Connect with us

ಇತರ

ಮಣಿಪುರ ಮತ್ತೆ ಉದ್ವಿಗ್ನ: ಐದು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ, ಇಂಟರ್ನೆಟ್ ಸ್ಥಗಿತ

Published

on

ಮೈತೇಯಿ ಸಂಘಟನೆ ಆರಂಬೈ ತೆಂಗೋಲ್‌ನ ನಾಯಕನ ಬಂಧನ ವಿರೋಧಿಸಿ ಮಣಿಪುರದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿವೆ. ಶನಿವಾರ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಭಾನುವಾರವೂ ಹಾಗೆಯೇ ಮುಂದುವರಿದಿದೆ. ಆಡಳಿತವು ಇಂಫಾಲ್ ಕಣಿವೆಯ ಐದು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ, ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ತೌಬಲ್, ಬಿಷ್ಣುಪುರ ಮತ್ತು ಕಾಕ್ಚಿಂಗ್ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಈ ಕಣಿವೆ ಪ್ರದೇಶಗಳಲ್ಲಿ VSAT ಮತ್ತು VPN ಸೌಲಭ್ಯಗಳು ಸೇರಿದಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

 

 

 

ಕಿಥೆಲ್ ಮತ್ತು ಉರಿಪೋಕ್‌ನಲ್ಲಿ ಪ್ರತಿಭಟನಾಕಾರರು ರಸ್ತೆಗಳಲ್ಲಿ ಟೈರ್‌ಗಳು ಮತ್ತು ಹಳೆಯ ಪೀಠೋಪಕರಣಗಳನ್ನು ಸುಟ್ಟುಹಾಕಿದ್ದಾರೆ. ಮೈತೇಯಿ ನಾಯಕನ ಬಿಡುಗಡೆಗೆ ಒತ್ತಾಯಿಸಿದ್ದಾರೆ.

ಶನಿವಾರ ರಾತ್ರಿ ರಾಜ್ಯ ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಪ್ರತಿಭಟನಾ ನಿರತರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ನಡೆದಿದೆ. ಇಂಫಾಲ್ ಪೂರ್ವ ಜಿಲ್ಲೆಯ ಖುರೈ ಲ್ಯಾಮ್ಲಾಂಗ್‌ನಲ್ಲಿ ಗುಂಪೊಂದು ಬಸ್‌ಗೆ ಬೆಂಕಿ ಹಚ್ಚಿದೆ ಎಂದು ವರದಿಯಾಗಿದೆ.

ರಾಜಭವನದಿಂದ ಸುಮಾರು 200 ಮೀಟರ್ ದೂರದಲ್ಲಿರುವ ಕಾಂಗ್ಲಾ ಗೇಟ್ ಮುಂದೆ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಹಲವಾರು ಸುತ್ತು ಅಶ್ರುವಾಯು ಶೆಲ್‌ಗಳನ್ನು ಹಾರಿಸಿವೆ. ರಾಜಭವನಕ್ಕೆ ಹೋಗುವ ರಸ್ತೆಗಳಲ್ಲಿ ಭದ್ರತೆಯನ್ನು ಬಲಪಡಿಸಲಾಗಿದ್ದು, ಹೆಚ್ಚುವರಿ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ.

 

 

ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್‌) ಸೆಕ್ಷನ್ 163 ರ ಉಪ-ವಿಭಾಗ 2 ರ ಅಡಿಯಲ್ಲಿ ಇಂಫಾಲ್ ಪಶ್ಚಿಮ ಜಿಲ್ಲಾಡಳಿತವು ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ಮತ್ತು ಕೋಲು, ಕಲ್ಲು, ಬಂದೂಕುಗಳು ಅಥವಾ ಹರಿತವಾದ ಆಯುಧಗಳನ್ನು ಸಾಗಿಸುವುದನ್ನು ನಿಷೇಧಿಸಿದೆ.

ತೌಬಲ್ ಮತ್ತು ಕಕ್ಚಿಂಗ್ ಜಿಲ್ಲೆಗಳಲ್ಲಿ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಫಾಲ್ ಪೂರ್ವ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ, ಶನಿವಾರ ರಾತ್ರಿ 10 ಗಂಟೆಯಿಂದ ಬಿಎನ್‌ಎಸ್‌ಎಸ್‌ನ ಸೆಕ್ಷನ್ 163 ರ ಉಪ-ವಿಭಾಗ 1 ರ ಅಡಿಯಲ್ಲಿ ಮುಂದಿನ ಆದೇಶದವರೆಗೆ ಜನರು ತಮ್ಮ ಮನೆಗಳಿಂದ ಹೊರಗೆ ಬರುವುದನ್ನು ನಿಷೇಧಿಸಲಾಗಿದೆ.

ಕ್ವಾಕಿಥೆಲ್‌ನಲ್ಲಿ ಹಲವು ಬಾರಿ ಗುಂಡಿನ ಸದ್ದುಗಳು ಕೇಳಿಬಂದಿವೆ. ಆದರೆ, ಗುಂಡು ಹಾರಿಸಿದವರು ಯಾರು ಎಂಬುವುದು ಖಚಿತವಾಗಿ ತಿಳಿದುಬಂದಿಲ್ಲ ಎಂದು ವರದಿಗಳು ಹೇಳಿವೆ.

 


ಆರಂಬೈಲ್ ತೆಂಗೋಲ್ ನಾಯಕನ ಬಂಧನದ ನಂತರ, ಪ್ರತಿಭಟನಾಕಾರರು ತುಲಿಹಾಲ್‌ನಲ್ಲಿರುವ ಇಂಫಾಲ್ ವಿಮಾನ ನಿಲ್ದಾಣದ ದ್ವಾರಕ್ಕೂ ಮುತ್ತಿಗೆ ಹಾಕಿದ್ದರು. ಬಂಧಿತ ನಾಯಕನನ್ನು ರಾಜ್ಯದ ಹೊರಗೆ ಕರೆದೊಯ್ಯುವ ಯಾವುದೇ ಸಂಭಾವ್ಯ ಪ್ರಯತ್ನವನ್ನು ತಡೆಯಲು ಅವರು ವಿಮಾನ ನಿಲ್ದಾಣದ ಬಳಿ ಹೆದ್ದಾರಿ ತಡೆ ನಡೆಸಿದ್ದರು.

ಬೇರೆಡೆ, ಬಂಧನವನ್ನು ವಿರೋಧಿಸಿ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಆರಂಬೈಲ್ ತೆಂಗೋಲ್ ಸದಸ್ಯರು ತಮ್ಮ ಮೇಲೆ ಪೆಟ್ರೋಲ್ ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version