Published
1 week agoon
By
Akkare News
ಪುತ್ತೂರು: ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಯುವಜನತೆಯನ್ನು ಸಂಘಟಿಸುವ ಉದ್ದೇಶ ಹೊಂದಿರುವ ಪ್ರತಿಷ್ಠಿತ ವಿಶ್ವ ಸಂಸ್ಥೆಯ ಯುನಿಸೆಫ್ ಯುವದ ರಾಷ್ಟ್ರೀಯ ಯುವ ಹವಾಮಾನ ಪರಿಣಾಮ ಸಮುದಾಯದ ಕರ್ನಾಟಕ ರಾಜ್ಯ ಮುಖ್ಯಸ್ಥರಾಗಿ ಪುತ್ತೂರಿನ ಶ್ರೀಕಾಂತ್ ಪೂಜಾರಿ ಬಿರಾವು ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯಾದ್ಯಂತ ಯುವಜನರಲ್ಲಿ ಪರಿಸರ ಜಾಗೃತಿ ಮೂಡಿಸುವುದು, ಹಸಿರು ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಮತ್ತು ಹವಾಮಾನ ವೈಪರೀತ್ಯದ ಕುರಿತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಈ ನೇಮಕಾತಿಯ ಮುಖ್ಯ ಉದ್ದೇಶವಾಗಿದೆ.
ಶ್ರೀಕಾಂತ್ ಪೂಜಾರಿ ಬಿರಾವು ಅವರು ಈಗಾಗಲೇ ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಯುವ ರಾಯಭಾರಿಯಾಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತರಬೇತುದಾರರಾಗಿ ಕಾರ್ಯನಿರ್ವಹಿಸಿರುತ್ತಾರೆ. ಅವರ ಈ ಹಿಂದಿನ ಯುವಜನ ಸಂಬಂಧಿಸಿದ ಸಾಧನೆ ಮತ್ತು ಯುವಜನರನ್ನು ಸಂಘಟಿಸುವ ಚಾತುರ್ಯವನ್ನು ಗುರುತಿಸಿ ವಿಶ್ವ ಸಂಸ್ಥೆಯ ಯುನಿಸೆಫ್ ಯುವದ ರಾಷ್ಟ್ರೀಯ ಯುವ ಹವಾಮಾನ ಒಕ್ಕೂಟವು ಕರ್ನಾಟಕ ರಾಜ್ಯದ ಈ ಜವಾಬ್ದಾರಿಯನ್ನು ಇವರಿಗೆ ನೀಡಿದೆ.
ರಾಜ್ಯದ ಪ್ರತಿ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಹವಾಮಾನ ಬದಲಾವಣೆಯ ಕುರಿತು ಜಾಗೃತಿ ಅಭಿಯಾನಗಳನ್ನು ನಡೆಸುವುದು, ಪರಿಸರ ಸ್ನೇಹಿ ಜೀವನಶೈಲಿಯನ್ನು ಪ್ರೋತ್ಸಾಹಿಸುವುದು ಮತ್ತು ಪರಿಸರ ಸಂರಕ್ಷಣೆಯಲ್ಲಿ ಯುವಜನರ ನೇರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಮುಖಾಂತರ ಯುವಜನರೊಂದಿಗೆ ತೊಡಗಿಸಿಕೊಳ್ಳಲಿದ್ದಾರೆ.
ಗ್ರಾಮೀಣ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಯುವಜನತೆಗೆ ತರಬೇತಿ,ಮಾರ್ಗದರ್ಶನ ನೀಡುತ್ತಿರುವ ಪುತ್ತೂರಿನ ಶ್ರೀಕಾಂತ್ ಪೂಜಾರಿ ಬಿರಾವು ಅವರಿಗೆ ಈ ಮಹತ್ವದ ಹುದ್ದೆ ಲಭಿಸಿರುವುದು ರಾಜ್ಯಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.