Published
8 months agoon
By
Akkare News
ಪುತ್ತೂರು :ಜುಲೈ 12: ಕ್ರಿಮಿನಲ್ ಅಲ್ಲದ ಮತ್ತು ಮಧ್ಯಸ್ಥಿಕೆಯ ಮೂಲಕ ಬಗೆಹರಿಸಬಲ್ಲ ಸಿವಿಲ್ ಮತ್ತು ಇತರ ವ್ಯಾಜ್ಯಗಳ ವಿಲೇವಾರಿಗಾಗಿ ಹಮ್ಮಿಕೊಂಡ ರಾಷ್ಟ್ರೀಯ ಲೋಕ ಅದಾಲತ್ ಗೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಉತ್ತಮ ಸ್ಪಂದನೆ ದೊರೆತಿದೆ.ಪುತ್ತೂರು ನ್ಯಾಯಾಲಯದಲ್ಲಿ ನಡೆದ ಈ ಅದಾಲತ್ ಗೆ ಬೆಳಗ್ಗಿನಿಂದಲೇ ನಾನಾ ಕಡೆಗಳಿಂದ ಸಾರ್ವಜನಿಕರು ಆಗಮಿಸಿ ತಮ್ಮ ಕೇಸ್ ಗಳನ್ನ ಇತ್ಯರ್ಥಪಡಿಸಲು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು.


ಪುತ್ತೂರು ನ್ಯಾಯಾಲಯ ವ್ಯಾಪ್ತಿಯ ಅಂದಾಜು ಸುಮಾರು 3000 ಅರ್ಜಿಗಳು ಈ ಲೋಕ ಅದಾಲತ್ ನಲ್ಲಿ ಸಲ್ಲಿಕೆಯಾಗಿದ್ದು, ಇವುಗಳಲ್ಲಿ ಹೆಚ್ಚಿನ ದೂರುಗಳು ಬ್ಯಾಂಕಿಗೆ ಸಂಬಂಧಪಟ್ಟವು, ಇನ್ನು ಕೆಲವು ಜಾಗ, ದಾರಿಗೆ ಸಂಬಂಧಪಟ್ಟಿರೋದು ಮತ್ತು ಇನ್ನು ಕೆಲವು ಸಣ್ಣಪುಟ್ಟ ವಿಚಾರಗಳಿಗೆ ನಡೆದ ವ್ಯಾಜ್ಯಗಳಾಗಿವೆ. ಲೋಕ್ ಅದಾಲತ್ ನಲ್ಲಿ ವಾದಿ ಮತ್ತು ಪ್ರತಿವಾದಿಗಳಿಗೆ ಪರಸ್ಪರ ಮಾತುಕತೆಯ ಮೂಲಕ ವ್ಯಾಜ್ಯವನ್ನು ಮುಗಿಸುವ ಅವಕಾಶವನ್ನು ನೀಡಲಾಗುತ್ತದೆ ಅಲ್ಲದೆ ವ್ಯಾಜ್ಯಕ್ಕಾಗಿ ನ್ಯಾಯಾಲಯಕ್ಕೆ ಕಟ್ಟಬೇಕಾದ ಶುಲ್ಕವನ್ನೂ ಮನ್ನಾ ಮಾಡಲಾಗುತ್ತದೆ. ಅಲ್ಲದೆ ದಿನಾಂಕದ ಮೇಲೆ ದಿನಾಂಕ ಎನ್ನುವ ತಲೆನೋವಿನಿಂದಲೂ ಮುಕ್ತಿ ದೊರೆಯುತ್ತದೆ ಎನ್ನುವ ಕಾರಣಕ್ಕೆ ಲೋಕ ಅದಾಲತ್ ನಲ್ಲೇ ತಮ್ಮ ವ್ಯಾಜ್ಯಗಳನ್ನು ಆದಷ್ಟು ಹೆಚ್ಚಾಗಿ ಮುಗಿಸಲು ಅವಕಾಶವಿದೆ.

ವಾದಿ,ಪ್ರತಿವಾದಿಯ ವಕೀಲರುಗಳ ಜೊತೆಗೆ ನ್ಯಾಯಾಲಯವೇ ಮಧ್ಯಸ್ತಿಕೆಗಾಗಿ ವಕೀಲರನ್ನು ನೇಮಿಸಿ, ಅವರ ಮೂಲಕ ಎರಡೂ ಕಡೆಯವರನ್ನು ಮಾತುಕತೆ ನಡೆಸಿ ವ್ಯಾಜ್ಯವನ್ನು ಮುಗಿಸಲು ಅವಕಾಶವನ್ನೂ ನೀಡಲಾಗಿದೆ. ಬ್ಯಾಂಕಿನಿಂದ ಸಾಲ ಪಡೆದು ಮರುಪಾವತಿ ಮಾಡದೆ ಎದುರಿಸುತ್ತಿರುವ ಚೆಕ್ ಬೌನ್ಸ್ ಕೇಸುಗಳೇ ಅಧಿಕ ಸಂಖ್ಯೆಯಲ್ಲಿ ಈ ಬಾರಿ ದಾಖಲಾಗಿರುವುದು ವಿಶೇಷವಾಗಿದೆ. ಪುತ್ತೂರು ಆರ್.ಟಿ.ಒ ಕಛೇರಿ ಸುಮಾರು 150 ಕ್ಕೂ ಮಿಕ್ಕಿದ ಪ್ರಕರಣಗಳೂ ಲೋಕ್ ಅದಾಲತ್ ನಲ್ಲಿ ದಾಖಲಾಗಿದ್ದು, ತೆರಿಗೆ ವಂಚನೆಯ ಪ್ರಕರಣಗಳನ್ನು ಇಲಾಖೆಯಕ್ಕೆ ದೂರು ಸಲ್ಲಿಸಿದ್ದು, ಸುಮಾರು ಒಂದು ಕೋಟಿಗೂ ಮಿಕ್ಕಿದ ತೆರಿಗೆಯನ್ನು ವಂಚಿಸಿರುವ ಪ್ರಕರಣಗಳಿಗೆ ಸಂಬಂದಿಸಿದಂತೆಯೂ ಲೋಕ ಅದಾಲತ್ ನಲ್ಲಿ ವಿಚಾರಣೆ ನಡೆದಿದೆ. ದಕ್ಷಿಣಕನ್ನಡ ಜಿಲ್ಲಾ ಐದನೇ ಹೆಚ್ಚುವರಿ ಸೆಷನ್ ಕೋರ್ಟ್ ನ ನ್ಯಾಯಾಧೀಶೆ ಸರಿತಾ.ಡಿ , ಸೀನಿಯರ್ ಸಿವಿಲ್ ನ್ಯಾಯಾಧೀಶೆ ಪ್ರಕೃತಿ ಕಲ್ಯಾಣಪುರ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ದೇವರಾಜ್. ವೈ.ಹೆಚ್, ಸಿವಿಲ್ ನ್ಯಾಯಾಧೀಶ ಶಿವಣ್ಣ.ಹೆಚ್.ಆರ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಯೋಗೇಂದ್ರ ಶೆಟ್ಡಿ ಲೋಕ್ ಅದಾಲತ್ ನಲ್ಲಿ ವ್ಯಾಜ್ಯಗಳ ಇತ್ಯರ್ಥಪಡಿಸಿದರು.
ಪುತ್ತೂರು ವಕೀಲರ ಸಂಘ ಈ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ವ್ಯಾಜ್ಯಗಳ ತ್ವರಿತ ವಿಲೇವಾರಿಗೆ ಸಹಕರಿಸಿದ್ದಾರೆ. ಮಧ್ಯಸ್ತಿಕೆಯ ಮೂಲಕ ಬಗೆಹರಿಸಬಹುದಾದ ವ್ಯಾಜ್ಯಗಳನ್ನು ಲೋಕ್ ಅದಾಲತ್ ನಲ್ಲಿ ಇತ್ಯರ್ಥಪಡಿಸಲು ತಮ್ಮ ಕ್ಲೈಂಟ್ ಗಳಿಗೆ ಮನವರಿಕೆ ಮಾಡುವ ಕೆಲಸವನ್ನೂ ಮಾಡುವ ಮೂಲಕ ನ್ಯಾಯಾಲಯದ ಮೇಲಿರುವ ವ್ಯಾಜ್ಯಗಳ ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ.





