Published
2 days agoon
By
Akkare Newsಮಂಗಳೂರು/ಮಲ್ಪೆ, ಜೂ. 01: ಮಳೆಗಾಲದಲ್ಲಿ ಕಡಲು ಪ್ರಕ್ಷುಬ್ಧಗೊಳ್ಳುವ ಕಾರಣ ಜೂ. 1ರಿಂದ ಜು. 31 ರವರೆಗೆ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿದೆ. ಈ ಹಿನ್ನಲೆ ಯಾಂತ್ರೀಕೃತ ಮೀನುಗಾರಿಕೆ ರಜೆ ಇಂದಿನಿಂದ ಆರಂಭವಾಗಲಿದೆ.
ಕಡಲಿನ ಪ್ರಕ್ಷುಬ್ಧತೆಯೊಂದಿಗೆ ಮೀನುಗಳ ಸಂತಾನ ಅಭಿವೃದ್ಧಿಗೂ ಇದು ಪ್ರಸಕ್ತ ಸಮಯ. ಹೀಗಾಗಿ ಮಳೆ ಗಾಲದ ಆರಂಭದಿಂದ 2 ತಿಂಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹಲವು ವರ್ಷಗಳಿಂದ ಜಾರಿಯಲ್ಲಿರುತ್ತದೆ.
ಮಂಗಳೂರು, ಮಲ್ಪೆ ಸಹಿತ ಕರಾವಳಿಯ ವಿವಿಧ ಬಂದರುಗಳಲ್ಲಿ ಹೊರರಾಜ್ಯಗಳಾದ ಒರಿಸ್ಸಾ, ಆಂಧ್ರಪ್ರದೇಶ, ಜಾರ್ಖಂಡ್ ರಾಜ್ಯಗಳಿಂದಲೂ ಜೊತೆಗೆ ಹೊರ ಜಿಲ್ಲೆಯ ವಿವಿಧೆಡೆಗಳಿಂದ ಪುರುಷ, ಮಹಿಳಾ ಕಾರ್ಮಿಕರು ಮೀನು ಹೊರುವ, ಲೋಡ್, ಅನ್ಲೋಡ್ ಮಾಡುವ ಕೆಲಸವನ್ನು ಮಾಡುತ್ತಿದ್ದರು. ಇದೀಗ ಇನ್ನು ಎರಡು ತಿಂಗಳು ಯಾಂತ್ರೀಕೃತ ಮೀನುಗಾರಿಕೆ ರಜೆ ಇರುವ ಕಾರಣ ಬಹುತೇಕ ಮಂದಿ ಈಗಾಗಲೇ ತಮ್ಮ ತಮ್ಮ ಊರಿಗೆ ಮರಳಿದ್ದಾರೆ. ಇನ್ನು ಕೆಲವರು ಹೊರಡಲು ತಯಾರಿ ನಡೆಸುತ್ತಿದ್ದಾರೆ.
ಜೂ. 1ರಿಂದ ಜು.31ರ ವರೆಗೆ ಒಟ್ಟು 61 ದಿನಗಳ ವರೆಗೆ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿದೆ. 10 ಅಶ್ವಶಕ್ತಿ ಸಾಮರ್ಥ್ಯದವರೆಗಿನ ಸಾಂಪ್ರದಾಯಿಕ ನಾಡದೋಣಿಗಳ ಮೀನುಗಾರಿಕೆಗೆ ಅವಕಾಶವಿದೆ. ಸರಕಾರದ ಆದೇಶವನ್ನು ಉಲ್ಲಂಘಿಸಿದರೆ ಕರ್ನಾಟಕ ಮೀನುಗಾರಿಕಾ ಕಾಯ್ದೆ 1986 ರಲ್ಲಿ ವಿಧಿಸಲಾದ ದಂಡನೆಗಳಿಗೆ ಹೊಣೆಯಾಗುವುದಲ್ಲದೇ ಒಂದು ವರ್ಷದ ಅವಧಿಗೆ ಮಾರಾಟ ಕರರಹಿತ ಡಿಸೇಲ್ ಪಡೆಯಲು ಅನರ್ಹರಾಗುತ್ತಾರೆ ಎಂದು ಮಲ್ಪೆ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ವಿವೇಕ್ ಆರ್ ತಿಳಿಸಿದ್ದಾರೆ.