ಪುತ್ತೂರು :ಪುತ್ತೂರಿನಲ್ಲಿ ನಿರ್ಮಿಸಲು ಉದ್ದೇಶಿರುವ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಮುಂದಿನ ಹಂತದಲ್ಲಿ ನಿರ್ಮಾಣವಾಗಲಿರುವ ಮೆಡಿಕಲ್ ಕಾಲೇಜಿಗೆ ಸಂಬಂಸಿದಂತೆ ಬೈಲಾ ಕಮಿಟಿ ರಚನೆ ಕಾರ್ಯ ಶೀಘ್ರದಲ್ಲೇ ನಡೆಯಲಿದೆ.
ಪುತ್ತೂರು ಮೆಡಿಕಲ್ ಕಾಲೇಜಿಗೆ ಸಂಬಂಧಿಸಿ ರಾಜ್ಯ ಸರಕಾರ ನೇಮಕ ಮಾಡಿರುವ ನೋಡೆಲ್ ಅಧಿಕಾರಿ ಡಾ.ಕಿಶೋರ್ ಅವರು ಪುತ್ತೂರಿಗೆ ಭೇಟಿ ನೀಡಿ ಶಾಸಕ ಅಶೋಕ್ ರೈ ಅವರ ಜತೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯದ ನಿರ್ದೇಶಕರಾಗಿರುವ ಡಾ.ಕಿಶೋರ್ ಅವರನ್ನು ಸರಕಾರ ಕೆಲ ದಿನಗಳ ಹಿಂದೆ ಪುತ್ತೂರು ಮೆಡಿಕಲ್ ಕಾಲೇಜು ಯೋಜನೆಗೆ ನೋಡೆಲ್ ಅಧಿಕಾರಿಯಾಗಿ ನೇಮಿಸಿತ್ತು.
ಪುತ್ತೂರಿನ ಪ್ರವಾಸಿ ಮಂದಿರದಲ್ಲಿ ಶಾಸಕ ಅಶೋಕ್ ರೈ ಜತೆ ಡಾ.ಕಿಶೋರ್ ಸುದೀರ್ಘ ಸಮಾಲೋಚನೆ ನಡೆಸಿದರು. ಈ ಬಗ್ಗೆ ಮಾಹಿತಿ ನೀಡಿದ ಶಾಸಕರು, ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ರಚನೆ ಸಂಬಂಧ ಆರಂಭದಲ್ಲಿ ಬೈಲಾ ರಚನೆಯಾಗಬೇಕಿದೆ. ಇದಕ್ಕಾಗಿ ಸರಕಾರಿ ಮಟ್ಟದಲ್ಲಿ ಬೈಲಾ ಕಮಿಟಿ ಶೀಘ್ರ ರಚನೆಯಾಗಲಿದೆ. ವೈದ್ಯಕೀಯ ಶಿಕ್ಷಣ ಸಚಿವರು, ಇಲಾಖೆಯ ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ, ಯೋಜನಾ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಪುತ್ತೂರು ಶಾಸಕರು ಈ ಬೈಲಾ ಕಮಿಟಿಯಲ್ಲಿರುತ್ತಾರೆ. ಮೆಡಿಕಲ್ ಕಾಲೇಜು ಆಸ್ಪತ್ರೆ, ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಬೈಲಾದಲ್ಲಿ ಸೇರಿಸಲಾಗುತ್ತದೆ. ಯೋಜನೆ, ಅನುಷ್ಠಾನ, ಹಣಕಾಸು ವಿಚಾರಗಳು, ನಿರ್ವಹಣೆ ಇತ್ಯಾದಿಗಳೆಲ್ಲ ಬೈಲಾದಲ್ಲಿ ಸೇರಲಿವೆ. ಮುಂದಿನ 15 ದಿನಗಳಲ್ಲಿ ಬೈಲಾ ರಚನೆಯಾಗುವ ಸಾಧ್ಯತೆ ಇದೆ ಎಂದರು. ಡಾ. ಕಿಶೋರ್ ಅವರು ಪುತ್ತೂರು ಮಡಿಕಲ್ ಕಾಲೇಜು ಸಂಬಂಧಿತ ಮುಂದಿನ ಎಲ್ಲ ಚಟುವಟಿಕೆಗಳ ನೋಡೆಲ್ ಅಧಿಕಾರಿಯಾಗಿದ್ದು, ಅಗತ್ಯ ಬಿದ್ದಾಗಲೆಲ್ಲ ಅವರು ಪುತ್ತೂರಿಗೆ ಬರಲಿದ್ದಾರೆ ಎಂದರು.