ವಿಟ್ಲ: ಭಾರತೀಯ ಸೇನೆಗೆ ಅಗ್ನಿವೀರ್ ಆಗಿ ನೂತನವಾಗಿ ನೇಮಕಗೊಂಡು, ಪುಣಚ ಗ್ರಾಮಕ್ಕೆ ಕೀರ್ತಿ ತಂದಿರುವ ವೀರ ತರುಣರಾದ ಬಳಂತಿಮೊಗರು ಮುರಳಿ ಹಾಗೂ ಅಜೇರು ಶ್ರವಣೇಶ್ ರವರನ್ನು ವಿಟ್ಲ ಬ್ಲಾಕ್ ಕಾಂಗ್ರೆಸ್ ಹಾಗೂ ಪುಣಚ ವಲಯ ಕಾಂಗ್ರೆಸ್ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು.
ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ರವರ ನೇತೃತ್ವದಲ್ಲಿ ಇಂದು ಪುಣಚದಲ್ಲಿರುವ ಇಬ್ಬರೂ ಸಾಧಕರ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ದೇಶ ಸೇವೆಗೆ ಆಯ್ಕೆಯಾದ ಯುವಕರಿಗೆ ಶಾಲು ಹೊದಿಸಿ, ಸಿಹಿ ಹಂಚಿ ಹಾರ್ದಿಕವಾಗಿ ಸನ್ಮಾನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಗ್ರಾಮೀಣ ಭಾಗದ ಇಬ್ಬರು ಯುವಕರು ಕಠಿಣ ಪರಿಶ್ರಮದಿಂದ ದೇಶದ ಹೆಮ್ಮೆಯ ಸೇನೆಗೆ ಆಯ್ಕೆಯಾಗಿರುವುದು ಇಡೀ ಜಿಲ್ಲೆಗೆ ಮತ್ತು ನಮ್ಮ ಪುಣಚ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ. ಇವರ ದೇಶ ಸೇವೆ ಇತರ ಯುವಕರಿಗೂ ಪ್ರೇರಣೆಯಾಗಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಎಸ್. ಮುಹಮ್ಮದ್, ವಿಟ್ಲ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀಧರ್ ಶೆಟ್ಟಿ, ಬ್ಲಾಕ್ ಎಸ್ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ವಲಯ ಅಧ್ಯಕ್ಷರುಗಳಾದ ಸಂತೋಷ್ ಶೆಟ್ಟಿ, ಝೆವಿಯರ್ ಡಿಸೋಜ ಉಪಸ್ಥಿತರಿದ್ದರು. ಅಲ್ಲದೆ ಪಕ್ಷದ ಪ್ರಮುಖರಾದ ಆಲ್ಬರ್ಟ್ ಡಿಸೋಜ, ಸುಂದರ ಸಾಲ್ಯಾನ್, ಶಿವರಾಮ ನಾಯ್ಕ, ದಿವಾಕರ ತೋರಣಕಟ್ಟೆ, ಗೋವಿಂದ ನಾಯ್ಕ, ಝೆವಿಯರ್ ಪೆರೇರೋ ಸೇರಿದಂತೆ ಹಲವು ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿ ನೂತನ ಅಗ್ನಿವೀರರನ್ನು ಪ್ರೋತ್ಸಾಹಿಸಿದರು.