Published
1 year agoon
By
Akkare News
ಉಪ್ಪಿನಂಗಡಿ: ದೈವರಾಧನೆಯಲ್ಲಿನ ನಿಷ್ಠೆ ಮತ್ತು ಭಕ್ತಿ, ಗತಿಸಿದ ಕುಟುಂಬದ ಹಿರಿಯರನ್ನು ಮರೆಯಬಾರದು ಎಂಬ ಸಂದೇಶವನ್ನು ಯುವ ಸಮುದಾಯ ಅನುಷ್ಠಾನಗೊಳಿಸಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಸುಮಂಗಲ ಸಹಕಾರ ಸಂಸ್ಥೆಯ ಅಧ್ಯಕ್ಷ ನಾಗೇಶ್ ಕಲ್ಲಡ್ಕ ಹೇಳಿದರು.
ಉಪ್ಪಿನಂಗಡಿ ಗಾಣಿಗರ ಸಮುದಾಯ ಭವನದಲ್ಲಿ ಪುತ್ತೂರು ತಾಲ್ಲೂಕು ಸಪಲಿಗರ ಯಾನೆ ಗಾಣಿಗರ ಸಂಘದ ವತಿಯಿಂದ ನಡೆದ ಸತ್ಯನಾರಾಯಣ ಪೂಜೆ, ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಮಕ್ಕಳನ್ನು ಪ್ರೀತಿಸಿ, ಮುದ್ದಿಸಿ; ಆದರೆ ದುರ್ಬಲರನ್ನಾಗಿಸಬೇಡಿ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಮಾನಸಿಕ ಹಾಗೂ ದೈಹಿಕವಾಗಿ ಸಾಮರ್ಥ್ಯ ವೃದ್ಧಿಸುವಂತೆ ಬೆಳೆಸಬೇಕು ಎಂದರು.
ಸಂಘದ ಅಧ್ಯಕ್ಷ ಹರಿರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.
ಮಂಜೇಶ್ವರ ಕೀರ್ತೇಶ್ವರ ದೇವಳ ಬ್ರಹ್ಮಕಲಶೋತ್ಸವ ಸಮಿತಿಯ ದಿನೇಶ್ ನಟ್ಟಿಬೈಲ್, ಸಫಲ ಸಹಕಾರ ಸಂಘದ ನಿರ್ದೇಶಕ ಭಾಸ್ಕರ ಎಡಪದವು ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಕುಂಟಿನಿ ವರದಿ, ಲೆಕ್ಕಪತ್ರ ಮಂಡಿಸಿದರು.
ಗಾಣಿಗ ಸಮಾಜದ ಕುಲ ಕಸುಬಾದ ಗಾಣದ ಎಣ್ಣೆಯ ಉದ್ಯಮವನ್ನು ಪ್ರಾರಂಭಿಸಿದ ಮಹೇಶ್ ಕುಂಟಿನಿ, ರಾಜೇಶ್ ಕುಂಟಿನಿ, ಸಂಘದ ಚಟುವಟಿಕೆಗೆ ದುಡಿಯುವ ಕೃಷ್ಣಪ್ಪ ನೆಕ್ಕರೆ ಅವರನ್ನು ಗೌರವಿಸಲಾಯಿತು.
ಪ್ರಶಾಂತ್ ನೆಕ್ಕಿಲಾಡಿ, ಬಿ.ಕೆ.ಆನಂದ್, ಶಶಿಕಲಾ ಭಾಸ್ಕರ್, ಶೋಭಾ ದಯಾನಂದ್ ಭಾಗವಹಿಸಿದ್ದರು. ಸಮಾಜದ ಗಾಯಕಿಯರಾದ ಮೋಹಿತ, ವೈಶಾಲಿ, ನಿಧಿ, ವಿನೋದ್ ಗಾಣಿಗ ಅವರಿಂದ ಗೀತಗಾಯನ ನಡೆಯಿತು. ರಾಜೇಶ್ ಕುಕ್ಕೆಶ್ರೀ ನಿರೂಪಿಸಿದರು.