Published
2 years agoon
By
Akkare News
ಪುತ್ತೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭ ಭಾರೀ ಸಂಚಲನ ಮೂಡಿಸಿದ್ದ ಪುತ್ತೂರಿನಲ್ಲಿ ಬಿಜೆಪಿ ನಾಯಕರ ಭಾವಚಿತ್ರಗಳಿಗೆ ಚಪ್ಪಲಿಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿ ಬ್ಯಾನರ್ ಗಳನ್ನು (Puttur Banner) ಅಳವಡಿಸಿದ ಪ್ರಕರಣ ಇದೀಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.
ಭಾರತೀಯ ಜನತಾ ಪಾರ್ಟಿಯ ಪುತ್ತೂರು ಕ್ಷೇತ್ರದ ನಾಯಕರಾದ ಮಾಜಿ ಸಿಎಂ ಸದಾನಂದ ಗೌಡ ಮತ್ತು ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರವಿದ್ದ ಬ್ಯಾನರ್ ಅಳವಡಿಸಿ ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆಯಲಾಗಿದ್ದ ಬ್ಯಾನರ್ ಅನ್ನು ಪುತ್ತೂರು ಸರ್ಕಾರಿ ಬಸ್ ನಿಲ್ದಾಣದ ಮುಂದೆ ಅಳವಡಿಸಿದ್ದು ನೆನಪಿರಬಹುದು. ಈ ಪ್ರಕರಣದಲ್ಲಿ ಹಿಂದೂ ಸಂಘಟನೆಯ 9 ಕಾರ್ಯಕರ್ತರನ್ನು ಬ್ಯಾನರ್ ಹಾಕಿದ್ದಾರೆ ಎಂದು ಆರೋಪಿಸಿ ಬಂಧಿಸಿ ತೀವ್ರ ಹಲ್ಲೆ ಕೂಡ ನಡೆಸಲಾಗಿತ್ತು. ಈ ವಿಚಾರ ಎಲ್ಲೆಡೆ ಭಾರೀ ಚರ್ಚೆಗೆ ಕೂಡ ಕಾರಣವಾಗಿತ್ತು.


ಈ ಪ್ರಕರಣದಲ್ಲಿ ಹಲ್ಲೆಗೊಳಗಾದ ಅವಿನಾಶ್ ನೀಡಿದ ದೂರಿನ ಅನುಸಾರ, ಪುತ್ತೂರು ನಗರ ಠಾಣೆಯಲ್ಲಿ ಪುತ್ತೂರು ಡಿವೈಎಸ್ಪಿ ವೀರಯ್ಯ ಹಿರೇಮರ್, ಪುತ್ತೂರು ಗ್ರಾಮಾಂತರ ಪಿಎಸ್ಐ ಶ್ರೀನಾಥ್, ಪಿಸಿ ಹರ್ಷಿತ್ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ, ಹಿಂದೂ ಮುಖಂಡ ಹಾಗೂ ವಕೀಲ ಗಿರೀಶ್ ಭಾರದ್ವಜ್ ಈ ಘಟನೆಯ ಕುರಿತು, ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಇದೀಗ, ಆಯೋಗದ ಅಧಿಕಾರಿಗಳು ಈ ಘಟನೆಯನ್ನು ತನಿಖೆ ನಡೆಸಿದ್ದು, ಪಶ್ಚಿಮ ವಲಯ ಐಜಿಪಿ ಗೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.ಅವಿನಾಶ್ ನೀಡಿರುವ ದೂರು ಅರ್ಜಿಯಲ್ಲಿ ಆಪಾದಿಸಿರುವ ವಿಚಾರ ನಿಜವಾಗಿದಲ್ಲಿ ನೊಂದ ವ್ಯಕ್ತಿಗಳ ಮಾನವ ಹಕ್ಕಿನ ಉಲ್ಲಂಘನೆಯಾಗಿರುತ್ತದೆ ಎಂದು ತಿಳಿಸಿದೆ. ಈ ದೂರು ಅರ್ಜಿಯನ್ನು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ. ಕೈಗೊಂಡ ಕ್ರಮದ ಬಗ್ಗೆ 2024ರ ಎ.4 ರೊಳಗೆ ವರದಿಯನ್ನು ಆಯೋಗಕ್ಕೆ ಸಲ್ಲಿಸಲು ಐಜಿಪಿಗೆ ಆದೇಶ ಹೊರಡಿಸಲಾಗಿದೆ.