Published
8 months agoon
By
Akkare News
ಮಂಗಳೂರು: ಶಾಂತಿ ಸಭೆ ಯಶಸ್ವಿಯಾಗಿದೆ. ಹಲವಾರು ಸಕಾರಾತ್ಮಕ ಸಲಹೆಗಳು ಬಂದಿವೆ. ಪ್ರದೇಶಕ್ಕೆ ಸೀಮಿತವಾದ ಕೆಲವು ಸಲಹೆಗಳಿವೆ. ಅವುಗಳ ಬಗ್ಗೆ ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದರು.
ಸಭೆ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಪ್ರಕಾರ ಮಾಡಿದರೆ ತೊಂದರೆ ಇಲ್ಲ. ಕಾನೂನು ಕೈಗೆತ್ತಿಕೊಂಡರೆ ಸಮಸ್ಯೆ ಯಾಗುತ್ತದೆ. ಬೇರೆಯವರು ಪೊಲೀಸರ ಕೆಲಸ ಮಾಡಲು ಹೋಗಬಾರದು. ನೈತಿಕ ಪೊಲೀಸ್ಗಿರಿ ಆಗಬಾರದು. ಗೋವುಗಳ ಅಕ್ರಮ ಸಾಗಾಟ ನಡೆಯುತ್ತಿದ್ದರೆ ಅದನ್ನು ಪೊಲೀಸರಿಗೆ ತಿಳಿಸಲಿ. ಪೊಲೀಸರು ನಿರ್ಧರಿಸುತ್ತಾರೆ ಎಂದು ಸಚಿವರು ತಿಳಿಸಿದರು.
ಉಡ್ತಾ ಪಂಜಾಬ್ ಆಗದು
ಸರಕಾರ ಡ್ರಗ್ಸ್ ವಿರುದ್ಧ ಸಮರ ಸಾರಿದೆ. ಕರ್ನಾಟಕವನ್ನು ಇನ್ನೊಂದು ಉಡ್ತಾ ಪಂಜಾಬ್ ಆಗಲು ಬಿಡುವುದಿಲ್ಲ. ಕಳೆದ ಒಂದು ವರ್ಷದಿಂದ 2,500 ಪ್ರಕರಣ ದಾಖಲಿಸಲಾಗಿದೆ. ಸುಮಾರು 500 ಕೆಜಿ ಗಾಂಜಾ ಜಫ್ತಿ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಡ್ರಗ್ಸ್ ನಿರ್ಮೂಲನೆ ಮಾಡಿಯೇ ತೀರುತ್ತೇವೆ. ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಆ್ಯಂಟಿ ಡ್ರಗ್ಸ್ ಕಮಿಟಿ ಮಾಡಲು ಸೂಚಿಸಲಾಗಿದೆ. ಶಾಲಾ ಮುಖ್ಯಸ್ಥರಿಗೆ ಜವಾಬ್ದಾರಿ ನೀಡಲಾಗಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಸಂಪೂರ್ಣವಾಗಿ ಈ ಮಾದಕ ವಸ್ತುಗಳಿಗೆ ಜನರು ದಾಸರಾಗಲು ಬಿಡುವುದಿಲ್ಲ. ಎಲ್ಲ ರೀತಿಯ ಕಠಿನ ಕ್ರಮ ಕೈಗೊಳ್ಳಿ ಎಂದು ಸಚಿವರು ತಿಳಿಸಿದರು.
ಅಹಿತಕರ ಘಟನೆಗಳಿಂದಾಗಿ ಉತ್ಸವಗಳಿಗೆ ರಾತ್ರಿ 11.30 ಮಿತಿ ಗೊಳಿಸುವ ಸನ್ನಿವೇಶ ಉಂಟಾಗಿದೆ. ಈ ಕುರಿತು ಅಷ್ಟು ಕಟ್ಟು ನಿಟ್ಟಾಗಿ ಹೋಗುವುದಿಲ್ಲ. ಆದರೆ ಕಾನೂನನ್ನು ಗಮನದಲ್ಲಿ ಟ್ಟುಕೊಂಡು ತೀರ್ಮಾನ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.