Published
3 days agoon
By
Akkare Newsಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ (Rakesh Poojary) ಇತ್ತೀಚೆಗೆ ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದರು. ಸದ್ಯ ರಾಕೇಶ್ ಅವರನ್ನೇ ಅವಲಂಬಿಸಿದ್ದ ಕುಟುಂಬವು ದಿಕ್ಕು ತೋಚದಂತಾಗಿದೆ. ಇನ್ನು ರಿಷಬ್ ಶೆಟ್ಟಿ (Rishab Shetty) ನಿರ್ದೇಶನದ ʼಕಾಂತಾರ ಚಾಪ್ಟರ್-1ʼ ಸಿನಿಮಾದಲ್ಲೂ ರಾಕೇಶ್ ಪ್ರಮುಖ ಪಾತ್ರದಲ್ಲಿ ನಟಿಸಿ, ಇತ್ತೀಚೆಗೆ ಶೂಟಿಂಗ್ ಮುಗಿಸಿದ್ದರು. ಆದರೆ, ರಾಕೇಶ್ ಅಂತಿಮ ದರ್ಶನಕ್ಕೆ ರಿಷಬ್ ಸಮೀಪದಲ್ಲೇ ಇದ್ದರೂ ಬರಲಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಕೊನೆಗೂ ರಿಷಬ್ ದಂಪತಿ ರಾಕೇಶ್ ಮನೆಗೆ ತೆರಳಿ ಕುಟುಂಬಸ್ಥರನ್ನ ಭೇಟಿಯಾಗಿದ್ದಾರೆ.
ರಾಕೇಶ್ ಪೂಜಾರಿ ಅವರು ಮೇ 12ರಂದು ಮುಂಜಾನೆ ಕೊನೆಯುಸಿರೆಳೆದಿದ್ದರು. ರಾಕೇಶ್ ನಿಧನರಾಗಿ ಬರೋಬ್ಬರಿ 21 ದಿನಗಳ ನಂತರ ರಿಷಬ್ ಶೆಟ್ಟಿ ರಾಕೇಶ್ ಮನೆಗೆ ಭೇಟಿ ನೀಡಿದ್ದಾರೆ. ರಿಷಬ್ ಜೊತೆಗೆ ಅವರ ಪತ್ನಿ ಪ್ರಗತಿ ಶೆಟ್ಟಿ ಕೂಡ ರಾಕೇಶ್ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ರಾಕೇಶ್ ಅವರ ಕುಟುಂಬಕ್ಕೆ ನೆರವು ನೀಡಿರುವ ಸಾಧ್ಯತೆಯೂ ಇದ್ದು, ಈ ಬಗ್ಗೆ ಖಚಿತವಾದ ಮಾಹಿತಿ ಸಿಕ್ಕಿಲ್ಲ.
ಇನ್ನು ರಾಕೇಶ್ ಪೂಜಾರಿ ಅವರ ಊರಿನ ಸಮೀಪದಲ್ಲೇ ರಿಷಬ್ ಶೆಟ್ಟಿ ಕೂಡ ಇದ್ದರು. ಆದರೂ ರಾಕೇಶ್ ಅಂತಿಮ ದರ್ಶನಕ್ಕೆ ರಿಷಬ್ ಬರಲಿಲ್ಲ, ಅವರಿಗೆ ತಮ್ಮ ಸಿನಿಮಾದಲ್ಲಿ ನಟಿಸಿದ್ದ ಕಲಾವಿದನ ಬಗ್ಗೆ ಇಷ್ಟು ತಾತ್ಸಾರವೇ? ಅಥವಾ ಕಲಾವಿದನ ಸಾವಿಗಿಂತ ಸಿನಿಮಾಗಳೇ ಹೆಚ್ಚಾಯಿತೇ? ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ಆಕ್ರೋಶ ಹೊರಹಾಕಿದ್ದರು. ಈ ಬಗ್ಗೆ ರಿಷಬ್ ಕೂಡ ಎಲ್ಲಿಯೂ ಪ್ರತಿಕ್ರಿಯೆ ನೀಡಿರಲಿಲ್ಲ. ಕೆಲಸದ ಒತ್ತಡದಿಂದ ಅಂತಿಮ ದರ್ಶನಕ್ಕೆ ರಿಷಬ್ ಗೈರಾಗಿರಬಹುದು, ಆದರೆ ಅವರು ಖಂಡಿತವಾಗಿಯೂ ರಾಕೇಶ್ ಕುಟುಂಬವನ್ನು ಭೇಟಿಯಾಗುತ್ತಾರೆ ಎಂದು ಹೇಳಲಾಗಿತ್ತು. ಬರೋಬ್ಬರಿ ಮೂರು ವಾರಗಳ ಬಳಿಕ ರಿಷಬ್, ರಾಕೇಶ್ ಮನೆಗೆ ಭೇಟಿ ನೀಡಿದ್ದಾರೆ.
ಕಾಂತಾರದಲ್ಲಿ ರಾಕೇಶ್ ಪಾತ್ರ ಶಾಶ್ವತ! ರಾಕೇಶ್ ನಿಧನರಾದಾಗ ಅಂತಿಮ ದರ್ಶನಕ್ಕೆ ರಿಷಬ್ ಬರಲಿಲ್ಲವಾದರೂ ಎಕ್ಸ್ನಲ್ಲಿ (ಟ್ವಿಟರ್) ಕಂಬನಿ ಮಿಡಿದಿದ್ದರು. ರಾಕೇಶ್ ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗೂ ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು, ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ, ಮತ್ತೆ ಹುಟ್ಟಿ ಬಾ ಗೆಳೆಯ ಎಂದು ರಿಷಬ್ ಸಂತಾಪ ಸೂಚಿಸಿದ್ದರು. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ಈ ಆಘಾತವನ್ನು ಸಹಿಸುವ ಶಕ್ತಿ ನಿನ್ನ ಕುಟುಂಬಕ್ಕೆ ಕೊಡಲಿ ಎಂದು ಪೋಸ್ಟ್ ಹಂಚಿಕೊಂಡಿದ್ದರು.
ಈಗ ಖುದ್ದಾಗಿ ರಾಕೇಶ್ ಅವರ ಮನೆಗೆ ಭೇಟಿ ನೀಡಿರುವ ರಿಷಬ್ ಅವರು, ಕಲಾವಿದನ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಇನ್ನು ಮುಖ್ಯವಾಗಿ ರಾಕೇಶ್ ತನ್ನ ತಂಗಿಯ ಮದುವೆ ಮಾಡಬೇಕು ಎಂಬ ಕನಸು ಕಂಡಿದ್ದರು. ರಿಷಬ್ ಭೇಟಿ ವೇಳೆ ಈ ವಿಚಾರದ ಬಗ್ಗೆಯೂ ಪ್ರಸ್ತಾಪವಾಗಿದೆ ಎಂದು ಹೇಳಲಾಗುತ್ತಿದೆ. ಮನೆಯ ಆಧಾರಸ್ತಂಭ ಕಳೆದುಕೊಂಡ ರಾಕೇಶ್ ಕುಟುಂಬಕ್ಕೆ ನೆರವಿನ ಭರವಸೆಯೂ ನೀಡಿದ್ದಾರೆ ಎನ್ನಲಾಗಿದೆ.