Published
9 months agoon
By
Akkare News
ಮಹಿಳೆಯೊಬ್ಬರನ್ನು ಮಠದಲ್ಲಿ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿ, ಮೂಡಲಗಿಯ ಶಿವಾಪುರ ಗ್ರಾಮದ ಅಡವಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿ ಅವರನ್ನು ಗ್ರಾಮದ ಹಿರಿಯರು ಮಠದಿಂದ ಹೊರಹಾಕಿದ್ದಾರೆ. ವಿಷಯ ತಿಳಿದು ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ, ಪಿಎಸ್ಐ ರಾಜು ಪೂಜೇರಿ ಮಠಕ್ಕೆ ಭೇಟಿ ನೀಡಿದರು. ಬಳಿಕ ಜನರನ್ನು ಸ್ಥಳದಿಂದ ಕಳುಹಿಸಿ, ಮಹಿಳೆ ಹಾಗೂ ಮಗಳನ್ನು ಮೂಡಲಗಿಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸೇರಿಸಿದರು. ಗ್ರಾಮದ ಜನರು ದ್ವೇಷದಿಂದ ನನ್ನ ಮೇಲೆ ಹುನ್ನಾರ ನಡೆಸಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.
ಬೆಳಗಾವಿ: ಮೂಡಲಗಿ ತಾಲೂಕಿನ ಶಿವಾಪುರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿ ಸಿದ್ದರಾಮ ಸ್ವಾಮೀಜಿ ಮೇಲೆ ಗ್ರಾಮಸ್ಥರು ಮಹಿಳೆಯೊಂದಿಗೆ ಅಕ್ರಮ ಸಂಬಂಧ ಆರೋಪ ಮಾಡಿದ್ದು, ಗ್ರಾಮದ ಹಿರಿಯರು ಭಾನುವಾರ ಸ್ವಾಮೀಜಿಯನ್ನು ಮಠ (ಧ್ಯಾನಮಂದಿರ)ದಿಂದ ಉಚ್ಚಾಟಿಸಿದ್ದಾರೆ.
ವಿಜಯಪುರ ಜಿಲ್ಲೆಯ ಮಹಿಳೆಯೊಬ್ಬರು ಶನಿವಾರ ತನ್ನ ಮಗಳೊಂದಿಗೆ ಅಡವಿ ಸಿದ್ದೇಶ್ವರ ಮಠಕ್ಕೆ ಆಗಮಿಸಿದ್ದರು. ರಾತ್ರಿ 10 ಗಂಟೆಗೆ ಸುಮಾರಿಗೆ ಸ್ಥಳೀಯ ಯುವಕರು ಸ್ವಾಮೀಜಿಯ ಕೊಠಡಿಯೊಳಗೆ ಆ ಮಹಿಳೆ ಇರುವುದನ್ನು ನೋಡಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು, ಸ್ವಾಮೀಜಿ ಹಾಗೂ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ರಾತ್ರಿ ವೇಳೆ ಮಠದಲ್ಲಿ ಯಾರೂ ಇಲ್ಲದ ವೇಳೆ ಆ ಮಹಿಳೆ ನಿಮ್ಮ ಕೊಠಡಿಯೊಳಗೆ ಇರುವುದು ಯಾಕೆ? ಎಂದು ಸ್ವಾಮೀಜಿಯನ್ನು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ‘ರಾತ್ರಿ ತಡವಾಗಿದ್ದರಿಂದ ಇಲ್ಲೇ ಉಳಿದುಕೊಂಡಿದ್ದಾರೆ,’ ಎಂದು ಸ್ವಾಮೀಜಿ ಹೇಳಿದ್ದಾರೆ. ‘ನಾನು ಯಾವುದೇ ತಪ್ಪು ಮಾಡಿಲ್ಲ,’ಎಂದು ಸ್ವಾಮೀಜಿ ಸಮಜಾಯಿಷಿ ನೀಡಲು ಮುಂದಾದರೂ ಅದಕ್ಕೆ ಗ್ರಾಮಸ್ಥರು ಒಪ್ಪಿಲ್ಲ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ತಡರಾತ್ರಿ ಮಹಿಳೆ ಮತ್ತು ಮಗಳನ್ನು ಸಾಂತ್ವನ ಕೇಂದ್ರಕ್ಕೆ ಕರೆದೊಯ್ದು ಬಿಟ್ಟಿದ್ದಾರೆ.
ಭಾನುವಾರ ಮಠದಲ್ಲಿ ಪೊಲೀಸ್ ಅಧಿಕಾರಿಗಳಾದ ಸಿಪಿಐ ಶ್ರೀಶೈಲ್ ಬ್ಯಾಕೋಡ, ಪಿಎಸ್ಐ ರಾಜು ಪೂಜಾರಿ ಅವರೊಂದಿಗೆ ಸಭೆ ನಡೆಸಿದ ಗ್ರಾಮಸ್ಥರು, ‘ಯಾವುದೇ ಕಾರಣಕ್ಕೂ ಸ್ವಾಮೀಜಿ ಮಠದಲ್ಲಿ ಇರಲು ಅವಕಾಶ ಕೊಡುವುದಿಲ್ಲ,’ ಎಂದು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ವಾಮೀಜಿಯನ್ನು ಮಠದಿಂದ ಹೊರಹಾಕಲಾಗಿದೆ.