Published
4 weeks agoon
By
Akkare News
ಲಿ೦ಗಸುಗೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದಿಕ್ಕು ತಪ್ಪಿ ನಿಗದಿತ ಹೆಲಿಪ್ಯಾಡ್ ಬಿಟ್ಟು ಬೇರೆ ಹೆಲಿಪ್ಯಾಡ್ ನಲ್ಲಿ ಇಳಿದ ಕಾರಣ ಅಧಿಕಾರಿಗಳು ತಬ್ಬಿಬ್ಬಾದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಭಾನುವಾರ ನಡೆದಿದೆ.


ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಮೊಮ್ಮಗ ಹಾಗೂ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಅವರ ಪುತ್ರನ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಮಿಸಿದ್ದು ಅವರ ಹೆಲಿಕಾಪ್ಟರ್ ಇಳಿಯಲು ರಾಯಚೂರು ರಸ್ತೆಯಲ್ಲಿ 2 ಹೆಲಿಪ್ಯಾಡ್ ನಿರ್ಮಿಸಲಾಗಿತ್ತು.
ಅದೇ ರೀತಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಲಿಕಾಪ್ಟರ್ ಇಳಿಯಲು ಕಲಬುರಗಿ ರಸ್ತೆಯ ಶಾಸಕ ಮಾನಪ್ಪ ವಜ್ಜಲ್ ಅವರ ಹೆಲಿಪ್ಯಾಡ್ನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಅಂತೆಯೇ ಸಿಎಂ ಹಾಗೂ ಡಿಸಿಎಂ ಇಳಿಯಲಿದ್ದ ಹೆಲಿಪ್ಯಾಡ್ ನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಶಿಷ್ಟಾಚಾರ ಪ್ರಕಾರ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದರೆ, ಸಚಿವ ಜಾರಕಿಹೊಳಿ ಅವರಿಗೆ ಬೇಕಾಗುವ ಭದ್ರತೆ, ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕೆಲ ಗೊಂದಲದಿಂದ ಜಾರಕಿಹೊಳಿ ಹೆಲಿಕಾಪ್ಟರ್ಗೆ ನಿಗದಿಯಾಗಿದ್ದ ಹೆಲಿಪ್ಯಾಡ್ ನಲ್ಲಿ ಸಿಎಂ ಸಿದ್ಧರಾಮಯ್ಯ ಹೆಲಿಕಾಪ್ಟರ್ ಇಳಿದಿದೆ.

ಜಾರಕಿಹೊಳಿ ಬದಲು ಸಿದ್ಧರಾಮಯ್ಯ ಹೆಲಿಕಾಪ್ಟರ್ ನಿಂದ ಇಳಿಯುತ್ತಿರುವುದನ್ನು ಕಂಡು ನೆರೆದಿದ್ದ ಮುಖಂಡರಿಗೆ ದಿಗ್ಭ್ರಮೆಯಾಗಿದೆ. ಕೆಪಿಸಿಸಿ ಸದಸ್ಯ ಅಮರಗುಂಡಪ್ಪ ಮೇಟಿ ಸ್ವಾಗತಿಸಿದ ಬಳಿಕ ಸಚಿವ ಜಾರಕಿಹೊಳಿಗೆ ಒದಗಿಸಲಾಗಿದ್ದ ಭದ್ರತಾ ಸಿಬ್ಬಂದಿ, ಎಸ್ಕಾರ್ಟ್ ನಲ್ಲಿ ಸಿದ್ಧರಾಮಯ್ಯ ಮದುವೆ ಸಮಾರಂಭಕ್ಕೆ ಬಂದರು.

3 ಸುತ್ತ ಹೊಡೆದ ಜಾರಕಿಹೊಳಿ ಕಾಪ್ಟರ್
ಇನ್ನೊಂದೆಡೆ ನಿಗದಿಯಾಗಿದ್ದ ಹೆಲಿಪ್ಯಾಡ್ ನಲ್ಲಿ ಸಿಎಂ ಹೆಲಿಕಾಪ್ಟರ್ ಇಳಿದಿದ್ದ ಕಾರಣ ಸಚಿವ ಸತೀಶ ಜಾರಕಿಹೊಳಿ ಅವರ ಹೆಲಿಕಾಪ್ಟರ್ ನ ಪೈಲೆಟ್ ಗೆ ಇಳಿಸಲು ಜಾಗ ಸಿಗದೇ ಆಗಸದಲ್ಲಿ ಮೂರು ಸುತ್ತು ಹಾಕಿದರು. ನಂತರ ಸಿಎಂ ಹೆಲಿಕಾಪ್ಟರ್ ಗೆ ನಿಗದಿ ಮಾಡಿದ್ದ ಹೆಲಿಪ್ಯಾಡ್ ನಲ್ಲಿ ಜಾರಕಿಹೊಳಿ ಹೆಲಿಕಾಪ್ಟರ್ ಇಳಿಸಲಾಯಿತು.




