Published
1 day agoon
By
Akkare Newsಬೆಳ್ತಂಗಡಿ: ತಾಲೂಕಿನ ಹೊಸ ನ್ಯಾಯಾಲಯದ ಕಟ್ಟಡಕ್ಕೆ ರಾಜ್ಯ ಸರಕಾರ 9 ಕೋಟಿ ರೂ. ಮಂಜೂರು ಮಾಡಿದ್ದು, ಕಟ್ಟಡ ನಿರ್ಮಾಣ ಸಂಬಂಧ ಮುಂದಿನ ಪ್ರಕ್ರಿಯೆಗೆ ಕೂಡಲೇ ಚಾಲನೆ ಸಿಗಬೇಕಿದೆ.
ಬೆಳ್ತಂಗಡಿ ಪ್ರಧಾನ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಯಲಯ ಮತ್ತು ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ನೂತನ ಸಂಕೀರ್ಣದ ಅವಶ್ಯಕತೆ ಕುರಿತು ಬೇಡಿಕೆ ಇತ್ತು. ಈ ಸಂಬಂಧ ಎ.7 ರಂದು ಉದಯವಾಣಿಯಲ್ಲಿ ಅರವತ್ತು ವರ್ಷದ ಹಳೆಯ ಕಟ್ಟಡದಲ್ಲೇ ನ್ಯಾಯಾಲಯ ಕಲಾಪ ಜಿಲ್ಲೆಯ ದೊಡ್ಡ ತಾಲೂಕಿನ ಚಿಕ್ಕದೊಂದು ಆಸೆ ಇನ್ನೂ ಈಡೇರಿಲ್ಲ! ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು. ಸರಕಾರ ಈ ಆನುದಾನ ಬಿಡುಗಡೆ ಮಾಡಿದ್ದು, ನೂತನ ಕಟ್ಟಡದ ಭರವಸೆ ಈಡೇರುವ ಸನ್ನಿಹಿತದಲ್ಲಿದೆ.
ಬೆಳ್ತಂಗಡಿ ಪೇಟೆಯಿಂದ 1 ಕಿ.ಮೀ. ದೂರದಲ್ಲಿ 1977 ರಲ್ಲಿ ಸುಮಾರು 60 ವರ್ಷ ಹಳೆಯದಾದ ನ್ಯಾಯಾಲಯ ಸಂಕೀರ್ಣ, ನ್ಯಾಯಾಧೀಶರು ಸಹಿತ ಸಿಬಂದಿ ವಸತಿಗೃಹಗಳಿವೆ. ಆದರೆ ಪ್ರಸ್ತುತ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಹೆಂಚಿನ ಕಟ್ಟಡದಲ್ಲಿ ಮಳೆ ನೀರು ಸೋರ ಬಾರದೆಂದು ಟಾರ್ಪಾಲು ಹೊದಿಸಲಾಗಿತ್ತು. ಗೋಡೆಗಳಿಗೆ ಮಳೆ ನೀರು ಸುರಿದು ಬಿರುಕು ಬಿಟ್ಟು ಕುಸಿಯುವಂತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಮೂಡುಬಿದ್ರೆ, ಪುತ್ತೂರು, ಬಂಟ್ವಾಳ ಸಹಿತ ಬಹುತೇಕ ತಾಲೂಕುಗಳಲ್ಲಿ ಸುಸಜ್ಜಿತ ನ್ಯಾಯಾಲಯ ಸಂಕೀರ್ಣವಿದೆ. ಆದರೆ ಬೆಳ್ತಂಗಡಿಯಲ್ಲಿ ಮಾತ್ರ ಇರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯವಾದಿಗಳು ಸರಕಾರ ಹಾಗೂ ಮಂತ್ರಿಯವರಲ್ಲಿ ಮನವಿ ಮಾಡುತ್ತಲೇ ಇದ್ದರು. ವಿಧಾನಪರಿಷತ್ ಕಲಾಪದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಪ್ರತಾಪಸಿಂಹ ನಾಯಕ್ ಹಾಗೂ ಐವನ್ ಡಿಸೋಜ ಪ್ರಸ್ತಾಪಿಸಿದ್ದರು. ಇದಕ್ಕೆ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಪೂರಕವಾಗಿ ಸ್ಪಂದಿಸಿದ್ದರು. ಅದರಂತೆ ಈಗ 9 ಕೋ.ರೂ. ಅನುದಾನ ಮಂಜೂರುಗೊಂಡಿದೆ.
ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಸಚಿವರಾದ ಎಚ್.ಕೆ.ಪಾಟೀಲ್ ಅವರನ್ನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರನ್ನು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಅಪರ ಸರಕಾರಿ ವಕೀಲ ಮನೋಹರ್ ಕುಮಾರ್ ಎ., ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ, ಹಿರಿಯ ವಕೀಲರ ಸಮಿತಿ ಅಧ್ಯಕ್ಷರಾದ ಆಲೋಸಿಸ್ ಲೋಬೊ,ಪುತ್ತೂರಿನ ಶಾಶಕರಾದ ಅಶೋಕ್ ಕುಮಾರ್ ರೈ, ವಕೀಲರಾದ ಪ್ರಶಾಂತ್ ಉಪಸ್ಥಿತರಿದ್ದರು.