Published
7 months agoon
By
Akkare News
ಅಪ್ಪ ಮಾಡಿದ್ದ ಸಾಲಕ್ಕೆ ಮಗ ಭದ್ರತೆಯಾಗಿ ಚೆಕ್ ನೀಡಿದ್ದರೆ, ಆತನೂ ಈ ಸಾಲಕ್ಕೆ ಬಾಧ್ಯಸ್ಥನಾಗುತ್ತಾನೆ ಹಾಗೂ ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್ ಪ್ರಕಾರ ಮಗ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.


“ಪ್ರಸಾದ್ ರಾಯ್ಕರ್ ವಿರುದ್ಧ ಬಿ.ಟಿ. ದಿನೇಶ್” ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.

ದಾವಣಗೆರೆಯ ಬಿ.ಟಿ. ದಿನೇಶ್ ಎಂಬವರು ತಮ್ಮ ಅಪ್ಪ ಮಾಡಿದ್ದ ಸಾಲವನ್ನು ತೀರಿಸುವುದಾಗಿ ಭರವಸೆ ನೀಡಿದ್ದು, ಈ ಸಾಲದ ಪಾವತಿಯ ಖಾತ್ರಿಯಾಗಿ ಚೆಕ್ಕಗಳನ್ನು ನೀಡಿದ್ದರು. ಈ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಫಿರ್ಯಾದಿ ಪ್ರಸಾದ್ ರಾಯ್ಕರ್ ಚೆಕ್ ಬೌನ್ಸ್ ಕೇಸು ದಾಖಲಿಸಿದ್ದರು.

ದೂರಿನ ವಿಚಾರಣೆ ನಡೆಸಿದ್ದ ದಾವಣಗೆರೆ ಜೆಎಂಎಫ್ಸಿ ನ್ಯಾಯಾಲಯ ಅಪ್ಪನ ಕಾನೂನು ಬದ್ಧ ವಾರಿಸುದಾರರಾದ ಮಗ ಸಾಲ ಮರುಪಾವತಿ ಮಾಡಬೇಕು ಎಂದು ಆದೇಶಿಸಿತ್ತು. ಆದರೆ, ಸೆಷನ್ಸ್ ನ್ಯಾಯಾಲಯ ಈ ತೀರ್ಪನ್ನು ರದ್ದುಪಡಿಸಿ, ಆರೋಪಿಯನ್ನು ಖುಲಾಸೆಗೊಳಿಸಿತ್ತು.
ಇದನ್ನು ಪ್ರಶ್ನಿಸಿ ಹೈಕೋರ್ಟ್ ಮುಂದೆ ದೂರುದಾರ ಪ್ರಸಾದ್ ರಾಯ್ಕರ್ ಮೇಲ್ಮನವಿ ಸಲ್ಲಿಸಿದ್ದರು.




ಚೆಕ್ ನೀಡಿದ ಬಳಿಕ ಕೇವಲ 10 ಸಾವಿರ ರೂ. ನೀಡಿದ್ದು, ಆ ಬಳಿಕ ತಮ್ಮ ತಂದೆ ಮಾಡಿದ ಸಾಲಕ್ಕೆ ತಾನು ಬಾಧ್ಯಸ್ಥನಲ್ಲ ಎಂದು ಹೇಳಿರುವುದು ಸರಿಯಲ್ಲ. ಎನ್.ಐ. ಕಾಯ್ದೆಯಡಿ ಅಪ್ಪನ ಸಾಲಕ್ಕೆ ಬಾಧ್ಯಸ್ಥನಾಗಿ ಮಗ ಚೆಕ್ ನೀಡಿದ್ದರೆ ಆತನೂ ಈ ಸಾಲದ ಮರುಪಾವತಿಗೆ ಹೊಣೆಗಾರ ಎಂದು ನ್ಯಾಯಪೀಠ ತಿಳಿಸಿತು.





