Published
8 months agoon
By
Akkare News
ಬೆಳ್ತಂಗಡಿ: ಪೊರ್ಕಳ ಮೀಸಲು ರಕ್ಷಿತಾರಣ್ಯ ಹಾಗೂ ನಿಡ್ಲೆ ರಕ್ಷಿತಾರಣ್ಯದ ವ್ಯಾಪ್ತಿಯ ಪೆರಿಯಶಾಂತಿ, ನಿಡ್ಲೆ ರಸ್ತೆಯುದ್ದಕ್ಕೂ ಇದ್ದ ಅನೇಕ ಅನಧಿಕೃತ ಗೂಡಂಗಡಿಗಳನ್ನು ಜು. 21ರಂದು ತೆರವುಗೊಳಿಸಲಾಯಿತು.



ಕೊಕ್ಕಡದಲ್ಲಿ ಆನೆ ದಾಳಿಗೆ ಸಂಬಂಧಿಸಿದಂತೆ ಅವುಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಗೆ ಅನಧಿಕೃತ ಗೂಡಂಗಡಿಗಳಿಂದ ಎಸೆಯುತ್ತಿದ್ದ ತ್ಯಾಜ್ಯವು ಅಡ್ಡಿಯಾಗಿತ್ತು. ಜೂ. 27ರಂದು ಪ್ರಧಾನಮಂತ್ರಿ ಕಾರ್ಯಾಲಯದಿಂದ ಸೂಚನೆ ಬಂದಿರುವ ಮೇರೆಗೆ ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಪೆರಿಯಶಾಂತಿ, ಪಾರ್ಪಿಕಲ್ಲು, ನಿಡ್ಲೆ, ಕುದ್ರಾಯವರೆಗಿನ ಮೀಸಲು ಅರಣ್ಯ ಪ್ರದೇಶದಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಬದಿಯ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಮೌಖಿಕ ಆದೇಶ ನೀಡಲಾಗಿತ್ತು.


ಗೂಡಂಗಡಿ ನಡೆಸುತ್ತಿದ್ದವರು ಕಾಲಾವಕಾಶ ಕೋರಿದ್ದು, ಜುಲೈ 15ರ ಒಳಗೆ ತಾವು ತೆರವುಗೊಳಿಸುವುದಾಗಿ ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದರು. ಆದರೆ 15 ದಿನ ಕಳೆದರೂ ತೆರವುಗೊಳಿಸದ ಕಾರಣ ಹಾಗೂ ಈ ಪ್ರದೇಶದಲ್ಲಿ ಕಾಡಾನೆಗಳು ದಾಳಿ ನಡೆಸುತ್ತಿದ್ದು, ರಸ್ತೆ ಬದಿ ವ್ಯಾಪಾರಕ್ಕೆ ಇಟ್ಟಿರುವ ಅನಾನಸು ಮತ್ತು ಹಲಸಿನ ಹಣ್ಣು ಸಹಿತ ಇತರ ಹಣ್ಣುಗಳನ್ನು ತಿನ್ನಲು ಆನೆಗಳು, ಗೂಡಂಗಡಿ ಬಳಿ ಬರುತ್ತಿದ್ದು, ಇದರಿಂದ ಆನೆ ಹಿಮ್ಮೆಟ್ಟಿಸುವ ಕಾರ್ಯಕ್ಕೆ ಹಿನ್ನಡೆಯಾಗುತ್ತಿತ್ತು.

.
ಜುಲೈ 20ರ ಮಧ್ಯಾಹ್ನದ ಒಳಗೆ ಗೂಡಂಗಡಿ ವಾರಸುದಾರರೇ ತೆರವುಗೊಳಿಸುವಂತೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳು ಸೂಚಿಸಿದ್ದರು. ಇದಕ್ಕೆ ಕೆಲವರು ಸ್ಪಂದಿಸಿ ಅಂಗಡಿ ತೆರವುಗೊಳಿಸಿದರೆ, ಇನ್ನು ಕೆಲವರು ಹಾಗೆಯೇ ಇದ್ದರು. ಈ ಹಿನ್ನೆಲೆಯಲ್ಲಿ ಜುಲೈ 21ರ ಬೆಳಗ್ಗೆ ಎಸಿಎಫ್ ಸುಬ್ಬಯ್ಯ ನಾಯ್ಕ… ನೇತೃತ್ವದಲ್ಲಿ ತೆರವು ಕಾರ್ಯ ನಡೆಯಿತು. ಕಾರ್ಯಾಚರಣೆಯಲ್ಲಿ ಪೊರ್ಕಳ, ನಿಡ್ಲೆ ವ್ಯಾಪ್ತಿಯ 58 ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು.





