Published
4 months agoon
By
Akkare News
ಹಾಸನ (ಅ.25): ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಕೊನೆಗೊಂಡಿದ್ದು, ಶುಕ್ರವಾರ ನಡೆದ ಹುಂಡಿ ಎಣಿಕೆ ನಂತರದಲ್ಲಿ ಈ ಬಾರಿ ₹25.59 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಇದು ದೇಗುಲದ ಇತಿಹಾಸದಲ್ಲೇ ಅತ್ಯಧಿಕ ಕಾಣಿಕೆಯಾಗಿದೆ.
ಸುಮಾರು ೩೦೦ಕ್ಕೂ ಹೆಚ್ಚು ಸಿಬ್ಬಂದಿ ಎಣಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಹಾಗೂ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ದೇವರ ಹುಂಡಿಯಲ್ಲಿ ಹಣದ ಜೊತೆಗೆ 75 ಗ್ರಾಂ ಚಿನ್ನ, ೧ ಕೇಜಿ ೫೮ ಗ್ರಾಂ ಬೆಳ್ಳಿ ಮತ್ತು ತಾಮ್ರದ ವಸ್ತುಗಳು ಪತ್ತೆಯಾಗಿವೆ. ಜೊತೆಗೆ, ಅಮೆರಿಕದ ಐದು ಡಾಲರ್, ಇಂಡೋನೇಷ್ಯಾ ಮತ್ತು ಮಾಲ್ಡೀವ್ಸ್ ರಾಷ್ಟ್ರಗಳ ಕರೆನ್ಸಿ ನೋಟುಗಳೂ ಪತ್ತೆಯಾದವು.
ಹುಂಡಿ ಎಣಿಕೆ ವೇಳೆ ಈ ಬಾರಿ ಭಕ್ತರ ಭಾವನಾತ್ಮಕ ಮನವಿ ಪತ್ರಗಳೇ ಹೆಚ್ಚು ಪತ್ತೆಯಾಗಿವೆ. ‘ತಾಯಿ, ನನ್ನ ಕಷ್ಟ ದೂರಮಾಡು’, ‘ಕುಟುಂಬಕ್ಕೆ ಸುಖ, ಶಾಂತಿ ಕೊಡು’, ‘ಇಷ್ಟಾರ್ಥ ಸಿದ್ಧಿಸಲಿ’ ಎಂಬ ಬೇಡಿಕೆಗಳು ಹುಂಡಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕಂಡುಬಂದಿವೆ. ಈ ಬೇಡಿಕೆ ಪತ್ರಗಳನ್ನು ಹಣದಿಂದ ಪ್ರತ್ಯೇಕಿಸಿ ಗೌಪ್ಯವಾಗಿ ಸಂಗ್ರಹಿಸಿಡಲಾಗಿದೆ.
.ಹುಂಡಿ ಎಣಿಕೆ ಕಾರ್ಯವನ್ನು ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಅವರ ನೇತೃತ್ವದಲ್ಲಿ ಹಾಗೂ ದೇವಸ್ಥಾನ ಆಡಳಿತಾಧಿಕಾರಿ ಮಾರುತಿ ಅವರ ಮೇಲ್ವಿಚಾರಣೆಯಲ್ಲಿ ಸುಸೂತ್ರವಾಗಿ ನಡೆಸಲಾಯಿತು. ಈ ಬಾರಿ ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ಕಂಡುಬಂದ ಭಕ್ತರ ಸಂಖ್ಯೆಯೂ, ಅವರ ಅರ್ಪಣೆಗಳ ಪ್ರಮಾಣವೂ ಹಿಂದಿನ ವರ್ಷಗಳಿಗಿಂತ ಸಾಕಷ್ಟು ಹೆಚ್ಚಾಗಿತ್ತು.