Published
1 year agoon
By
Akkare News
ಬಂಟ್ವಾಳ: ಕಳೆದ 8 ದಿನಗಳಿಂದ ನಾಪತ್ತೆಯಾಗಿರುವ ಫರಂಗಿಪೇಟೆ ಕಿದೆಬೆಟ್ಟಿನ ವಿದ್ಯಾರ್ಥಿ ದಿಗಂತ್ನ ಪತ್ತೆಗಾಗಿ ಪೊಲೀಸ್ ತನಿಖೆ ಇನ್ನಷ್ಟು ಚುರುಕುಗೊಂಡಿದೆ.
ಬಂಟ್ವಾಳದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಪ್ರಮುಖ ಪೊಲೀಸ್ ಅಧಿಕಾರಿಗಳನ್ನು ಕರೆಸಿ ವಿದ್ಯಾರ್ಥಿಯನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ಶ್ರಮಿಸುತ್ತಿದೆ. ಒಂದು ಮೂಲದ ಪ್ರಕಾರ ಆತನ ಇರುವಿಕೆ ಬಗ್ಗೆ ಗೊತ್ತಾಗಿದ್ದರೂ, ಆತ ಒಂದೇ ಕಡೆ ನಿಲ್ಲದೆ ಆಗಾಗ ಸ್ಥಳ ಬದಲಾಯಿಸುತ್ತಿರುವುದರಿಂದ ಪತ್ತೆಗೆ ತೊಡಕಾಗಿದೆ ಎನ್ನಲಾಗುತ್ತಿದೆ.
ಆತ ಮೊಬೈಲನ್ನು ಬಿಟ್ಟು ಹೋಗಿರುವುದರಿಂದ ಸದ್ಯಕ್ಕೆ ಆತನನ್ನು ಟ್ರೇಸ್ ಮಾಡುವುದು ಸಾಧ್ಯವಾಗಿಲ್ಲ. ಆದರೆ ಆತನ ಹಿಂದಿನ ಚಾಟ್ ಹಿಸ್ಟರಿ ಆಧಾರದಲ್ಲಿ ಆತ ಯಾವ ಕಾರಣಕ್ಕೆ, ಎತ್ತ ಸಾಗಿರಬಹುದು ಎಂಬುದರ ಮೇಲೆ ತನಿಖೆ ಸಾಗಿದೆ.
ಒಂದೇ ಜಾಗದಲ್ಲಿ ನಿಲ್ಲದೆ ಸಾಗುತ್ತಿರುವುದರಿಂದ ಆತನ ಜತೆಗೆ ಯಾರಾದರೂ ಇರುವುದು ಖಚಿತ ಎನ್ನಲಾಗುತ್ತಿದೆ. ಬಂಟ್ವಾಳದ ಒಂದು ಪ್ರದೇಶದ ವ್ಯಕ್ತಿ ಆತನನ್ನು ಸಂಪರ್ಕಿಸಿರುವ ಸುಳಿವು ಸಿಕ್ಕಿದೆ ಎಂಬ ಮಾಹಿತಿ ಇದ್ದು, ಪೊಲೀಸರು ಆ ಮಾಹಿತಿ ಆಧಾರದಲ್ಲೂ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಶೀಘ್ರ ಪತ್ತೆ ?
ಶೀಘ್ರದಲ್ಲೇ ಈ ಪ್ರಕರಣವನ್ನು ಭೇದಿಸುವ ವಿಶ್ವಾಸ ಪೊಲೀಸ್ ಇಲಾಖೆಯಲ್ಲಿದೆ ಎಂದು ತಿಳಿದುಬಂದಿದೆ.