Published
5 months agoon
By
Akkare News
ಪುತ್ತೂರು: ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಅ.20 ರಂದು ದೀಪಾವಳಿ ಹಬ್ಬದ ಪ್ರಯುಕ್ತ ರೈ ಎಸ್ಟೇಟ್ ಎಜಿಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ನಡೆಯುವ `ಅಶೋಕ ಜನಮನ-2025′ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆಗಮಿಸಲಿರುವ ಹಿನ್ನೆಲೆಯಲ್ಲಿ ಸರಕಾರಿ ನಿಯಮಾವಳಿಯಂತೆ ಎಲ್ಲಾ ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಶುಕ್ರವಾರ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಬೆಳಗ್ಗೆ ವಿಶೇಷ ಫ್ಲೈಟ್ ಮೂಲಕ ಮಂಗಳೂರಿಗೆ 10.45 ಕ್ಕೆ ಆಗಮಿಸುವ ಮುಖ್ಯಮಂತ್ರಿಗಳು ಅಲ್ಲಿಂದ ರಸ್ತೆ ಮಾರ್ಗದ ಮೂಲಕ 11.45 ಕ್ಕೆ ಪುತ್ತೂರಿಗೆ ತಲುಪಲಿದ್ದಾರೆ. ಸುಮಾರು 2 ಗಂಟೆಯ ತನಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿ ವಸ್ತ್ರ ವಿತರಣೆಯ ಏಕೈಕ ಕಾರ್ಯಕ್ರಮ ಮಾತ್ರ ಅಂದು ಮುಖ್ಯಮಂತ್ರಿಗಳಿಗೆ ನಿಗದಿಯಾಗಿದೆ ಎಂದರು.
ಇದು ಪಕ್ಷಾತೀತವಾಗಿ ನಡೆಯುವ ಕಾರ್ಯಕ್ರಮ. ಕಳೆದ 12 ವರ್ಷಗಳಿಂದ ದೀಪಾವಳಿಯ ಸಂದರ್ಭದಲ್ಲಿ ವಸ್ತ್ರ ವಿತರಣೆ ಮಾಡಿಕೊಂಡು ಬರಲಾಗಿದೆ. ಈ ಬಾರಿ 1 ಲಕ್ಷ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಒಂದು ಮನೆಯಿಂದ ಎಷ್ಟು ಮಂದಿ ಬಂದರೂ ಅನ್ನದಾನ, ವಸ್ತ್ರದಾನಕ್ಕೆ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಕಲ್ತ್ ಳಿತ ಪ್ರಕರಣಗಳು ನಡೆದ ಬಳಿಕ ಹೆಚ್ಚು ಜನ ಸೇರುವ ಸಾರ್ವಜನಿಕ ಕಾರ್ಯಕ್ರಮಗಳಿಗೆ ಕೆಲವು ನಿಯಮಗಳನ್ನು ಮಾಡಲಾಗಿದೆ. ಆದರಂತೆ ಐಜಿಪಿ ಅಮಿತ್ ಸಿಂಗ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ವ್ಯವಸ್ಥೆಗಳಿಗೆ ಸೂಚನೆಗಳನ್ನು ನೀಡಿದ್ದಾರೆ. 20 ಮಂದಿ ಮಾತ್ರ ವೇದಿಕೆಯಲ್ಲಿ ಇರುತ್ತಾರೆ. ವೇದಿಕೆ ನಿರ್ವಹಣೆಯನ್ನೂ ಪೊಲೀಸ್ ಇಲಾಖೆ ಮಾಡುತ್ತದೆ.20 ಸಾವಿರ ಚಯರ್, ಪ್ರವೇಶ ಬಂದ್ ಇರದ ವ್ಯವಸ್ಥೆ ಮೊದಲಾದವುಗಳನ್ನು ಮಾಡಲಾಗುತ್ತದೆ.
ಕಾರ್ಯಕ್ರಮಕ್ಕೆ ಬರುವವರಿಗೆ ಮಹಾಲಿಂಗೇಶ್ವರ ದೇವಾಲಯದ ಎದುರಿನ ಗದ್ದೆಯಲ್ಲಿ, ಕೊಂಬೆಟ್ಟು ಕಾಲೇಜು ಬಳಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಹಿರಿಯರು, ಮಕ್ಕಳೊಂದಿಗೆ ಬರುವವರಿಗೆ ಅಲ್ಲಿಂದ ಉಚಿತ ರಿಕ್ಷಾ ವ್ಯವಸ್ಥೆ ಇದೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಾಂತರ ಭಾಗಗಳಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ವ್ಯವಸ್ಥೆ ಇರುತ್ತದೆ. ಹೆಚ್ಚುವರಿ 20 ರೂಟ್ ಗಳಲ್ಲಿ ಬಸ್ ಓಡಾಟ ನಡೆಸಲಿದೆ.
ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಸಾಂಸ್ಕøತಿಕ ಕಾರ್ಯಕ್ರಮಗಳು ಸಂಜೆ 6 ಗಂಟೆಯ ತನಕ ನಡೆಯಲಿದೆ. 3 ಗಂಟೆಯ ಬಳಿಕ ಲೈವ್ ದೋಸೆಯನ್ನು ಬಂದವರಿಗೆ ನೀಡಲಾಗುತ್ತದೆ. ಮುಖ್ಯಮಂತ್ರಿಗಳು ರಸ್ತೆ ಮಾರ್ಗವಾಗಿ ಆಗಮಿಸುವ ಹಿನ್ನೆಲೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಅಶೋಕ್ ರೈ ಹೇಳಿದರು.
ಸಮಾವೇಶದ ಸಂದರ್ಭದಲ್ಲಿ ಪುತ್ತೂರು ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದಂತೆ ಕಾಮಗಾರಿಗಳಿಗೆ ಶೀಘ್ರ ಶಿಲಾನ್ಯಾಸ ನೆರವೇರಿಸಬೇಕೆಂಬ ಬೇಡಿಕೆ ಇಡಲಾಗುವುದು. ಮುಂದೆ ಶೀಘ್ರದಲ್ಲಿ ಮುಖ್ಯಮಂತ್ರಿಗಳು ಮತ್ತೊಮ್ಮೆ ಪುತ್ತೂರಿಗೆ ಆಗಮಿಸಲಿದ್ದು, ಕೋರ್ಟ್ ಸಮುಚ್ಛಯ ಉದ್ಘಾಟನೆ, ಕ್ರೀಡಾಂಗಣ, ಆರ್.ಟಿ.ಒ. ಟ್ರ್ಯಾಕ್ಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ನಿರ್ದೇಶಕಿ ಸುಮಾ ಎ. ರೈ, ಪ್ರಮುಖರಾದ ಕಾವು ಹೇಮನಾಥ ಶೆಟ್ಟಿ, ಮಹಮ್ಮದ್ ಬಡಗನ್ನೂರು, ಜಯಪ್ರಕಾಶ್ ಬದಿನಾರ್, ಕೃಷ್ಣಪ್ರಸಾದ್ ಬೊಳ್ಳಾವು, ಯೋಗೀಶ್ ಸಾಮಾನಿ ಉಪಸ್ಥಿತರಿದ್ದರು.