Published
3 days agoon
By
Akkare Newsಕೆನಡಾದಲ್ಲಿ ನಡೆಯಲಿರುವ ಈ ಬಾರಿಯ ಜಿ7 ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದುವರೆಗೆ ಯಾವುದೇ ಅಧಿಕೃತ ಆಹ್ವಾನ ಬಂದಿಲ್ಲ. ಒಂದು ವೇಳೆ ಬಂದಿದ್ದರೂ ಭಾಗವಹಿಸುತ್ತಿರಲಿಲ್ಲ ಎಂದು ವರದಿಗಳು ಹೇಳಿವೆ.
“ಜೂನ್ 15ರಿಂದ 17ರವರೆಗೆ ಕೆನಡಾಡದ ಆಲ್ಬರ್ಟಾದಲ್ಲಿ ಈ ವರ್ಷದ ಜಿ7 ಶೃಂಗಸಭೆ ನಡೆಯಲಿದೆ. ಕಳೆದ 6 ವರ್ಷಗಳಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿಗೆ ಆಹ್ವಾನ ಬಂದಿಲ್ಲ. ಒಂದು ವೇಳೆ ಬಂದಿದ್ದರೂ ಖಲಿಸ್ತಾನಿ ವಿಚಾರದಲ್ಲಿ ಭಾರತದ ಕಳವಳಗಳಿಗೆ ಕೆನಡಾ ಸ್ಪಂದಿಸುತ್ತದೆಯೇ? ಎಂದು ಇನ್ನೂ ಖಚಿತವಾಗದ ಕಾರಣ ಮೋದಿ ಭಾಗವಹಿಸುವುತ್ತಿರಲಿಲ್ಲ” ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮೋದಿ ಅವರನ್ನು ಆಹ್ವಾನಿಸಲಾಗುತ್ತದೆಯೇ ಎಂಬುದನ್ನು ಕೆನಡಾದ ಜಿ7 ವಕ್ತಾರರು ಭಾನುವಾರ ತಡರಾತ್ರಿವರೆಗೆ ದೃಢಪಡಿಸಲಿಲ್ಲ ಎಂದು ವರದಿ ತಿಳಿಸಿದೆ.
ಫ್ರಾನ್ಸ್, ಜರ್ಮನಿ, ಇಟಲಿ, ಯುನೈಟೆಡ್ ಕಿಂಗ್ಡಂ (ಯುಕೆ) ಜಪಾನ್, ಯುನೈಟೆಡ್ ಸ್ಟೇಟ್ಸ್ (ಯುಎಸ್), ಯುರೋಪಿಯನ್ ಒಕ್ಕೂಟ (ಇಯು), ಐಎಮ್ಎಫ್, ವಿಶ್ವ ಬ್ಯಾಂಕ್ ಮತ್ತು ವಿಶ್ವಸಂಸ್ಥೆಗಳು ಶೃಂಗಸಭೆಯಲ್ಲಿ ಭಾಗವಹಿಸಲಿವೆ.
ದಕ್ಷಿಣ ಆಫ್ರಿಕಾ, ಉಕ್ರೇನ್ ಮತ್ತು ಆಸ್ಟ್ರೇಲಿಯಾ ಕೂಡ ಕೆನಡಾದಿಂದ ಆಹ್ವಾನಗಳನ್ನು ಸ್ವೀಕರಿಸಿವೆ ಎಂದು ವರದಿಯಾಗಿದ್ದರೂ, ಪ್ರಧಾನಿ ಮೋದಿಯವರ ಭೇಟಿಯ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ.
ಕಳೆದ ತಿಂಗಳು, ವಿದೇಶಾಂಗ ಸಚಿವಾಲಯವು ಎರಡು ಸಂದರ್ಭಗಳಲ್ಲಿ, ಜಿ 7 ಶೃಂಗಸಭೆಗಾಗಿ ಪ್ರಧಾನಿ ಮೋದಿ ಕೆನಡಾಕ್ಕೆ ಭೇಟಿ ನೀಡುವ ಬಗ್ಗೆ ‘ಯಾವುದೇ ಮಾಹಿತಿ ಇಲ್ಲ’ ಎಂದು ಹೇಳಿದೆ.
ಈ ನಡುವೆ, ಕೆನಡಾದ ವಿದೇಶಾಂಗ ಸಚಿವೆ ಅಂಕಿತಾ ಆನಂದ್, ಕೆನಡಾದ ಪತ್ರಿಕೆ ದಿ ಗ್ಲೋಬ್ ಅಂಡ್ ಮೇಲ್ಗೆ ನೀಡಿದ ಸಂದರ್ಶನದಲ್ಲಿ, ಹೊಸದಾಗಿ ಆಯ್ಕೆಯಾದ ಮಾರ್ಕ್ ಕಾರ್ನಿ ಸರ್ಕಾರವು ಭಾರತದೊಂದಿಗೆ ಸಂಬಂಧ ಸುಧಾರಿಸಲು ಆಸಕ್ತಿ ಹೊಂದಿದೆ ಎಂದು ಹೇಳಿದ್ದಾರೆ.
ಆದರೆ, ಕೆನಡಾ ನೆಲದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯು ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಹದಗೆಡಿಸಿದೆ ಎಂದು ಅಂಕಿತಾ ಆನಂದ್ ಒಪ್ಪಿಕೊಂಡಿದ್ದಾರೆ.
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ನರೇಂದ್ರ ಮೋದಿ ಸರ್ಕಾರ ಭಾಗಿಯಾಗಿದೆ ಎಂದು ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಟ್ರುಡೊ ಅವರ ಆರೋಪಗಳನ್ನು ಭಾರತ ತಳ್ಳಿಹಾಕಿದೆ. ಆದರೆ, ಈ ವಿಚಾರ ಎರಡೂ ರಾಷ್ಟ್ರಗಳ ಸಂಬಂಧ ಹದೆಗೆಡಿಸಿದೆ.