Connect with us

ಇತರ

ಎಸ್‌ಐಆರ್ ‘ಸಾಂಸ್ಥಿಕ ಮತಗಳ್ಳತನ’, ಚುನಾವಣಾ ಆಯೋಗ ಬಿಜೆಪಿ ಜೊತೆ ಕೈ ಜೋಡಿಸಿದೆ: ರಾಹುಲ್ ಗಾಂಧಿ

Published

on

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಾಂಸ್ಥಿಕ ಮತಗಳ್ಳತನವಾಗಿದೆ. ಚುನಾವಣಾ ಆಯೋಗ ಬಿಜೆಪಿ ಜೊತೆ ಕೈ ಜೋಡಿಸಿದೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಎಸ್‌ಐಆರ್ ಮತ್ತು ಮತಗಳ್ಳತನದ ವಿರುದ್ದ ಬಿಹಾರದಲ್ಲಿ ಹಮ್ಮಿಕೊಂಡಿರುವ ‘ವೋಟರ್ ಅಧಿಕಾರ್’ ಯಾತ್ರೆಯಲ್ಲಿ ಭಾನುವಾರ ಅವರು ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಕಲಿ ಮತದಾರರನ್ನು ಹೇಗೆ ಸೇರ್ಪಡೆ ಮಾಡಲಾಗಿದೆ ಎಂಬ ನಮ್ಮ ಪ್ರಶ್ನೆಗೆ ಚುನಾವಣಾ ಆಯೋಗ ಉತ್ತರ ನೀಡಿಲ್ಲ. ಹಾಗಾಗಿ, ಅದರ ಎಲ್ಲರಿಗೂ ಸ್ಪಷ್ಟವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಬಿಹಾರದ ಅರಾರಿಯಾದಲ್ಲಿ ‘ವೋಟರ್ ಅಧಿಕಾರ್’ ಯಾತ್ರೆಯ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಮುಂಬರುವ ಬಿಹಾರ ಚುನಾವಣೆಗಾಗಿ ಇಂಡಿಯಾ ಒಕ್ಕೂಟವು ‘ಸೈದ್ಧಾಂತಿಕ ಮತ್ತು ರಾಜಕೀಯವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದೆ. ಚುನಾವಣೆಯ ಫಲಿತಾಂಶ ನಮಗೆ ಫಲಪ್ರದವಾಗಲಿದೆ. ನಾವೆಲ್ಲ ಸಾಮಾನ್ಯ ಪ್ರಣಾಳಿಕೆಯೊಂದಿಗೆ ಮತದಾರರ ಮುಂದೆ ಹೋಗುತ್ತೇವೆ” ಎಂದಿದ್ದಾರೆ.

ಮತಗಳ್ಳತನಕ್ಕೆ ಸಂಬಂಧಿಸಿದ ತನ್ನ ಆರೋಪಕ್ಕೆ ಚುನಾವಣಾ ಆಯೋಗ ಪ್ರಮಾಣಪತ್ರ ಕೇಳಿದೆ ಎಂದ ರಾಹುಲ್ ಗಾಂಧಿ, ಅನುರಾಗ್ ಠಾಕೂರ್ ಅಂತಹದ್ದೇ ಆರೋಪ ಮಾಡಿದರೂ ಅವರಿಂದ ಪ್ರಮಾಣಪತ್ರ ಕೇಳಿಲ್ಲ ಎಂದಿದ್ದಾರೆ.

‘“ನಾನು ಮಹದೇವಪುರದ ಮತಗಳ್ಳತನದ ಕುರಿತು ಪತ್ರಿಕಾಗೋಷ್ಠಿ ಮಾಡುತ್ತಿದ್ದೆ. ಐದು ನಿಮಿಷಗಳಲ್ಲಿ, ರಾಹುಲ್ ಗಾಂಧಿ ಪ್ರಮಾಣಪತ್ರ ನೀಡಬೇಕು. ಅವರು ಪ್ರಮಾಣಪತ್ರ ಸಲ್ಲಿಸದಿದ್ದರೆ ಆರೋಪಗಳನ್ನು ಸ್ವೀಕರಿಸುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಕೆಲ ದಿನಗಳ ನಂತರ, ಅನುರಾಗ್ ಠಾಕೂರ್ ಅದೇ  ರೀತಿಯ ಆರೋಪಗಳನ್ನು ಮಾಡಿದರು. ಆದರೆ, ಅವರಿಂದ ಯಾವುದೇ ಪ್ರಮಾಣಪತ್ರ ಕೇಳಿಲ್ಲ. ನಾನು ನಕಲಿ ಮತದಾರರ ಬಗ್ಗೆ ಮಾತನಾಡಿದ್ದೆ, ಅವರು ಕೂಡ ಅದನ್ನೇ ಮಾಡಿದ್ದರು. ಐದು ನಿಮಿಷಗಳಲ್ಲಿ ನನ್ನಿಂದ ಪ್ರಮಾಣಪತ್ರ ಕೇಳಲಾಯಿತು. ಆದರೆ, ಇಂದಿನವರೆಗೆ ಅನುರಾಗ್ ಠಾಕೂರ್ ಅವರಿಂದ ಕೇಳಿಲ್ಲ” ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version