Published
7 months agoon
By
Akkare News
ಪುತ್ತೂರು: ಸ್ವರ್ಣೋದ್ಯಮಿ ಜಿ.ಎಲ್. ಆಚಾರ್ಯರ ಜನ್ಮ ಶತಮಾನೋತ್ಸವದ ಅಂಗವಾಗಿ ಪುತ್ತೂರಿನಲ್ಲಿ ಅಂತಾರಾಜ್ಯ ಮಟ್ಟದ ಶಿಕ್ಷಕ ಕವಿಗಳ “ಆಚಾರ್ಯ ಕವಿಗೋಷ್ಠಿ” ಹಾಗೂ ಗೀತಾ ಫಲ ಕೃತಿ ಬಿಡುಗಡೆ ಸಮಾರಂಭ ಆಗಸ್ಟ್ 4, ಭಾನುವಾರ ಮಧ್ಯಾಹ್ನ 2 ಗಂಟೆಗೆ ಪುತ್ತೂರಿನ ರೋಟರಿ ಜಿ.ಎಲ್. ಸಭಾಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಹುಬ್ಬಳ್ಳಿ, ದ.ಕ. ಜಿಲ್ಲಾ ಘಟಕ, ಮಂಗಳೂರು ಕಥಾಬಿಂದು ಪ್ರಕಾಶನ ಹಾಗೂ ಶತಮಾನೋತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ.
ಸಮಾರಂಭದ ಉದ್ಘಾಟನೆ ಹಾಗೂ ದೀಪ ಪ್ರಜ್ವಲನವನ್ನು ಸ್ವರ್ಣೋದ್ಯಮಿ ಜಿ.ಎಲ್. ಬಲರಾಮ ಆಚಾರ್ಯ ನೆರವೇರಿಸಲಿದ್ದಾರೆ. ಹಿರಿಯ ಪತ್ರಕರ್ತ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ. ವಿ.ಬಿ. ಅರ್ತಿಕಜೆ ಅಧ್ಯಕ್ಷತೆ ವಹಿಸುವರು.
ಶಿಕ್ಷಣ ಸೌರಭ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಜಯಾನಂದ ಪೆರಾಜೆ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದು, ಅವರ ಸಂಪಾದಕತ್ವದ ಭಗವದ್ಗೀತೆಯ ಕುರಿತು ಕವಿಗಳಿಂದ ರಚಿಸಲಾದ ಗೀತಾ ಫಲ ಕೃತಿ ಬಿಡುಗಡೆಗೊಳ್ಳಲಿದೆ. ಕೃತಿ ಅನಾವರಣವನ್ನು ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಸಾಹಿತಿ ಹಾಗೂ ಕಬಕ ಸರಕಾರಿ ಪ್ರೌಢಶಾಲಾ ಶಿಕ್ಷಕಿ ಡಾ. ಶಾಂತಾ ಪುತ್ತೂರು ಭಾಗವಹಿಸಲಿದ್ದಾರೆ. ಕಥಾಬಿಂದು ಪ್ರಕಾಶನದ ಪಿವಿ ಪ್ರದೀಪ್ ಕುಮಾರ್ ಶುಭಾಶಂಸನೆ ಸಲ್ಲಿಸಲಿದ್ದಾರೆ.
ಸಮಾರಂಭದ ಪೂರ್ವಭಾಗವಾಗಿ ಮಧ್ಯಾಹ್ನ 1.30 ರಿಂದ, ಡಾ. ವಾಣಿಶ್ರೀ ಸಾರಥ್ಯದ ಕಾಸರಗೋಡು ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ನೇತೃತ್ವದಲ್ಲಿ ಸಾಹಿತ್ಯ ಗಾನ-ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.