Published
7 hours agoon
By
Akkare News– ಆ.15 ರಿಂದ ನಿಷೇಧ ಜಾರಿ
– 2 ತಿಂಗಳ ಒಳಗಡೆ ಪ್ಲಾಸ್ಟಿಕ್ ಪದಾರ್ಥಗಳನ್ನು ಖಾಲಿ ಮಾಡಬೇಕು
ಬೆಂಗಳೂರು: ಆಗಸ್ಟ್ 15ರಿಂದ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ನೀರಿನ ಬಾಟಲ್ ಸೇರಿದಂತೆ ಎಲ್ಲಾ ಬಗೆಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಲಾಗುತ್ತದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಮುಜರಾಯಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಗಸ್ಟ್ 15 ರಿಂದ ಪ್ಲಾಸ್ಟಿಕ್ ಮುಕ್ತ ದೇವಾಲಯ ಪ್ರಾರಂಭ ಮಾಡುತ್ತಿದ್ದೇವೆ. ದೇವಾಲಯಗಳಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಸೂಚಿಸಿದರು.
ಈ ಆದೇಶ ಜಾರಿಗೆ 2 ತಿಂಗಳು ಸಮಯ ಕೊಡಲಾಗಿದ್ದು, ಈಗಾಗಲೇ ಪ್ಲಾಸ್ಟಿಕ್ ಪದಾರ್ಥಗಳು ತೆಗೆದುಕೊಂಡಿದ್ದರೆ ಅದನ್ನು ಬಳಕೆ ಮಾಡಬಹುದು. ಆಗಸ್ಟ್ 15 ರಿಂದ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಮುಜರಾಯಿ ವ್ಯಾಪ್ತಿಯ ದೇವಾಲಯಗಳ ಮಾಹಿತಿಯನ್ನು 3 ತಿಂಗಳ ಒಳಗೆ ಕೊಡಬೇಕು. 3 ತಿಂಗಳ ಒಳಗೆ ಬಾಕಿ ಇರುವ 20 ಸಾವಿರ ಎಕರೆ ದೇವಾಲಯ ಜಮೀನು ಇಂಡೀಕರಣ ಆಗಬೇಕು.
ಗ್ರಾಮಾಂತರ ಮತ್ತು ನಗರ ಭಾಗದಲ್ಲಿ ಇರುವ ಮುಜರಾಯಿ ದೇವಾಲಯಗಳ ಆಸ್ತಿಗಳನ್ನ ಪ್ರತ್ಯೇಕ ಸರ್ವೆ ಮಾಡಬೇಕು. ದೇವಸ್ಥಾನ ಹೆಸರಿನಲ್ಲಿ ಖಾತೆ, ಆಸ್ತಿ ಪತ್ರ ದಾಖಲೆಗಳು ಸರಿಯಾಗಿ ಇರದಿದ್ದರೆ ಎಲ್ಲಾ ದೇವಾಲಯದ ಜಾಗ 3 ತಿಂಗಳ ಒಳಗಡೆ ಸರ್ವೆ ಮಾಡಿ ನೋಟಿಫಿಕೇಶನ್ ಮಾಡಲು ಸೂಚನೆ.
ಅರ್ಚಕರಿಗೆ ತಸ್ತೀಕ್ ನೇರ ವರ್ಗಾವಣೆ ಮೂಲಕ ನೀಡಲು ಕ್ರಮ. ಈಗ 25 ಸಾವಿರ ಅರ್ಚಕರ ಪೈಕಿ 14 ಸಾವಿರ ಅರ್ಚಕರು ಮಾಹಿತಿ ಕೊಟ್ಟಿದ್ದಾರೆ. ಉಳಿದವರು ಬೇಗ ಮಾಹಿತಿ ಕೊಟ್ಟರೆ ಅವರಿಗೂ DBT ಮೂಲಕ ತಸ್ತೀಕ್ ನೀಡಲು ಕ್ರಮ.
31 ಜಿಲ್ಲೆಗಳಲ್ಲಿ ಧಾರ್ಮಿಕ ಪರಿಷತ್ ರಚನೆಗೆ ಕ್ರಮಕ್ಕೆ ಸೂಚನೆ ನೀಡಲಾಗಿದೆ. 8 ಜಿಲ್ಲೆಯಲ್ಲಿ ಮಾತ್ರ ಧಾರ್ಮಿಕ ಪರಿಷತ್ ರಚನೆಯಾಗಿದ್ದು ಉಳಿದ ಕಡೆ ಶೀಘ್ರವೇ ಮಾಡಬೇಕು.