Published
2 years agoon
By
Akkare News
ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭಾನುವಾರ ಭಯೋತ್ಪಾದಕರೊಂದಿಗೆ ನಡೆಯುತ್ತಿರುವ ಎನ್ಕೌಂಟರ್ನಲ್ಲಿ ಸೇನೆಯ ವಿಶೇಷ ಪಡೆಗಳ ಜೂನಿಯರ್ ಕಮಿಷನ್ಡ್ ಕಮಿಷನರ್ (ಜೆಸಿಒ) ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಗುಂಡಿನ ಚಕಮಕಿಯಲ್ಲಿ ಇತರ ಮೂವರು ಸೈನಿಕರು ಕೂಡಾ ಗಾಯಗೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಆರಂಭಿಕ ಗುಂಡಿನ ಚಕಮಕಿಯಲ್ಲಿ ನಾಲ್ವರು ಸೇನಾ ಸಿಬ್ಬಂದಿಗೆ ಗಾಯಗಳಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಅಲ್ಲಿ ಒಬ್ಬರು ಗಾಯದ ಕಾರಣಕ್ಕೆ ಮೃತಪಟ್ಟಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಮೃತ ಯೋಧನನ್ನು 2 ಪ್ಯಾರಾ ವಿಶೇಷ ಪಡೆಗಳ ನೈಬ್ ಸುಬೇದಾರ್ ರಾಕೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಇಬ್ಬರು ಗ್ರಾಮ ರಕ್ಷಣಾ ಸಿಬ್ಬಂದಿ (ವಿಡಿಜಿ) ಹತ್ಯೆಯ ನಂತರ ಕಿಶ್ತ್ವಾರ್ನ ಭಾರ್ ರಿಡ್ಜ್ನಲ್ಲಿ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ಸೇನೆ ಮತ್ತು ಪೊಲೀಸರ ಜಂಟಿ ಶೋಧ ತಂಡಗಳು ಬೆಳಗ್ಗೆ 11 ಗಂಟೆ ಸುಮಾರಿಗೆ ಅಡಗಿ ಕುಳಿತಿದ್ದ ಭಯೋತ್ಪಾದಕನ್ನು ತಡೆದಾಗ ಎನ್ಕೌಂಟರ್ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಂಟ್ವಾರಾ ಮತ್ತು ಕೇಶ್ವಾನ್ ಅರಣ್ಯಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಕೇಶ್ವಾನ್ ಅರಣ್ಯದಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಯ ವೇಳೆ ಗುರುವಾರ ಸಂಜೆ ವಿಡಿಜಿಗಳಾದ ನಜೀರ್ ಅಹ್ಮದ್ ಮತ್ತು ಕುಲದೀಪ್ ಕುಮಾರ್ ಅವರ ಮೃತದೇಹಗಳು ಗುಂಡಿನ ಗಾಯಗಳೊಂದಿಗೆ ಪತ್ತೆಯಾಗಿವೆ.
ಭದ್ರತಾ ಪಡೆಗಳಿಂದ ತಡೆಯಲ್ಪಟ್ಟಿದ್ದ ಭಯೋತ್ಪಾದಕರು ಅಹ್ಮದ್ ಮತ್ತು ಕುಮಾರ್ ಹತ್ಯೆಯ ಹಿಂದೆ ಇದ್ದಾರೆ ಎಂದು ಶಂಕಿಸಲಾಗಿದೆ. ಭಯೋತ್ಪಾದಕರ ನಿಖರವಾದ ಸ್ಥಳವನ್ನು ಗುರುತಿಸಲು ಪ್ರದೇಶದಲ್ಲಿ ಇನ್ನೂ ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ. ಈ ನಡುವೆ ಶ್ರೀನಗರ ನಗರದ ಹೊರವಲಯದಲ್ಲಿರುವ ಇಶ್ಬರ್-ನಿಶಾತ್ ಅರಣ್ಯ ಪ್ರದೇಶದಲ್ಲಿ ಭಾನುವಾರ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಪ್ರತ್ಯೇಕ ಎನ್ಕೌಂಟರ್ ನಡೆದಿದೆ ಎಂದು ವರದಿ ಹೇಳಿವೆ.