Published
1 year agoon
By
Akkare News
ಪುತ್ತೂರು: ಗ್ರಾಮ ಪಂಚಾಯತ್ ಕೋಡಿಂಬಾಡಿ ಹಾಗೂ ಗ್ರಾಮ ಪಂಚಾಯತ್ ಅರಿವು ಕೇಂದ್ರದ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಕೋಡಿಂಬಾಡಿ ಹಿ.ಪ್ರಾ. ಶಾಲಾ ವಠಾರದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಹಾಗೂ ಮಕ್ಕಳು ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿದರು. ಪ್ರಥಮ ದಿನ ಸಂಪನ್ಮೂಲ ವ್ಯಕ್ತಿಯಾಗಿ ಪೇರಲ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಯಶೋದಾ ಪಿ. ಭಾಗವಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯ ರಾಮಣ್ಣ ಗೌಡ ಗುಂಡೋಳೆ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಮೇಲ್ವಿಚಾರಕಿ ಕುಸುಮ ವಿ. ರೈ ಸ್ವಾಗತಿಸಿದರು. ಎಂ.ಎಸ್.ಡಬ್ಲ್ಯು ವಿದ್ಯಾರ್ಥಿನಿಯರಾದ ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿ ವೈಷ್ಣವಿ ವಂದಿಸಿದರು.
ಎರಡನೇ ದಿನದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆರ್ಟಿಸ್ಟ್, ಮೇಕಪ್ ರಂಗಭೂಮಿ ಕಲಾವಿದ ಪ್ರಸಾದ್ ಕುಮಾರ್ ಕೊಯಿಲ ಭಾಗವಹಿಸಿದ್ದರು. ಇವರು ಮಕ್ಕಳಿಗೆ ನೃತ್ಯ, ಭರತನಾಟ್ಯ, ಯಕ್ಷಗಾನ , ಮುಂತಾದ ಕಾರ್ಯಕ್ರಮಗಳಿಗೆ ಮುಖದ ಅಲಂಕಾರ ಹಾಗೂ ಇತರ ಡ್ಯಾನ್ಸ್, ಹಾಡು ಮುಂತಾದ ಚಟುವಟಿಕೆಗಳನ್ನು ಕಲಿಸಿಕೊಟ್ಟರು.
ಮೂರನೇ ದಿನದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಿಕ್ಷಕ ಪ್ರಕಾಶ್ ಕುಮಾರ್ ಅವರು ಮಕ್ಕಳಿಗೆ ಯೋಗ, ಧ್ಯಾನ ಹಾಗೂ ವಿವಿಧ ರೀತಿಯ ಚಿತ್ರಕಲೆಯನ್ನು ಕಲಿಸಿಕೊಟ್ಟರು. ನಾಲ್ಕನೇ ದಿನದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಕಡಬ ತಾಲೂಕಿನ ಪೆರಾಬೆ ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಮೇಲ್ವಿಚಾರಕಿ ಜಯಕುಮಾರಿ ಅವರು ಯೋಗ, ಧ್ಯಾನ ಹಾಗೂ ದೇವರ ಪ್ರಾರ್ಥನೆಯೊಂದಿಗೆ ಶಿಬಿರ ಪ್ರಾರಂಭಿಸಿ ಮಕ್ಕಳಿಗೆ ನಾಯಕತ್ವ ಗುಣ, ಆಡಳಿತ, ವಿವಿಧ ಆಟೋಟಗಳು ಮತ್ತು ಹರ್ಲಿ ಬರ್ಡ್ ನ ಚಟುವಟಿಕೆಗಳು, ಪಕ್ಷಿಗಳ ಆಹಾರ ಕ್ರಮ, ಜೀವನ ಕ್ರಮ, ವಲಸೆ ಮುಂತಾದ ಚಟುವಟಿಕೆಗಳನ್ನು ಮಕ್ಕಳಿಗೆ ಮಾಡಿಸಿದರು.