Published
17 hours agoon
By
Akkare News
ಪುತ್ತೂರು: ಪರಿಸರದ ಬಗ್ಗೆ ಕಾಳಜಿ ವಹಿಸಿ ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಪರಿಸರವನ್ನು ಹಸಿರಾಗಿಸಿದರೆ ಮಾತ್ರ ನಮಗೆ ಉಸಿರಾಡಲು ಸಾಧ್ಯ ಎಂದು ಶಾಸಕ ಅಶೋಕ್ ರೈ ಹೇಳಿದರು.
ಬನ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುತ್ತೂರು ಅರಣ್ಯ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ವಿಶ್ವ ಪರಿಸರ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಮರಗಳ ನಾಶದಿಂದ ಪರಿಸರ ನಾಶವಾಗುವುದರ ಜೊತೆಗೆ ಉಸಿರಾಟಕ್ಕೂ ತೊಂದರೆಯಾಗಲಿದೆ. ಈಗಾಗಲೇ ದೊಡ್ಡ ನಗರಗಳಲ್ಲಿ ಸ್ವಚ್ಛ ಗಾಳಿ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮರ, ಗಿಡಗಳ ಜೊತೆಗೆ ಸ್ನೇಹ ಇಟ್ಟುಕೊಂಡರೆ ಮಾತ್ರ ಪರಿಸರದ ಬಗ್ಗೆ ಕಾಳಜಿ ಇರಲು ಸಾಧ್ಯ ಎಂದರು.

ಕಾಡುಪ್ರಾಣಿಗಳ ಆಹಾರ ಕಸಿಯಬೇಡಿ:
ಕಾಡು ನಾಶದಿಂದ ಕಾಡುಪ್ರಾಣಿಗಳು ನಾಡಿಗೆ ಬರುತ್ತಿವೆ. ಅವುಗಳ ಆಹಾರವನ್ನು ಕಸಿಯುವ ಕೆಲಸ ಮಾಡಬಾರದು. ಪ್ರಾಣಿಗಳ ಆಹಾರ ಕಸಿದರೆ ಅವು ನಮ್ಮ ಆಹಾರವನ್ನು ಕಸಿಯುತ್ತವೆ. ಇಲ್ಲಿ ಬದುಕುವ ಹಕ್ಕು ಮನುಷ್ಯನಿಗೆ ಮಾತ್ರವಲ್ಲ, ಪ್ರಾಣಿ-ಪಕ್ಷಿಗಳಿಗೂ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳ ಹೆಸರಿನಲ್ಲಿ ಗಿಡ ನೆಡಿ:
ನಿಮ್ಮ ಮಕ್ಕಳ ಹೆಸರಿನಲ್ಲಿ ಮನೆಯಂಗಳದಲ್ಲಿ ಕನಿಷ್ಠ ಒಂದು ಗಿಡವನ್ನಾದರೂ ನೆಡಿ. ಇದರಿಂದ ಮಕ್ಕಳಿಗೆ ಮರಗಿಡಗಳ ಬಗ್ಗೆ ಪ್ರೀತಿ ಹುಟ್ಟುತ್ತದೆ. ಶಾಲಾ ಆವರಣದಲ್ಲಿ ಗಿಡ ನೆಟ್ಟರೆ ಸಾಲದು, ಬೇಸಿಗೆಯಲ್ಲಿ ನೀರುಣಿಸಿ ಪೋಷಿಸಬೇಕು ಎಂದರು.

ರಸ್ತೆ ಬದಿ ಗಿಡಕ್ಕೆ ಹಾನಿ ಮಾಡಿದರೆ ಕಠಿಣ ಕ್ರಮ:
ರಸ್ತೆ ಬದಿಗಳಲ್ಲಿ ಅರಣ್ಯ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯಿಂದ ನೆಟ್ಟ ಹಣ್ಣಿನ ಗಿಡಗಳಿಗೆ ಯಾರೇ ಹಾನಿ ಮಾಡಿದರೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪುತ್ತೂರು-ಉಪ್ಪಿನಂಗಡಿ ರಸ್ತೆ ಬದಿ ಎರಡು ವರ್ಷದ ಹಿಂದೆ ನೆಟ್ಟ ಮಾವಿನ ಗಿಡಗಳಲ್ಲಿ ಕೆಲವನ್ನು ಯಾರೋ ನಾಶ ಮಾಡಿದ್ದು, ಅದೇ ಸ್ಥಳದಲ್ಲಿ ಮತ್ತೆ ಗಿಡ ನೆಡಲಾಗಿದೆ ಎಂದು ಶಾಸಕರು ಹೇಳಿದರು.
ವೇದಿಕೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ಅರಣ್ಯ ಸಂರಕ್ಷಣಾಧಿಕಾರಿ ಕಿರಣ್ ಬಿ.ಎನ್, ಬನ್ನೂರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಗುರುಪ್ರಸಾದ್ ಆಚಾರ್ಯ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಅಶ್ರಫ್ ಸ್ವಾಗತಿಸಿ ವಂದಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.




