ಉಡುಪಿ, ಆಗಸ್ಟ್ 08: ಉಡುಪಿ ಅಗಸ್ಟ್ 08: ಮುದರಂಗಡಿ ಪೇಟೆಯಲ್ಲಿ ಉದ್ಯಮಿ ಡೇವಿಡ್ ಡಿ’ಸೋಜಾ (55) ಅವರನ್ನು ಕ್ರೂರವಾಗಿ ಶೂಟ್ ಮಾಡಿ ಕೊಲೆಗೈದು ಪರಾರಿಯಾಗಿದ್ದ ಆರೋಪಿಗಳ ಪೈಕಿ ರಾಜು ಎಂಬಾತನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಎನ್ಕೌಂಟರ್ ಮಾಡಿ ಬಂಧಿಸಿದ್ದಾರೆ. ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಪಿಎಸ್ಐ ಗುಂಡು ಹಾರಿಸಿದ್ದಾರೆ.
ಶುಕ್ರವಾರ ಅಪರಾಹ್ನ 3.50ರ ವೇಳೆಗೆ ಮುದರಂಗಡಿ ಚರ್ಚ್ ಎದುರಿಗಿದ್ದ ತಮ್ಮ ‘ಪ್ರಿನ್ಸ್ ಪಾಯಿಂಟ್’ ಉದ್ಯಮ ಸಂಸ್ಥೆಯ ಮುಂಭಾಗ ಡೇವಿಡ್ ಡಿ’ಸೋಜಾ ಅವರು ಕಾರು ಹತ್ತಲು ಹೋಗುತ್ತಿದ್ದಾಗ, ಬೈಕ್ನಲ್ಲಿ ಬಂದ ಗಡ್ಡಧಾರಿ ದುಷ್ಕರ್ಮಿಯೊಬ್ಬ ತೀರಾ ಹತ್ತಿರದಿಂದ ತಲೆಗೆ ಗುಂಡಿಕ್ಕಿದ್ದ. ಡೇವಿಡ್ ನೆಲಕ್ಕುರುಳಿದ ಮೇಲೆಯೂ ಎದೆಗೆ ಮತ್ತಷ್ಟು ಗುಂಡು ಹಾರಿಸಿ, ಸಿದ್ಧವಾಗಿದ್ದ ಬೈಕ್ನಲ್ಲಿ ಕಿಲ್ಲರ್ಗಳು ಎಸ್ಕೇಪ್ ಆಗಿದ್ದರು. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಡೇವಿಡ್ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ರಾಜು ಎಂಬಾತನನ್ನು ಕಾಪು ಪಿಎಸ್ಐ ತೇಜಸ್ವಿ ಹಾಗೂ ಕಾರ್ಕಳ ಗ್ರಾಮಾಂತರ ಪಿಎಸ್ಐ ಪ್ರಸನ್ನ ಅವರ ಜಂಟಿ ತಂಡ ಬಂಧಿಸಿ ಕರೆತರುತ್ತಿತ್ತು. ಬೈಂದೂರು ಸಮೀಪದ ಒತ್ತಿನೆಣೆ ಬಳಿ ತಲುಪುತ್ತಿದ್ದಂತೆ ಆರೋಪಿ ರಾಜು, ಪೊಲೀಸರ ಮೇಲೆ ಏಕಾಏಕಿ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ತಕ್ಷಣವೇ ಕಾರ್ಯಪ್ರವೃತ್ತರಾದ ಕಾಪು ಪಿಎಸ್ಐ ತೇಜಸ್ವಿ ಅವರು ತಮ್ಮ ಸರ್ವೀಸ್ ಪಿಸ್ತೂಲ್ನಿಂದ ಆರೋಪಿಯ ಕಾಲಿಗೆ ಗುಂಡು ಹೊಡೆದು ಆತನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯ ದಾಳಿಯಿಂದ ಪಿಎಸ್ಐ ತೇಜಸ್ವಿ ಅವರಿಗೂ ಗಾಯಗಳಾಗಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹರಿರಾಮ್ ಶಂಕರ್ ಭೇಟಿ ನೀಡಿ ಪಿಎಸ್ಐ ತೇಜಸ್ವಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ನಡೆದ ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಮೆಟ್ಟಿಜಜ್ಜಿದ ಪೊಲೀಸ್ ತಂಡದ ಕ್ಷಿಪ್ರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಕೃತ್ಯದಲ್ಲಿದ್ದ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.