ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಕರಾವಳಿಯನ್ನು ನಡುಗಿಸಿದ್ದ ಮಹಾ ಪ್ರವಾಹ@50 ವರ್ಷ!-ಇಡೀ ಉಪ್ಪಿನಂಗಡಿ ನೀರಲ್ಲಿ ಮುಳುಗಿತ್ತು

Published

on

1974ರ ಜು. 26ರಂದು ಕರಾವಳಿಯಲ್ಲಿ ಗಂಡಾಂತರಕಾರಿ ವಿದ್ಯಮಾನವೊಂದು ಜರಗಿತ್ತು. ಮೂರು ದಿನಗಳಿಂದ ಎಡೆಬಿಡದೆ ಸುರಿದ ಕುಂಭದ್ರೋಣ ಮಳೆ ಇಡೀ ಕರಾವಳಿ ಯನ್ನು ಮುಳುಗಿಸಿತ್ತು. ನೇತ್ರಾವತಿ, ಕುಮಾರಧಾರೆ, ಗುರುಪುರ, ಸ್ವರ್ಣಾ, ಸೀತಾ ಸೇರಿ ದಂತೆ ಎಲ್ಲ ನದಿಗಳು ಉಕ್ಕೇರಿ ಹರಿದು ಸಮೀ ಪದ ಪೇಟೆ ಪಟ್ಟಣಗಳನ್ನು ಆಪೋಷನ ತೆಗೆದು ಕೊಂಡಿದ್ದವು.

 

ಆವತ್ತು ಸಾವಿರಾರು ಮನೆಗಳು ಉರುಳಿದ್ದವು, ಜೀವಹಾನಿ ಸಂಭವಿಸಿತ್ತು. ಇವ ತ್ತಿಗೂ ಒಂದು ಪೀಳಿಗೆಯ ಜನ ಆ ಮಹಾ ಪ್ರವಾ ಹವನ್ನು ನೆನಪಿಸಿಕೊಂಡು ನಡುಗುತ್ತಾರೆ. ಅಂಥ 1974ರ ಮಾರಿ ಬೊಲ್ಲಕ್ಕೆ ಇಂದಿಗೆ (ಜು. 26) ಐವತ್ತು ವರ್ಷ. ಆ ಮಾರಿ ಬೊಲ್ಲಕ್ಕೆ ಸಾಕ್ಷಿಯಾದ ಕೆಲವರು ನೆನಪುಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ.

1923ರಲ್ಲಿ ಮೊದಲ ಮಾರಿ ಬೊಲ್ಲ

ಒಂದು ಶತಮಾನದ ಹಿಂದೆ ಅಂದರೆ 1923ರಲ್ಲಿಯೇ ಕರಾವಳಿಯ ಅತೀ ದೊಡ್ಡ ಪ್ರವಾಹ ಸೃಷ್ಟಿಯಾಗಿತ್ತು. ಆಗಲೂ ಇದೇ ರೀತಿ
ನದಿಗಳು ಉಕ್ಕಿ ತೀರದ ಪಟ್ಟಣಗಳನ್ನು ಮುಳು ಗಿಸಿದ್ದವು. ಆ ಮಾರಿ ಬೊಲ್ಲಕ್ಕೆ ಸಂಬಂಧಿಸಿ ಕುರುಹುಗಳು, ಐತಿಹ್ಯಗಳು ಸಿಗುತ್ತವೆ. ಆದರೆ, ಕಣ್ಣಾರೆ ಕಂಡವರು ಈಗ ಸಿಗುವುದು ಕಷ್ಟ. ಆದರೆ, 1974ರ ಮಾರಿ ಬೊಲ್ಲಕ್ಕೆ ಚಿತ್ರ ಸಾಕ್ಷಿಗಳಿವೆ. ಬೊಲ್ಲದ ಭಯಾನಕತೆಯನ್ನು ಅನುಭವಿಸಿದ ಒಂದು ಪೀಳಿಗೆಯೇ ನಮ್ಮ ಜತೆಗಿದೆ.

 

ಈಗಲೂ ಜೋರಾಗಿ ಮಳೆ ಬಂದಾಗ ಅವರ ನೆನಪು 1974ಕ್ಕೆ ಓಡುತ್ತದೆ.
1974ರ ಮಹಾಪ್ರವಾಹದ ವರದಿಯನ್ನು ಹೊತ್ತ ಉದಯವಾಣಿ ಪತ್ರಿಕೆಯ ಮುಖಪುಟ ಇದು. ಅಂದಿನ ಭಯಾನಕ ವಿದ್ಯಮಾನಕ್ಕೆ ಸಾಕ್ಷಿ

 

1974: ಎಲ್ಲೆಲ್ಲಿ ಅತೀ ಹೆಚ್ಚು ಹಾನಿ?
*ನೇತ್ರಾವತಿ-ಕುಮಾರಧಾರ ಸಂಗಮದ ಉಪ್ಪಿನಂಗಡಿ ಪಟ್ಟಣ.
*ನೇತ್ರಾವತಿ ತೀರದ ಪಾಣೆ ಮಂಗಳೂರು, ಬಂಟ್ವಾಳ
*ಗುರುಪುರ ನದಿ ತೀರದ ಜೋಕಟ್ಟೆ ಪ್ರದೇಶ
*ಸ್ವರ್ಣಾ ನದಿ ತೀರದ ಉಪ್ಪೂರು, ಕಲ್ಯಾಣಪುರ, ಹೆರ್ಗ
*ಉಡುಪಿ ನಗರದಲ್ಲೂ ಸಾಕಷ್ಟು ನಾಶ, ನಷ್ಟವಾಗಿತ್ತು
*ಉದ್ಯಾವರ, ಕಾಪು ಪ್ರದೇಶದಲ್ಲಿ ಮನೆಗಳೇ ಮುಳುಗಿದ್ದವು
*ಕುಂದಾಪುರ ತಾ|ನ 9 ಗ್ರಾಮಗಳು ನೀರಿನೊಳಗಿದ್ದವು!

ಇಡೀ ಉಪ್ಪಿನಂಗಡಿ ನೀರಲ್ಲಿ ಮುಳುಗಿತ್ತು!

 

ಆವತ್ತು ಬೆಳಗ್ಗೆ ನೇತ್ರಾವತಿ-ಕುಮಾರಧಾರೆ ಸಂಗಮ ಆಗಿತ್ತು. ಸಾಮಾನ್ಯವಾಗಿ ಸಂಗಮದ ಬಳಿಕ ನೀರು ಇಳಿಯುತ್ತದೆ. ಆದರೆ, ಆ ದಿನ ಏರುತ್ತಲೇ ಹೋಯಿತು. ಸಂಜೆ ಹೊತ್ತಿಗೆ ನಮ್ಮ ಮನೆಯಂಗಳಕ್ಕೆ ಬಂದ ನೀರು ರಾತ್ರಿಯಾಗುತ್ತಿ ದ್ದಂತೆಯೇ ಮನೆಯೊಳಗೇ ನುಗ್ಗಿತು. ಆಗ ದೋಣಿ ಮೂಲಕ ನಮ್ಮನ್ನು ಉಪ್ಪಿನಂಗಡಿ ಹೈಸ್ಕೂಲ್‌ ಕಟ್ಟಡಕ್ಕೆ ಸ್ಥಳಾಂತರಿಸಿದರು: ಎನ್ನುತ್ತಾರೆ ಉಪ್ಪಿನಂಗಡಿಯಲ್ಲಿ ವೈದ್ಯರಾಗಿರುವ ಡಾ.ಯತೀಶ್‌ ಶೆಟ್ಟಿ.

ನಮ್ಮದು ಹೊಸ ಮನೆ. 1972ರಲ್ಲಿ ನಿರ್ಮಾಣ ಆಗಿತ್ತು. ನಾನಾಗ ಪ್ರಥಮ ಪಿಯುಸಿ ವಿದ್ಯಾರ್ಥಿ. ಮನೆಯಲ್ಲಿ ಒಟ್ಟು ಆರು ಮಂದಿ ಇದ್ದೆವು. ನಮ್ಮೆಲ್ಲರನ್ನು ದೋಣಿ ಮೂಲಕವೇ ರಕ್ಷಿಸಿದರು. ಇಂತಹ ಪ್ರವಾಹವೊಂದು ಬಂದಿತ್ತು ಅನ್ನುವುದನ್ನು ಈಗಿನ ಪೀಳಿಗೆ ನಂಬುವುದೇ ಕಷ್ಟ. ಇಡೀ ಪೇಟೆ ನೆರೆಯಿಂದ ಮುಳುಗಿ ಹೋಗಿತ್ತು. ಸಿಂಡಿಕೇಟ್‌ ಬ್ಯಾಂಕ್‌ ಇದ್ದ ಸ್ಥಳದ ತನಕವೂ ನೆರೆ ನೀರು ಆವರಿಸಿತ್ತು. ನಮ್ಮ ಮನೆ ಅರ್ಧ ಮುಳುಗಿತ್ತು. ಉಪ್ಪಿನಂಗಡಿ ದೇವಾಲಯದ ಗರ್ಭಗುಡಿ ಒಳಗೂ ನೀರು ಪ್ರವೇಶಿಸಿತ್ತು ಎಂದು ಯತೀಶ್‌ ಶೆಟ್ಟಿ ನೆನಪಿಸಿಕೊಂಡರು.

ನನ್ನ ತಂದೆ ಶೀನಪ್ಪ ಶೆಟ್ಟಿ ಅವರು ಹಳೆ ಬಸ್‌ ನಿಲ್ದಾಣದ ಬಳಿ ಬಾಡಿಗೆ ಕಟ್ಟಡದಲ್ಲಿ ಶಾಪ್‌ ಹೊಂದಿದ್ದರು. ನೆರೆಯಿಂದ ಆ ಕಟ್ಟಡ ಪೂರ್ತಿ ಧರೆಶಾಹಿಯಾಯಿತು. ಜತೆಗೆ ಕಟ್ಟಡ ಮಾಲಕ ನರಸಿಂಹ ಪೈ ಅವರ ಮನೆಯು ಕುಸಿದಿತ್ತು ಎಂದು ಡಾ| ಯತೀಶ್‌ ಶೆಣೈ ನೆನಪಿಸಿಕೊಂಡಿದ್ದಾರೆ.

ಬಿದ್ದ ಮನೆಗಳು,ಎಳೆ ಮಕ್ಕಳ ರಕ್ಷಣೆ
ಮಳೆ ಮತ್ತು ನೆರೆಯಿಂದಾಗಿ ಮಜೂರು, ಪಾದೂರು, ಕರಂದಾಡಿ ಪರಿಸರದಲ್ಲಿ ಹತ್ತಾರು ಮನೆಗಳು ಧರಾಶಾಯಿಯಾಗಿದ್ದವು. ನೆರೆ ಹೆಚ್ಚಿ ತೀವ್ರ ಅಪಾಯಕ್ಕೆ ಸಿಲುಕಿದ್ದ ಮಂಜುನಾಥ ನಾಯ್ಕ್‌ ಮತ್ತು ಅವರ ಮನೆಯಲ್ಲಿದ್ದ ಎಳೆಯ ಮಕ್ಕಳು ಸೇರಿದಂತೆ ಹಲವರನ್ನು ರಕ್ಷಿಸಿದ್ದು ಈಗಲೂ ನೆನಪಿಗೆ ಬರುತ್ತದೆ ಎನ್ನುತ್ತಾರೆ ಪಾದೂರು ಒಡಿಪೆನಿ ನಿವಾಸಿ ರತ್ನಾಕರ ಶೆಟ್ಟಿ ಅವರು. ಆವತ್ತು ಜೀವಭಯದಿಂದ ಒದ್ದಾಡುತ್ತಿದ್ದ ನಾನು ಮತ್ತು ಸಹೋದರ, ಸಹೋದರಿ ಸೇರಿದಂತೆ 7 ಮಂದಿಯನ್ನು ಊರಿನ ಹಿರಿಯರಾದ ರತ್ನಾಕರ ಶೆಟ್ಟಿ, ಸಂಜೀವ ಗುರ್ಮೆ ಮೊದಲಾದವರು ಹೆಗಲಿನಲ್ಲಿ ಹೊತ್ತುಕೊಂಡು ಹೋಗಿ ರಕ್ಷಿಸಿದ್ದರು ಎಂದು ಚಂದ್ರನಗರದ ಪದ್ಮಾವತಿ ನಾಯ್ಕ್‌ ನೆನಪಿಸಿಕೊಂಡಿದ್ದಾರೆ.

ಅಂದು ನಾಗರ ಪಂಚಮಿಯಾಗಿದ್ದು ಎದೆ ಮಟ್ಟದವರೆಗೆ ನೀರಿನಲ್ಲಿ ನಡೆದುಕೊಂಡೇ ಹೋಗಿ ನಾಗ ದೇವರಿಗೆ ತನು ಅರ್ಪಿಸಿದ್ದೆವು ಎಂದರು ಜಗದೀಶ್‌ ರಾವ್‌ ಗುರ್ಮೆ.
ಉಡುಪಿಯಲ್ಲಿ ಹಲವು ಮನೆ ನಾಶ
ಉಡುಪಿಯ ಶೆಟ್ಟಿಬೆಟ್ಟು ಪ್ರದೇಶದಲ್ಲಿ ಹತ್ತಾರು ಮಂದಿ ಅಂದು ಮನೆ ಕಳೆದುಕೊಂಡಿದ್ದರು. ಎಮ್ಮೆಗಳು, ಇತರ ಜಾನುವಾರುಗಳು, ಹಾರ್ಮೋನಿಯಂ ಸೇರಿದಂತೆ ನಾನಾ ವಸ್ತುಗಳು ನೆರೆಯಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಅಸ ಹಾಯಕವಾಗಿ ನೋಡಿದ್ದನ್ನು ಹಲವರು ನೆನ ಪಿಸಿಕೊಂಡಿದ್ದಾರೆ.

ಏನೇನು ನಾಶ? ಎಷ್ಟು ನಷ್ಟ ?
6 ಜನ ಪ್ರಾಣ ಕಳೆದುಕೊಂಡವರು

5000 ಪೂರ್ಣ ನಾಶವಾದ ಮನೆ:

4000 ಭಾಗಶ: ನಾಶವಾದ ಮನೆ:

11,000 ನಿರ್ವಸಿತರಾದವರು:

172 ಮೃತ ಜಾನುವಾರುಗಳು

3500 ಹೆಕ್ಟೇರ್‌ ಕೃಷಿ ನಾಶ

2.72 ಕೋಟಿ ರೂ. ಒಟ್ಟು ನಷ್ಟ

ವಸ್ತುಗಳನ್ನು ಮೊದಲೇ ಸಾಗಿಸಿದ್ದೆವು
ನೇತ್ರಾವತಿ ನದಿ ರೌದ್ರ ರೂಪ ತಾಳಿದ್ದರಿಂದ ಪಾಣೆಮಂಗಳೂರು-ಬಂಟ್ವಾಳ ಪೇಟೆಯಲ್ಲಿ ಅಳೆತ್ತರಕ್ಕೆ ನೀರು ತುಂಬಿತ್ತು. ನೆರೆಯ ಸೂಚನೆ ಮೊದಲೇ ಲಭಿಸಿದ್ದ ಕಾರಣ ಅಗತ್ಯ ಸರಕುಗಳನ್ನು ಹೊತ್ತುಕೊಂಡೇ ಸುರಕ್ಷಿತ ಜಾಗಕ್ಕೆ ಹೋಗಿದ್ದೆವು ಎನ್ನುತ್ತಾರೆ 80ರ ಹರೆಯದ ಪಾಣೆಮಂಗಳೂರಿನ ಎನ್‌. ಪಾಂಡುರಂಗ ಪ್ರಭುಗಳು. ಆಗ ಪ್ರಭುಗಳು ರಿಕ್ಷಾ ಚಾಲಕರಾಗಿದ್ದರು. ನಾವು ಅಗತ್ಯ ವಸ್ತುಗಳನ್ನು ಹಿಡಿದುಕೊಂಡು ಮನೆ ಬಿಟ್ಟಿದ್ದೆವು. ಆದರೆ ನೆರೆ ಇಳಿದ ಬಳಿಕ ಹೋಗಿ ನೋಡಿದಾಗ ನದಿ ಕಿನಾರೆಯಲ್ಲಿದ್ದ ಹಲವರ ಮನೆ ಪಂಚಾಂಗ ಸಮೇತ ಸಂಪೂರ್ಣ ನಾಶವಾಗಿತ್ತು. ಪಾಣೆಮಂಗಳೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಮನೆಗಳನ್ನು ಕಳೆದುಕೊಂಡಿದ್ದರು. ಇಡೀ ಸಮಾಜ ಮುಂದೆ ನಿಂತು ಅವರಿಗೆ ಪುನ ರ್ವಸತಿ ಕಲ್ಪಿಸಿತು ಎನ್ನುತ್ತಾರೆ ಪ್ರಭುಗಳು.

ದೋಣಿಗಳು ಕೊಚ್ಚಿ ಹೋಗಿದ್ದವು
ನಾನಾಗ 10ನೇ ಕ್ಲಾಸ್‌. ಆವತ್ತು ಕಟ್ಟಿ ಹಾಕಿದ್ದ ದೋಣಿಗಳು ಕೊಚ್ಚಿಕೊಂಡು ಹೋಗಿದ್ದವು. ನೆರೆ ಒಂದೇ ಸಮನೆ ಏರುತ್ತಿತ್ತು. ಜನರನ್ನು ದೋಣಿಗಳ ಮೂಲಕ ರಕ್ಷಿಸಲಾಗಿತ್ತು. ಉದ್ಯಾವರ ಗ್ರಾಮದ ಅಂಕುದ್ರು ಭಟ್ರ ಮನೆಯ ವಿಶಾಲವಾದ ಹಟ್ಟಿಯಲ್ಲಿ ಸುಮಾರು 3-4 ಕುಟುಂಬಗಳು ಆಶ್ರಯ ಪಡೆದಿತ್ತು.

ಪ್ರೊ|ವಿ.ಕೆ. ಉದ್ಯಾವರ
ಹೊಳೆದಂಡೆಗೆ ಮಡಲೇ ತಡೆ!
ನನಗೆ ಆಗ ಸುಮಾರು 20 ವರ್ಷ ಪ್ರಾಯ. ಕಟಪಾಡಿ ಏಣಗುಡ್ಡೆ ಗ್ರಾಮದ ವೆಸ್ಟ್‌ ಕೋಸ್ಟ್‌ ರಸ್ತೆಯ (ಹಳೆ ಎಂಬಿಸಿ ರಸ್ತೆ) ಪಶ್ಚಿಮ ಭಾಗದ ಕುದ್ರು ಭಾಗದಲ್ಲಿ ತೀವ್ರ ನೆರೆ ಬಾಧಿತವಾಗಿತ್ತು. ಆ ಭಾಗದ ಸುಮಾರು 10 ಕುಟುಂಬ ತೇಕಲ ತೋಟದಲ್ಲಿದ್ದ ಸುತ್ತು ಮಡಲಿನ ನಮ್ಮ ಮನೆ ಹಾಗೂ ವಿಶಾಲವಾದ ಹಟ್ಟಿಯಲ್ಲಿ ಆಶ್ರಯವನ್ನು ಪಡೆದಿದ್ದರು. ಒಬ್ಬಾಕೆಯ ಹೆರಿಗೆಯೂ ಅಲ್ಲೇ ನಡೆದಿತ್ತು. ಹೊಳೆಗೆ ಮಣ್ಣಿನ ದಂಡೆ ಮಡಲುಗಳೇ ತಡೆಯಾಗಿತ್ತೇ ವಿನಃ ಈಗಿನಂತೆ ನದಿ ದಂಡೆ ಇರಲಿಲ್ಲ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version