ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಶಾಲೆ ಹಾಗೂ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ಇಂದು ರಜೆ ಘೋಷಿಸಲಾಗಿತ್ತು. ಆದರೆ, ರಜೆ ಘೋಷಿಸಿದ ದಿನವೇ ಬಿಸಿಲಿನ ವಾತಾವರಣವಿದ್ದ ಕಾರಣ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರ ಆದೇಶ ನಗೆಪಾಟಲಿಗೀಡಾಗಿತ್ತು. ಈ ಬಗ್ಗೆ ಸಾರ್ವಜನಿಕವಾಗಿ ಕೇಳಬಂದ ಟೀಕೆಗಳಿಗೆ ಈಗ ಜಿಲ್ಲಾಧಿಕಾರಿಯವರು ಅಧಿಕೃತವಾಗಿ ಖಡಕ್ ಉತ್ತರ ನೀಡಿದ್ದಾರೆ.ಮಕ್ಕಳ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಹವಾಮಾನ ಇಲಾಖೆಯ ಮುನ್ಸೂಚನೆ ಹಾಗೂ ರೆಡ್ ಅಥವಾ ಆರೆಂಜ್ ಅಲರ್ಟ್ ಇದ್ದಾಗ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತದೆ ಎಂದಿದ್ದಾರೆ. ಕೆಲವರು ರಜೆ ದಿನದಂದು ಬಿಸಿಲಿರುತ್ತದೆ ಮತ್ತು ಮಕ್ಕಳ ಓದಿಗೆ ತೊಂದರೆಯಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.
ಎಲ್ಲರೂ ಅರ್ಥ ಮಾಡಿಕೊಳ್ಳಬೇಕು
ಆದರೆ, ರಜೆ ದಿನದಂದು ಮಳೆ ಬರಲಿ ಅಥವಾ ಬಿಡಲಿ, ಮಕ್ಕಳ ಭವಿಷ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಯಾವುದೇ ರಾಜಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುನ್ನೆಚ್ಚರಿಕೆ ನೀಡುವುದು ಯಾವುದೇ ಅನಾಹುತಗಳು ಸಂಭವಿಸಬಾರದು ಎಂಬ ಹಿತದೃಷ್ಟಿಯಿಂದ ಮಾತ್ರ ಎಂದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಪಠ್ಯಕ್ರಮ ಮುಗಿಸಲು ಕಷ್ಟ ಎನ್ನುವವರಿಗೆ ಡಿಸಿ ತಿರುಗೇಟು
ಮಳೆಗಾಲದಲ್ಲಿ ರಜೆಗಳು ಜಾಸ್ತಿಯಾದರೆ ಪಠ್ಯಕ್ರಮ ಪೂರ್ಣಗೊಳಿಸಲು ಆಗುವುದಿಲ್ಲ ಎಂಬ ಶಿಕ್ಷಕರು ಮತ್ತು ಪೋಷಕರ ವಾದವನ್ನು ತಾವು ಒಪ್ಪುವುದಿಲ್ಲ ಎಂದು ಡಿಸಿ ತಿಳಿಸಿದ್ದಾರೆ. ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಬಸ್ಸಿನಿಂದ ಬಿದ್ದು ಅಥವಾ ಮಳೆಯಿಂದ ತೊಂದರೆಗೆ ಒಳಗಾದ ಘಟನೆಗಳು ನಡೆದಿವೆ. ಎಲ್ಲರ ಹಿತದೃಷ್ಟಿಯಿಂದಲೇ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮಳೆಗಾಲ ಮುಗಿಯುವ ತನಕ ಅಗತ್ಯವಿದ್ದರೆ ಮುಂದೆಯೂ ರಜೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.