ಪುತ್ತೂರು: ಪುತ್ತೂರಿನಲ್ಲಿ ನಿರ್ಮಾಣಗೊಳ್ಳಲಿರುವ ಜಿಲ್ಲೆಯ ಮೊದಲ ಸರಕಾರಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟ ಇಲಾಖೆಗಳ ಜತೆ ಶಾಸಕ ಅಶೋಕ್ ರೈ ಸಮನ್ವಯ ಸಭೆ ನಡೆಸಿದರು.
ಶಾಸಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪುತ್ತೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ನೋಡೆಲ್ ಅ ಕಾರಿಯಾಗಿರುವ, ರಾಜೀವ್ ಗಾಂಧಿ ಆರೋಗ್ಯ ವಿ.ವಿ. ನಿರ್ದೇಶಕ ಲೋಹಿತ್ ಉಪಸ್ಥಿತರಿದ್ದರು.
320 ಹಾಸಿಗಳ ಮೆಡಿಕಲ್ ಕಾಲೇಜು ಆಸ್ಪತ್ರೆ, ಮೆಡಿಕಲ್ ಕಾಲೇಜು, 500 ಸಾಮರ್ಥ್ಯದ ವಿದ್ಯಾರ್ಥಿ ಹಾಸ್ಟೆಲ್, 500 ಸಾಮರ್ಥ್ಯದ ವಿದ್ಯಾರ್ಥಿನಿಯರ ಹಾಸ್ಟೆಲ್, ಬೋಧಕ ಸಿಬ್ಬಂದಿಗಳ ವಸತಿ ನಿಲಯಗಳು ನಿರ್ಮಾಣಗೊಳ್ಳಲಿದ್ದು, ಇದಕ್ಕೆ ಬೇಕಾದ ನೀರು ಪೂರೈಕೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪುತ್ತೂರು ನಗರಕ್ಕೆ ನೀರು ಪೂರೈಸುತ್ತಿರುವ ಜಲಸಿರಿ ಯೋಜನೆಯಲ್ಲಿ ನೀರಿನ ಲಭ್ಯತೆಯ ಬಗ್ಗೆ ಪರಿಶೀಲಿಸಲು ಸೂಚಿಸಲಾಯಿತು. ಶಾಸಕರು ಮಾತನಾಡಿ, ಪುತ್ತೂರು- ಉಪ್ಪಿನಂಗಡಿ ನಡುವಿನ ಕಟಾರದಲ್ಲಿ ಕುಮಾರಧಾರಾ ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣವಾಗಲಿದ್ದು, ಬಳಿಕ ಅಲ್ಲಿಂದ ನೀರು ಪೂರೈಸಲು ಸಾಧ್ಯವಿದೆ ಎಂದರು. ಮೆಡಿಕಲ್ ಕಾಲೇಜ್, ಆಸ್ಪತ್ರೆ, ಹಾಸ್ಟೆಲ್, ವಸತಿ ನಿಲಯಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಬಗ್ಗೆ ಚರ್ಚೆ ನಡೆಸಲಾಯಿತು. ಹೊಸದಾಗಿ ಎಕ್ಸ್ ಪ್ರೆಸ್ ಫೀಡರ್ ಸ್ಥಾಪನೆ ಸಂಬಧ ಮೆಸ್ಕಾಂಗೆ ಸೂಚನೆ ನೀಡಲಾಯಿತು. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣವಾಗಲಿರುವ ಸೇಡಿಯಾಪುವಿನ 40 ಎಕರೆ ಜಾಗದಲ್ಲಿ ಅರಣ್ಯ ಜಮೀನು ಕೂಡ ಇರುವ ಕಾರಣ ಮರಗಳ ತೆರವು ವಿಚಾರದಲ್ಲಿ ಚರ್ಚೆ ನಡೆಯಿತು. ಅಗತ್ಯವಿರುವಷ್ಟು ಮರಗಳನ್ನಷ್ಟೇ ಕತ್ತರಿಸಬೇಕು. ಉಳಿದ ಕಾಡು ಹಾಗೇ ಇರಲಿ ಎಂದು ಶಾಸಕರು ತಿಳಿಸಿದರು. ಆಪ್ಟಿಕ್ ಪೈಬರ್ ಕೇಬಲ್ ಲೈನ್ ಅಳವಡಿಸುವ ವಿಚಾರದಲ್ಲಿ ಬಿಎಸ್ಸೆನ್ನೆಲ್ ಸಂಸ್ಥೆಗೆ ಬರೆಯಲು ನಿರ್ಧರಿಸಲಾಯಿತು. ನ್ಯಾಶನಲ್ ಮೆಡಿಕಲ್ ಕಮಿಶನ್ ಮಾನದಂಡಗಳ ಪ್ರಕಾರ ಹಾಲಿ ತಾಲೂಕು ಸರಕಾರಿ ಆಸ್ಪತ್ರೆಯನ್ನು ನವೀಕರಿಸಲು, ಆಸ್ಪತ್ರೆಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆ. ತಾಲೂಕಿನಲ್ಲಿ 1 ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಒಂದು ನಗರ ಆರೋಗ್ಯ ಕೇಂದ್ರವನ್ನು ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ ಎಂದು ತಿಳಿಸಲಾಯಿತು.
ಪುತ್ತೂರು ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡ ಸಮುಚ್ಚಯ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಮುಂದಿನ ವರ್ಷದಿಂದ ಮೆಡಿಕಲ್ ಕಾಲೇಜು ಆರಂಭಿಸಲು ಅನುಕೂಲವಾಗುವಂತೆ ಖಾಲಿ ಇರುವ ಸರಕಾರಿ ಕಟ್ಟಡಗಳನ್ನು ಗುರುತಿಸಲು ಸಭೆಯಲ್ಲಿ ಶಾಸಕರು ಸೂಚಿಸಿದರು. ಕಟ್ಟಡ ಪೂರ್ಣಗೊಳ್ಳುವವರೆಗೆ ತಾತ್ಕಾಲಿಕ ನೆಲೆಯಲ್ಲಿ ಖಾಲಿ ಸರಕಾರಿ ಕಟ್ಟಡಗಳನ್ನು ಬಳಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ತಾಲೂಕು ಆರೋಗ್ಯ ಅ ಕಾರಿ ಡಾ.ದೀಪಕ್ ರೈ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ್ ರೈ, ವಲಯ ಅರಣ್ಯ ಅಧಿಕಾರಿ ಕಿರಣ್ ಬಿ.ಎಂ., ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಎ., ನಗರ ಯೋಜನಾ ಪ್ರಾ ಕಾರದ ಸದಸ್ಯ ನಿಹಾಲ್ ಶೆಟ್ಟಿ, ಜಲಸಿರಿ ಯೋಜನೆ ಅ ಕಾರಿಗಳು ಉಪಸ್ಥಿತರಿದ್ದರು.