Published
4 months agoon
By
Akkare News
ಸೇವೆಯನ್ನು ಸುಧಾರಿಸಲು ಸ್ಥಳೀಯ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಸಿಬ್ಬಂದಿಯನ್ನು ನೇಮಿಸುವಂತೆ ಬ್ಯಾಂಕುಗಳಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಗ್ರಹಿಸಿದರು.
ಎಸ್ಬಿಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾಷೆಯ ವಿಷಯವಾಗಿ ಗ್ರಾಹಕರೊಂದಿಗಿನ ಸಂವಹನ ಕ್ಷೀಣಿಸುತ್ತಿರುವುದರಿಂದ ಕ್ರೆಡಿಟ್ ಮಾಹಿತಿ ಕಂಪನಿಗಳ ಮೇಲಿನ ಅವಲಂಬನೆ ಹೆಚ್ಚಾಗಿದೆ. ಈ ಸಮಸ್ಯೆಯಿಂದಾಗಿ ಮಾಹಿತಿ ದಾಖಲಿಸುವ ಪ್ರಕ್ರಿಯೆಯೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದಾಗಿ ಗ್ರಾಹಕರಿಗೆ ಸಾಲ ನೀಡಲು ನಿರಾಕರಿಸುತ್ತಿರುವ ಪ್ರಕರಣಗಳೂ ಹೆಚ್ಚಾಗುತ್ತಿವೆ’ ಎಂದು ಎಚ್ಚರಿಸಿದ್ದಾರೆ.
ಸ್ಥಳೀಯ ಭಾಷೆಗಳನ್ನು ಮಾತನಾಡದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹೊರಹಾಕುತ್ತಿರುವ ಆಕ್ರೋಶ ಕುರಿತು ಮಾತನಾಡಿರುವ ನಿರ್ಮಲಾ ಸೀತಾರಾಮನ್, ‘ಬ್ಯಾಂಕ್ ಸಿಬ್ಬಂದ ನೇಮಕಾತಿ ಪ್ರಕ್ರಿಯೆಯಲ್ಲೂ ಬಹಳಷ್ಟು ಬದಲಾವಣೆ ಆಗಬೇಕಿದೆ. ನೇಮಕಾತಿಯಲ್ಲಿ ಸ್ಥಳೀಯ ಭಾಷೆ ಮಾತನಾಡುವವರಿಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು ಮತ್ತು ಸ್ಥಳೀಯ ಭಾಷೆ ಮಾತನಾಡಲು ಹೆಚ್ಚು ಒತ್ತು ನೀಡಬೇಕು’ ಎಂದಿದ್ದಾರೆ.
‘ನೇಮಕಾತಿ ಪ್ರಕ್ರಿಯೆ ಹೇಗಿರಬೇಕೆಂದರೆ, ಯಾವುದೇ ಶಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಅಲ್ಲಿನ ಗ್ರಾಹಕರನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಭಾಷೆಯಲ್ಲಿ ಮಾತನಾಡಬೇಕು. ಮೇಲಾಧಿಕಾರಿಗಳಿಗೆ ಸ್ಥಳೀಯ ಭಾಷೆ ತಿಳಿದಿಲ್ಲವಾದರೂ, ಶಾಖೆಯ ಮಟ್ಟದ ಅಧಿಕಾರಿಗಳು ಸಂವಹನ ನಡೆಸುವಷ್ಟು ಸಾಮರ್ಥ್ಯ ಇರಬೇಕು’ ಎಂದಿದ್ದಾರೆ.
ಸ್ಥಳೀಯ ಭಾಷೆಯಲ್ಲಿ ಸಿಬ್ಬಂದಿಯ ದಕ್ಷತೆಯ ಆಧಾರದಲ್ಲಿ ಅವರ ಮೌಲ್ಯಮಾಪನ ಮಾಡುವುದನ್ನು ನಾನು ಬಲವಾಗಿ ಬೆಂಬಲಿಸುತ್ತೇನೆ. ಬೇರೆ ಬೇರೆ ಮಾತೃಭಾಷೆಯ ಸಿಬ್ಬಂದಿಯನ್ನು ಅನ್ಯ ಪ್ರದೇಶಗಳಿಗೆ ವರ್ಗಾವಣೆ ಮಾಡುವ ಬ್ಯಾಂಕ್ಗಳ ನೀತಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ.
‘ಸ್ಥಳೀಯ ಭಾಷೆ ಬಲ್ಲ ಸಿಬ್ಬಂದಿಯಿಂದ ಗ್ರಾಹಕರೊಂದಿಗೆ ಸಂವಹನ ಮತ್ತು ಸಂಬಂಧ ಉತ್ತಮವಾಗಿರುತ್ತದೆ. ಇದರಿಂದ ವ್ಯವಹಾರವೂ ಉತ್ತಮವಾಗಿರುತ್ತದೆ. ಬ್ಯಾಂಕುಗಳು ಹೆಚ್ಚು ಸಾಲ ನೀಡಲು ಸಾಧ್ಯವಾಗಲಿದೆ. ಆಪ್ತ ವಾತಾವರಣ ಸೃಷ್ಟಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಉತ್ತಮ ಮಾರ್ಗ’ ಎಂದೂ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.
ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ಎಸ್ಬಿಐ ಅಧ್ಯಕ್ಷ ಸಿ.ಎಸ್. ಸೆಟ್ಟಿ, ‘ತನ್ನ ಗ್ರಾಹಕರೊಂದಿಗೆ ಸ್ಥಳೀಯ ಭಾಷೆಯಲ್ಲೇ ಉತ್ತಮ ಸಂಪರ್ಕ ಹೊಂದಲು ಸೂಕ್ತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವತ್ತ ಬ್ಯಾಂಕ್ ಯೋಜನೆ ರೂಪಿಸಿದೆ. ಇದಕ್ಕೆ ಕೃತಕ ಬುದ್ಧಿಮತ್ತೆ (ಎಐ) ಸಾಧನ ನೆರವಾಗಬಲ್ಲದು. ಇದರಿಂದ ಭಾಷೆ ಕಲಿಕೆಗೆ ತ್ವರಿತ ಪರಿಹಾರ ಮತ್ತು ಉತ್ತಮ ಸೇತುವೆಯಾಗಿಯೂ ನೆರವಾಗಲಿದೆ’ ಎಂದಿದ್ದಾರೆ.
‘ಈ ನಿಟ್ಟಿನಲ್ಲಿ ‘ಸ್ಪಾರ್ಕ್’ ಎಂಬ ಕಾರ್ಯಕ್ರಮವನ್ನು ಈಗಾಗಲೇ ಆರಂಭಿಸಲಾಗಿದೆ. ಭಾಷೆ ಸಂಬಂಧಿತ ಸಮಸ್ಯೆ ಸಹಿತ ಹಲವು ಸವಾಲುಗಳಿಗೆ ಇದು ಪರಿಹಾರವಾಗಿದೆ’ ಎಂದಿದ್ದಾರೆ.