Published
15 hours agoon
By
Akkare News
ಮಂಗಳೂರು::ನಗರದಲ್ಲಿ ಬಾಂಗ್ಲಾದೇಶಿಗಳ ಅಕ್ರಮ ವಾಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಸರಿಯಾದ ಕ್ರಮ ಜರುಗಿಸದಿದ್ದಲ್ಲಿ ಬೆಂಗಳೂರು ಮಾದರಿಯಲ್ಲಿ ನಾವೇ ಕಾರ್ಯಾಚರಣೆ ಮಾಡುತ್ತೇವೆ ಎಂದು ರಾಷ್ಟ್ರರಕ್ಷಣಾ ಪಡೆಯ ಸಂಚಾಲಕ, ಕೊಲೆ ಪ್ರಕರಣದ ಆರೋಪಿ ಪುನೀತ್ ಕೆರೆಹಳ್ಳಿ ನೀಡಿರುವ ಹೇಳಿಕೆಯ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಕಾನೂನು ಮಾಹಿತಿಯೊಂದಿಗೆ ಎಚ್ಚರಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶಿಗಳ ಬಗ್ಗೆ ಮಾಹಿತಿ ನೀಡಲು ಯಾರಾದರೂ ಆಸಕ್ತಿ ಹೊಂದಿದ್ದರೆ ಪೊಲೀಸ್ ಇಲಾಖೆಯು ಅವರನ್ನು ಸ್ವಾಗತಿಸುತ್ತದೆ.
ಅಕ್ರಮವಾಸಿಗಳನ್ನು ಗಡೀಪಾರು ಮಾಡಲು ಕೂಡ ಬಯಸುತ್ತೇವೆ. ಆದರೆ ಅಕ್ರಮವಾಸಿಗಳನ್ನು ಪರಿಶೀಲಿಸುವ ಮತ್ತು ಬಂಧಿಸುವ ಅಧಿಕಾರ ಪೊಲೀಸರಿಗೆ ಮಾತ್ರ ಇರುತ್ತದೆ. ಬೇರೆ ಯಾರಾದರೂ ಪೊಲೀಸ್ ಇಲಾಖೆಯ ಕೆಲಸ ಮಾಡಲು ಪ್ರಯತ್ನಿಸಿದರೆ, ಯಾವುದೇ ದೈಹಿಕ ಹಲ್ಲೆ ಮಾಡಿದರೆ ಸೆ.341 ಮತ್ತು 506ರ ಅನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಕಳೆದ ವರ್ಷ ಯಾರೋ ಒಬ್ಬರು ಅಂತಹ ಪ್ರಯತ್ನ ಮಾಡಿ ಪೊಲೀಸ್ ಇಲಾಖೆಯ ಸೂಚನೆಯನ್ನು ಮೀರಿದ್ದಕ್ಕಾಗಿ ಜೈಲಿಗೆ ಹೋಗಿದ್ದರು. ಇಂದು ಯಾರೋ ಒಬ್ಬರು ಖಾಸಗಿ ರಕ್ಷಣೆಯ ಹಕ್ಕನ್ನು ಬಳಸುತ್ತೇವೆ ಎಂದು ಹೇಳಿದ್ದಾರೆ. ಖಾಸಗಿ ರಕ್ಷಣೆಯ ಹಕ್ಕು ತಕ್ಷಣವೇ ಸಂಭವಿಸುವ ವಿಷಯ. ಅದು ಯೋಜಿತವಲ್ಲ. ಸುದ್ದಿಗಾರರ ಜೊತೆ ಮಾತನಾ ಡಿದ ಬಳಿಕ ಖಾಸಗಿ ರಕ್ಷಣೆಯ ಹಕ್ಕಿನ ಹೆಸರಿನಲ್ಲಿ ಜನರ ಮೇಲೆ ದಾಳಿ ಮಾಡಲು ಮುಂದಾದರೆ ಅದು ಯೋಜಿತ ದಾಳಿಯಾಗುತ್ತದೆ. ಖಾಸಗಿ ರಕ್ಷಣೆಯ ಹಕ್ಕನ್ನು ಪ್ರತಿಪಾದಿಸುವ ವ್ಯಕ್ತಿಯು ಬಂಧನದ ನಂತರ ನ್ಯಾಯಾಲಯದಲ್ಲಿ ಸಾಬೀತುಪಡಿಸಬೇಕು ಎಂದು ಕಾನೂನು ಹೇಳುತ್ತದೆ ಎಂದು ಪೊಲೀಸ್ ಆಯುಕ್ತರು ತಿಳುವಳಿಕೆಯ ಎಚ್ಚರಿಕೆ ನೀಡಿದ್ದಾರೆ.





