ್ಚು ಮಂದಿಯನ್ನು ಬಂಧನ ಮಾಡಲಾಗಿದ್ದು, ಆರು ಮಂದಿ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದರು. ಇವರ ಪತ್ತೆಗಾಗಿ ತಲಾ ಎರಡು ಲಕ್ಷದ ಬಹುಮಾನವನ್ನು ಕೂಡಾ ಘೋಷಣೆ ಮಾಡಲಾಗಿತ್ತು.
ಎನ್ಐಎ ಇತ್ತೀಚೆಗೆ ಜುಲೈ 11 ರಂದು ಇಬ್ಬರು ಆರೋಪಿಗಳಾದ ನೌಷದ್ ಹಾಗೂ ನಾಸೀರ್ನನ್ನು ಬಂಧನ ಮಾಡಿತ್ತು. ವಿಚಾರಣೆ ಸಂದರ್ಭದಲ್ಲಿ ಉಮ್ಮರ್ ಫಾರೂಕ್ ಕೊಚ್ಚಿಯಲ್ಲಿ ಅಡಗಿರುವ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಈತನ ಬಂಧನ ಮಾಡಿದೆ. ಕೃತ್ಯ ಎಸಗಿದ ಪ್ರಮುಖ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಉಮ್ಮರ್ ಫಾರೂಕ್ ಸಹಕರಿಸಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ 13ನೇ ಆರೋಪಿಯೆಂದು ಗುರುತಿಸಲಾಗಿತ್ತು.ಈತ ಕೊಚ್ಚಿನಲ್ಲಿ ವಾಸ್ತವ್ಯ ಹೂಡಿ ಅಲ್ಲಿಯೇ ಕೆಲಸಕ್ಕೂ ಸೇರಿಕೊಂಡಿದ್ದ ಎನ್ನುವ ಕುರಿತು ವರದಿಯಾಗಿದೆ.