Connect with us

ಅಭಿವೃದ್ಧಿ ಕಾರ್ಯಗಳು

ಪುತ್ತೂರು ಮೆಡಿಕಲ್‌ ಕಾಲೇಜು ನಿರ್ಮಾಣದಲ್ಲಿ ಮಹತ್ವದ ಪ್ರಗತಿ, ವೈದ್ಯಕೀಯ ಶಿಕ್ಷಣ ಇಲಾಖೆಗೆ ತಲುಪಿದ ಕಡತ

Published

on

ಪುತ್ತೂರು :ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆಯಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದೆ. ಕಾಲೇಜು ನಿರ್ಮಾಣಕ್ಕೆ ಪೂರ್ವಭಾವಿಯಾಗಿ 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡಬೇಕಾಗಿದ್ದು, ಇದರ ಎಲ್ಲ ಕಡತಗಳನ್ನು ಆರೋಗ್ಯ ಇಲಾಖೆಯು ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದೆ.

ಕಡತಗಳನ್ನು ಶೀಘ್ರ ಹಸ್ತಾಂತರ ಮಾಡುವಂತೆ ಶಾಸಕ ಅಶೋಕ್‌ ರೈ ಇಲಾಖಾ ಮಟ್ಟದಲ್ಲಿ ಒತ್ತಡ ಹಾಕಿದ್ದರು. ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್‌ ಕಾಲೇಜು ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ ಪುತ್ತೂರು ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಕಳೆದ ಅ.20ರಂದು ಪುತ್ತೂರಿನಲ್ಲಿ ಅಶೋಕ ಜನಮನ ಸಮಾವೇಶದಲ್ಲಿ ಭಾಗವಹಿಸಿದ್ದ ಸಿಎಂ ಯಾವುದೇ ಕಾರಣಕ್ಕೂ ಪುತ್ತೂರು ಮೆಡಿಕಲ್‌ ಕಾಲೇಜು ಭರವಸೆಯನ್ನು ಕೈಬಿಡುವುದಿಲ್ಲ. ಎಷ್ಟು ಖರ್ಚಾದರೂ ಸರಿ, ನಿರ್ಮಿಸಿಯೇ ಸಿದ್ಧ ಎಂದು ಘೋಷಿಸಿದ್ದರು.

ಆದರೆ ಆಸ್ಪತ್ರೆ ಮೇಲ್ದರ್ಜೆ ಸಂಬಂಧ ಕಡತ ಆರೋಗ್ಯ ಇಲಾಖೆಯಲ್ಲೇ ಇದ್ದ ಕಾರಣ ಪುತ್ತೂರಿನ ಸೇಡಿಯಾಪು ಎಂಬಲ್ಲಿನ ಪ್ರಸ್ತಾವಿತ 40 ಎಕರೆ ಜಾಗದಲ್ಲಿ 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಪ್ರಕ್ರಿಯೆಗೆ ಹಿನ್ನಡೆ ಉಂಟಾಗಿತ್ತು. ಹೀಗಾಗಿ ಕಡತ ವರ್ಗಾವಣೆಗೆ ಶಾಸಕರು ಆಗ್ರಹಿಸಿದ್ದರು.

ಇದೀಗ ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯವರು ಅಧಿಸೂಚನೆ ಹೊರಡಿಸಿ, ಸರಕಾರಿ ಆಸ್ಪತ್ರೆ ಮೇಲ್ದರ್ಜೆ ಸಂಬಂಧದ ಬಜೆಟ್‌ ಘೋಷಣೆಯ ಕಡತವನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ಪ್ರಕಟಿಸಿದ್ದಾರೆ.

ಯಾಕಾಗಿ ಈ ಕ್ರಮ?

ಮೆಡಿಕಲ್‌ ಕಾಲೇಜಿಗೆ ಬೇಕಾದ 300 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಬೇಕಾದರೆ 20 ಎಕರೆ ಕನಿಷ್ಠ ಜಾಗ ಬೇಕಾಗುತ್ತದೆ. ಒಂದು ವೇಳೆ ಎರಡು ಕಡೆ ಜಾಗವಿದ್ದಲ್ಲಿ ಅವುಗಳ ಮಧ್ಯೆ 10 ಕಿ.ಮೀ. ಗಳಿಗಿಂತ ಹೆಚ್ಚು ಅಂತರ ಇರಬಾರದು ಮತ್ತು ಒಂದು ಕಡೆ ಕನಿಷ್ಠ 10 ಎಕರೆ ಜಾಗ ಇರಲೇ ಬೇಕು ಎಂಬುದು ನಿಯಮ. ಆದರೆ ಪುತ್ತೂರಿನಲ್ಲಿ ಈಗಿರುವ ತಾಲೂಕು ಆಸ್ಪತ್ರೆಯು 5.16 ಎಕರೆ ಜಾಗ ಹೊಂದಿದೆ. ಇದರಲ್ಲಿ 300 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲು ಸಾಧ್ಯವಿಲ್ಲ. ಹೊಸ ಆಸ್ಪತ್ರೆ ನಿರ್ಮಾಣಕ್ಕೆ 200 ಕೋಟಿ ಅನುದಾನ ಬೇಕಾಗಿದೆ. ಹಾಲಿ ತಾಲೂಕು ಅಸ್ಪತ್ರೆಯು ಆರೋಗ್ಯ ಇಲಾಖೆಯ ಅಡಿಯಲ್ಲಿರುವ ಕಾರಣ ಇಲ್ಲಿ 300 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಇಡೀ ಕಡತವನ್ನೇ ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಕಾನೂನಿನ ಈ ತೊಡಕು ಇರುವ ಕಾರಣ ಶಾಸಕರು ಕಡತ ಹಸ್ತಾಂತರಕ್ಕೆ ಮನವಿ ಮಾಡಿದ್ದರು. ಇದೀಗ ಕಡತ ಹಸ್ತಾಂತರ ಆಗಿರುವ ಕಾರಣ ವೈದ್ಯಕೀಯ ಶಿಕ್ಷಣ ಇಲಾಖೆಯಿಂದಲೇ ಹೊಸ ಆಸ್ಪತ್ರೆಯು ಸೇಡಿಯಾಪು ಎಂಬಲ್ಲಿನ 40 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲು ಅವಕಾಶವಾಗಲಿದೆ.


ತಾಲೂಕು ಆಸ್ಪತ್ರೆ ಹೇಗಿದೆ?
ಪ್ರಸ್ತುತ ನಗರದ ಹೃದಯ ಭಾಗದಲ್ಲಿರುವ ತಾಲೂಕು ಆಸ್ಪತ್ರೆಗೆ ಪ್ರತೀ ದಿನ ಸರಾಸರಿ 500 ಹೊರ ರೋಗಿಗಳು ಬರುತ್ತಿದ್ದಾರೆ. ಸರಾಸರಿ 70 ಒಳ ರೋಗಿಗಳು ಇರುತ್ತಾರೆ. ಮಳೆಗಾಲವೂ ಸೇರಿದಂತೆ ಕೆಲವು ಸಂದರ್ಭದಲ್ಲಿ ನೂರು ಒಳರೋಗಿಗಳಿದ್ದು, ಹೆಚ್ಚಿನ ಅವಕಾಶವಿಲ್ಲದ ಕಾರಣ ಜಿಲ್ಲಾ ಸರಕಾರಿ ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗುತ್ತಾರೆ. ಪ್ರತೀ ತಿಂಗಳು ಸರಾಸರಿ 90 ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದು, ಸರಾಸರಿ 100 ಹೆರಿಗೆಗಳಾಗುತ್ತಿವೆ. ಈ ಆಸ್ಪತ್ರೆಗೆ 5.16 ಎಕರೆ ಜಾಗವಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version