Published
22 hours agoon
By
Akkare Newsಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇಲ್ಲಿಯ ತನಕ ಆರ್ ಸಿಬಿ ಸನ್ಮಾನ, ಅಭಿನಂದನೆ, ವಿಜಯೋತ್ಸಾಹ ಆಚರಿಸಿದ್ದು ಸರಕಾರ ಅಲ್ಲ. ಹಾಗಿದ್ದ ಮೇಲೆ ನಮ್ಮ ತಪ್ಪು ಎನ್ನುವುದು ಯಾಕೆ ಎಂದೇ ವಾದ ಮಾಡುತ್ತಾ ಬರುತ್ತಿದ್ದರು. ಈಗ ವಿಧಾನಸೌಧದ ಮೆಟ್ಟಿಲಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ರಾಜ್ಯ ಸರಕಾರ ಎನ್ನುವುದು ಸಾಬೀತಾಗಿದೆ.
ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಆರ್ ಸಿಬಿ ತಂಡವನ್ನು ರಾಜ್ಯಭವನಕ್ಕೆ ಕರೆದು ಅವರನ್ನು ಅಭಿನಂದಿಸಬೇಕು ಎಂದು ಯೋಜನೆ ಹಾಕಿಕೊಂಡಿದ್ದರು. ಆದರೆ ರಾಜ್ಯ ಸರಕಾರದಿಂದ ರಾಜ್ಯಭವನಕ್ಕೆ ಬಂದ ಸಂದೇಶ ಹೇಗಿತ್ತು ಎಂದರೆ ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡಲಾಗಿದೆ. ನೀವು ಅಲ್ಲಿಯೇ ಬನ್ನಿ ಎಂದು ಆಮಂತ್ರಿಸಲಾಗಿದೆ.
ಇನ್ನು ರಾಜ್ಯಭವನದ ಮಾಹಿತಿಯ ಪ್ರಕಾರ ಮುಖ್ಯಮಂತ್ರಿಯವರೇ ರಾಜ್ಯಪಾಲರನ್ನು ಸ್ವತ: ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಇದರಿಂದ ಸಿಎಂ ಈ ಹಿಂದೆ ನೀಡಿದ ಹೇಳಿಕೆಯ ಬಗ್ಗೆ ಅನುಮಾನಗಳು ಮೂಡಿವೆ. ಅವರು ” ಅಭಿನಂದನಾ ಕಾರ್ಯಕ್ರಮ ರಾಜ್ಯ ಸರಕಾರದ್ದಲ್ಲ. ಇನ್ನು ರಾಜ್ಯಪಾಲರನ್ನು ಆಮಂತ್ರಿಸಿದ್ದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್” ಎಂದೇ ಹೇಳುತ್ತಾ ಬಂದಿದ್ದರು.
ಸಿಎಂ ಸಿದ್ಧರಾಮಯ್ಯನವರು ಈ ಮೊದಲು ಹೇಳಿದ್ದೇನೆಂದರೆ ” ನನಗೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಆಹ್ವಾನಿಸಿದ್ದರು. ಪೊಲೀಸರು ಕಾರ್ಯಕ್ರಮ ನಡೆಸಲು ಒಪ್ಪಿದ್ದಾರೆ ಎಂದು ನನಗೆ ಹೇಳಲಾಗಿತ್ತು. ಅದರ ನಂತರ ಕೆಎಸ್ ಸಿಎ ಕೋಶಾಧಿಕಾರಿ ಹಾಗೂ ಕಾರ್ಯದರ್ಶಿ ನನ್ನನ್ನು ಆಹ್ವಾನಿಸಿದರು. ಆ ಕಾರ್ಯಕ್ರಮ ನಾನು ಆಯೋಜಿಸಿದ್ದಲ್ಲ. ಅದು ಅಸೋಸಿಯೇಶನ್ ಕಾರ್ಯಕ್ರಮ. ರಾಜ್ಯಪಾಲರನ್ನು ಕೂಡ ಅವರೇ ಕರೆದಿದ್ದರು. ಅದಕ್ಕಾಗಿ ನಾನು ಭಾಗವಹಿಸಿದೆ. ಅದು ಬಿಟ್ಟು ಅದರಲ್ಲಿ ಬೇರೆ ಏನೂ ನನ್ನ ಪಾತ್ರವಿಲ್ಲ” ಎಂದು ಆದಿತ್ಯವಾರ ಹೇಳಿದ್ದರು.
“ಕುಮಾರಸ್ವಾಮಿ ನನ್ನ ಮೇಲೆ ಪೊಲೀಸರ ಮೇಲೆ ಒತ್ತಡ ಹಾಕಿ ಕಾರ್ಯಕ್ರಮ ಮಾಡಿಸಿದ್ದು ಎಂದು ಹೇಳಿದ್ದಾರೆ. ಅದು ಸಂಪೂರ್ಣ ಸುಳ್ಳು” ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಸದ್ಯ ಈ ಒಟ್ಟು ಘಟನೆಯಿಂದ ಅಂತರ ಕಾಪಾಡಿಕೊಳ್ಳುವ ಪ್ರಯತ್ನದಲ್ಲಿರುವ ಸಿದ್ಧರಾಮಯ್ಯನವರು ಈ ಘಟನೆಯನ್ನು ಪೊಲೀಸ್ ಇಲಾಖೆ, ಕೆಎಸ್ ಸಿಎ ಹಾಗೂ ಆರ್ ಸಿಬಿ ಮೇಲೆ ಹಾಕಿ ನನಗೆ ಈ ಒಟ್ಟು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿರಲಿಲ್ಲ ಎಂದು ಹೇಳಿದ್ದಾರೆ. ಪೊಲೀಸ್ ಇಲಾಖೆಯ ಮೂಲಗಳ ಪ್ರಕಾರ ಈ ಅಭಿನಂದನಾ ಕಾರ್ಯಕ್ರಮವನ್ನು ಆದಿತ್ಯವಾರ ಇಡಲು ಸರಕಾರಕ್ಕೆ ವಿನಂತಿ ಮಾಡಲಾಗಿತ್ತು. ಆದರೆ ಸರಕಾರ ಇಲಾಖೆಯ ಮನವಿಯನ್ನು ನಿರ್ಲಕ್ಷಿಸಿ ಐಪಿಎಲ್ ಗೆದ್ದ ಮರುದಿನವೇ ಆಚರಿಸೋಣ ಎಂದು ಹಟ ಹಿಡಿದಿತ್ತು.