Published
3 months agoon
By
Akkare News
ಪುತ್ತೂರು: ತನ್ನ ಸಹಪಾಠಿ ವಿದ್ಯಾರ್ಥಿನಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿಯನ್ನಾಗಿಸಿದ ಬಳಿಕ ವಂಚಿಸಿದ ಆರೋಪ ಎದುರಿಸುತ್ತಿರುವ ಶ್ರೀಕೃಷ್ಣನ ವಿವಾಹದ ವಿವಾದ ಮತ್ತೆ ಮುನ್ನಲೆಗೆ ಬಂದಿದೆ.
ತನ್ನ ಗೆಳತಿಗೆ ಪ್ರೀತಿಯ ನೆಪದಲ್ಲಿ ಮಗುವನ್ನು ಕರುಣಿಸಿ ನಂತರ ವಂಚನೆ ಮಾಡಿದ ಆರೋಪದಡಿ ಜೈಲುಪಾಲಾಗಿ ಜಾಮೀನು ಪಡೆದು ಹೊರ ಬಂದಿರುವ ಶ್ರೀಕೃಷ್ಣನಿಗೆ ಸಂತ್ರಸ್ತ ವಿದ್ಯಾರ್ಥಿನಿಯೊಂದಿಗೆ ಮದುವೆ ಮಾಡಲು ಮುಂದಾಗಿದ್ದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಮತ್ತೆ ಹೋರಾಟ ನಡೆಸಲು ಮುಂದಾಗಿದ್ದಾರೆ. ಈ ಮೂಲಕ ಒಂದು ಹಂತದಲ್ಲಿ ತಣ್ಣಗಾಗಿದ್ದ ವಿವಾದ ಮತ್ತೆ ಬಿಸಿಯೇರಿಸಿದೆ.
ಬಿಜೆಪಿ ಮುಖಂಡನ ಪುತ್ರನಿಂದ ಹಿಂದೂ ಯುವತಿಗೆ ಅನ್ಯಾಯವಾದರೂ ಯಾರೂ ನೆರವಿಗೆ ಧಾವಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಪ್ರತಿಭಾ ಕುಳಾಯಿ ಅವರು ಸಂತ್ರಸ್ತ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದರು. ಅಲ್ಲದೆ ನೊಂದ ವಿದ್ಯಾರ್ಥಿನಿಗೆ ಶ್ರೀಕೃಷ್ಣನೊಂದಿಗೆ ವಿವಾಹ ಮಾಡಿಸುವುದಾಗಿ ಭರವಸೆ ನೀಡಿದ್ದರು. ರಾಜ್ಯಾದ್ಯಂತ ಈ ವಿಚಾರ ಸುದ್ದಿಯಾಗಿ ಸಂಚಲನ ಸೃಷ್ಟಿಯಾಗಿತ್ತು. ವಿಶ್ವಕರ್ಮ ಸಮುದಾಯ ಮುಖಂಡ ಕೆ.ಪಿ.ನಂಜುಂಡಿ ಸಹಿತ ಹಲವು ಮುಖಂಡರು ಸಂತ್ರಸ್ತ ವಿದ್ಯಾರ್ಥಿನಿಯ ಬೆಂಬಲಕ್ಕೆ ನಿಂತಿದ್ದರು. ಆದರೆ ಕೆಲವು ದಿನಗಳಿಂದ ಶ್ರೀಕೃಷ್ಣನ ವಿವಾಹದ ವಿವಾದ ಅಷ್ಟಾಗಿ ಸುದ್ದಿ ಮಾಡಿರಲಿಲ್ಲ. ಈಗ ಮತ್ತೆ ಈ ವಿಚಾರ ಸದ್ದು ಮಾಡತೊಡಗಿದೆ.
ಆದಿತ್ಯವಾರದಂದು ಪ್ರತಿಭಾ ಕುಳಾಯಿ ಅವರು ಪುತ್ತೂರಿಗೆ ಕಾರ್ಯಕ್ರಮದ ನಿಮಿತ್ತ ಭೇಟಿ ನೀಡಿದ್ದ ವೇಳೆ ‘ನ್ಯೂಸ್ ಅಕ್ಕರೆ’ಯೊಂದಿಗೆ ಮಾತನಾಡಿ ನಾನು ಈ ಪ್ರಕರಣದ ಹಿಂದೆ ಇದ್ದೇನೆ. ಇದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಈ ವಿವಾದಕ್ಕೆ ಸಂಬಂಧಿಸಿ ಹೇಳಿಕೆ ನೀಡಿದಕ್ಕಾಗಿ ನನ್ನ ಮೇಲೆ ಒಂದು ಕೇಸು ದಾಖಲಾಗಿದೆ. ಅದು ನಾನು ಕೋರ್ಟಿನಲ್ಲಿ ನೋಡಿಕೊಳ್ಳುತ್ತೇನೆ. ಕೆಲವೇ ದಿನಗಳಲ್ಲಿ ನಾನು ಇದಕ್ಕೆ ಉತ್ತರ ಕೊಡಲು ಪುತ್ತೂರಿಗೆ ಬರುತ್ತೇನೆ. ಸಂತ್ರಸ್ತ ವಿದ್ಯಾರ್ಥಿನಿಗೆ ಮೋಸ ಮಾಡಿದಾತನೊಂದಿಗೆ ಮದುವೆ ಮಾಡಿಸಲು ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ. ಇವರ ಹೇಳಿಕೆ ಮತ್ತೆ ಕುತೂಹಲ ಕೆರಳಿಸಿದೆ.