Published
16 hours agoon
By
Akkare News
ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಹತ್ತು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆದರೆ, ಇಂತಹ ಅತ್ಯಂತ ಸೂಕ್ಷ್ಮ ಹಾಗೂ ದಾರುಣ ಘಟನೆಯ ತನಿಖೆ ನಡೆಸುವಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಮೂವರು ಐಪಿಎಸ್ (IPS) ಅಧಿಕಾರಿಗಳು ನಡೆದುಕೊಂಡ ರೀತಿ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ಅವರು ಆ ಮೂವರನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು (Suspend) ಮಾಡಿ ಆದೇಶಿಸಿದ್ದಾರೆ.

ಅಸಲಿಗೆ ನಡೆದಿದ್ದೇನು? ಕೋಯಂಬತ್ತೂರು ಜಿಲ್ಲೆಯಲ್ಲಿ 10 ವರ್ಷದ ಬಾಲಕಿಯೊಬ್ಬಳನ್ನು ದುಷ್ಕರ್ಮಿಗಳು ಅಪಹರಿಸಿ, ಅತ್ಯಂತ ಕ್ರೂರವಾಗಿ ಅತ್ಯಾಚಾರ ನಡೆಸಿ ಕೊಂದಿದ್ದರು. ಈ ಘಟನೆ ತಮಿಳುನಾಡಿನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಮುಖ್ಯಮಂತ್ರಿ ವಿಜಯ್ ಅವರ ಕಟ್ಟುನಿಟ್ಟಿನ ಆದೇಶದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದರು.
ಇದರ ಬೆನ್ನಲ್ಲೇ, ಪ್ರಕರಣದ ವಿವರಗಳನ್ನು ಮಾಧ್ಯಮಗಳಿಗೆ ತಿಳಿಸಲು ಒಬ್ಬರು ಮಹಿಳಾ ಐಜಿ (IG) ಅಧಿಕಾರಿ ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳು ಜಂಟಿ ಪತ್ರಿಕಾಗೋಷ್ಠಿ ಕರೆದಿದ್ದರು. ಆದರೆ, ಸುದ್ದಿಗೋಷ್ಠಿ ಆರಂಭವಾಗುವ ಮುನ್ನ ಈ ಮೂವರು ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿಯಿಂದ ಒಬ್ಬರಿಗೊಬ್ಬರು ಜೋಕ್ ಮಾಡುತ್ತಾ, ನಗುತ್ತಾ ಕಾಲ ಕಳೆದಿದ್ದಾರೆ. ವಿಶೇಷವಾಗಿ ಆ ಮಹಿಳಾ ಐಜಿ ಅಧಿಕಾರಿ, ಸಂತ್ರಸ್ತೆಯ ನೋವನ್ನು ಮರೆತು ನಗುನಗುತ್ತಾ ಮುಖದ ಮೇಲೆ ಯಾವುದೇ ಗಂಭೀರತೆ ಇಲ್ಲದೆ ವರ್ತಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ: ಈ ಅಧಿಕಾರಿಗಳು ನಗುತ್ತಿರುವ ದೃಶ್ಯಗಳು ಮಾಧ್ಯಮಗಳು ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟಿಜನ್ಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದರು. “ಒಂದು ಮಗು ಸತ್ತಾಗಲೂ ನಿಮಗೆ ಕನಿಷ್ಠ ಮಾನವೀಯತೆ ಇಲ್ಲವೇ? ನೀವೂ ಒಬ್ಬ ಮಹಿಳೆ, ನಿಮಗೂ ಮಕ್ಕಳಿರಬಹುದು. ನಿಮ್ಮ ಸ್ವಂತ ಮಗಳಿಗೆ ಹೀಗಾಗಿದ್ದರೆ ಹೀಗೆಯೇ ನಗುತ್ತಿದ್ದಿರಾ?” ಎಂದು ಸಾರ್ವಜನಿಕರು ಆ ಐಜಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಆ್ಯಕ್ಷನ್ ತಗೊಂಡ ಸಿಎಂ ವಿಜಯ್ ಈ ವಿಷಯ ಮುಖ್ಯಮಂತ್ರಿ ವಿಜಯ್ ಅವರ ಗಮನಕ್ಕೆ ಬರುತ್ತಿದ್ದಂತೆ ಅವರು ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನ ತೋರಿದ ಆ ಮೂವರೂ ಐಪಿಎಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.




