Published
1 year agoon
By
Akkare News
Mangaluru: ವಾರದ ಹಿಂದಷ್ಟೇ ಮಂಗಳೂರಿನ ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿದ ಕೇಸ್ ನಲ್ಲಿ ಬಂಧಿಸಲ್ಪಟ್ಟಿದ್ದ ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಮೊಬೈಲ್ ನಲ್ಲಿ ಸ್ಫೋಟಕ ಅಂಶ ಪತ್ತೆಯಾಗಿದೆ ಎಂಬುದು ಬಯಲಾಗಿದೆ.
ಹೌದು, ಮುಡಾ ಸೈಟ್ ಹಂಚಿಕೆ ಪ್ರಕರಣ ಹೊರಗೆಳೆದು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕಾರಣಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಅವರ ಫೋಟೋಗಳಿಗೆ ರಕ್ತಾಭಿಷೇಕ ಮಾಡಿದ್ದು, ಈ ಪ್ರಕರಣದಲ್ಲಿ ರಾಮ ಸೇನೆ ಮುಖ್ಯಸ್ಥ ಪ್ರಸಾದ್ ಅತ್ತಾವರ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಪ್ರಸಾದ್ ಅತ್ತಾವರ ಮೊಬೈಲ್ ನಲ್ಲಿ ಈ ಎಲ್ಲಾ ವಿಚಾರಗಳು ಬಯಲಾಗಿದೆ.
ಈ ಪ್ರಕರಣದ ಮುಖ್ಯ ಆರೋಪಿ ಪ್ರಸಾದ್ ಅತ್ತಾವರ ಅವರ ಇತರೆ ನಂಟು ತಿಳಿಯಲು ಪೊಲೀಸರು ಮೊಬೈಲ್ ವಶಪಡಿಸಿಕೊಂಡು ತನಿಖೆಗೆ ಇಳಿದಿದ್ದರು. ಈ ವೇಳೆ ವಾಟ್ಸಾಪ್ ಮೆಸೇಜ್ ರಿಟ್ರೀವ್ ಮಾಡಿದಾಗ ಪೊಲೀಸರು ಶಾಕ್ ಆಗಿದ್ದಾರೆ. ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಈ ವಿಡಿಯೋ ಪತ್ತೆಯಾಗಿದೆ. 5 ಕುರಿಗಳನ್ನು ಬಲಿಕೊಟ್ಟು ಮುಡಾ ದೂರುದಾರರಾಗಿರುವ ಸ್ನೇಹಮಯಿ ಕೃಷ್ಣ, ಗಂಗರಾಜುಗೆ ಶಕ್ತಿ ತುಂಬಲು ಅವರ ಫೋಟೋ ಇಟ್ಟು ರಕ್ತಾಭಿಷೇಕ ಮಾಡಿದ್ದಾರೆ.
ಇನ್ನು ಪ್ರಾಣಿಬಲಿ ಪೂಜೆಗೆ ಪ್ರಸಾದ್ ಅತ್ತಾವರ, ಅನಂತ್ ಭಟ್ ಎಂಬುವವರಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಮತ್ತೊಂದು ಕೇಸ್ ಕೂಡ ದಾಖಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅವರು, ಬಲಿ ಎಲ್ಲಿ ನಡೆದಿದೆ ಅನ್ನೋದು ಗೊತ್ತಿಲ್ಲ, ಆದರೆ ಆದಷ್ಟು ಬೇಗ ತನಿಖೆ ಮಾಡ್ತೀವಿ. ಪ್ರಾರಂಭಿಕ ಮಾಹಿತಿ ಪ್ರಕಾರ ಇದನ್ನ ಸ್ನೇಹಮಯಿ ಕೃಷ್ಣ, ಗಂಗರಾಜುಗೋಸ್ಕರ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಒಟ್ಟು ಮೂರು ಹೆಸರು ಅವರು ಚೀಟಿ ಮೇಲೆ ಬರೆದಂತೆ ಕಾಣ್ತಿದೆ. ಸ್ನೇಹಮಯಿ ಕೃಷ್ಣ, ಗಂಗರಾಜು ಹಾಗೂ ಹರ್ಷ ಎಂದು ಬರೆದಿದ್ದಾರೆ. ಇವರಿಗೆ ಬಲ ಸಿಗಲು ಇದನ್ನು ಮಾಡಲಾಗಿದೆ, ಅವರ ವಿಚಾರಣೆ ಮಾಡ್ತೀವಿ ಎಂದು ಹೇಳಿದ್ದಾರೆ.