ಮಂಗಳೂರು : ಕರಾವಳಿಯ ಮಣ್ಣಿಗೆ ಭಾವನೆಗಳನ್ನು ಕೆರಳಿಸುವ ರಾಜಕಾರಣಕ್ಕಿಂತ ಜನರ ಬದುಕನ್ನು ಹಸನು ಮಾಡುವ ನೈಜ ಅಭಿವೃದ್ಧಿಯ ಸ್ಪರ್ಶ ಬೇಕಿತ್ತು. ಮಂಗಳೂರಿನ ಪವಿತ್ರ ನೆಲದಲ್ಲಿ ಜರುಗಿದ ಸಚಿವ ಸಂಪುಟ ಸಭೆಯ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕರಾವಳಿಯ ಕೋಟ್ಯಂತರ ಜನರ ಭಾವನಾತ್ಮಕ ಕನಸುಗಳಿಗೆ ಜೀವ ತುಂಬಿ ಹೊಸ ಇತಿಹಾಸವನ್ನೇ ಬರೆದಿದೆ. “ನಾವು ಜನರ ಭಾವನೆಗಳ ಮೇಲೆ ರಾಜಕೀಯ ಮಾಡುವುದಿಲ್ಲ, ಬದಲಾಗಿ ಅವರ ಬದುಕಿನ ಏಳಿಗೆಗಾಗಿ ಆಡಳಿತ ನಡೆಸುತ್ತೇವೆ” ಎಂಬ ದೃಢ ಸಂಕಲ್ಪ ಈ ಸಭೆಯ ಪ್ರತಿಯೊಂದು ದಿಟ್ಟ ನಿರ್ಧಾರದಲ್ಲೂ ನಿಚ್ಚಳವಾಗಿ ಸಾಬೀತಾಗಿದೆ.
ಕಳೆದ ಐದು ದಶಕಗಳಿಂದ ಪ್ರತಿಯೊಬ್ಬ ತುಳುವನ ಎದೆಯಾಳದಲ್ಲಿದ್ದ ಕಣ್ಣೀರಿನ ಕೂಗು ಮತ್ತು ಸುದೀರ್ಘ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ. ಸುಮಾರು ಎರಡೂವರೆ ಸಾವಿರ ವರ್ಷಗಳ ಭವ್ಯ ಇತಿಹಾಸ, ಶ್ರೀಮಂತ ಸಾಹಿತ್ಯ, ಯಕ್ಷಗಾನ ಹಾಗೂ ಜಾನಪದ ಪರಂಪರೆಯನ್ನು ಹೊತ್ತಿರುವ ನಮ್ಮ ಹೆಮ್ಮೆಯ ತಾಯಿ ನುಡಿ ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ನೀಡಿರುವುದು ಪ್ರತಿಯೊಬ್ಬ ಕರಾವಳಿಗನ ಕಣ್ಣಂಚಿನಲ್ಲಿ ಆನಂದಭಾಷ್ಪ ತರಿಸಿದೆ. ಈ ಮೂಲಕ ನಮ್ಮ ನೆಲದ ಅಸ್ಮಿತೆಗೆ, ತಾಯ್ನುಡಿಗೆ ಸಿಗಬೇಕಾದ ರಾಜಮರ್ಯಾದೆಯನ್ನು ಒದಗಿಸಿಕೊಟ್ಟು, ತುಳುನಾಡಿನ ಹಿರಿಯರ ಕನಸನ್ನು ನನಸು ಮಾಡಿದ ಮಹಾನ್ ಕೃತಜ್ಞತೆ ಈ ನಿರ್ಧಾರದ ಹಿಂದಿದೆ.ಕರಾವಳಿಯ ಸಮಗ್ರ ವಿಕಾಸಕ್ಕೆ ಪೂರಕವಾಗಿ ಸಾರಿಗೆ, ಸಂಪರ್ಕ ಮತ್ತು ಮೂಲಸೌಕರ್ಯ ಜಾಲವನ್ನು ಬಲಪಡಿಸಲು ಸರ್ಕಾರ ಮಹತ್ವದ ಯೋಜನೆಗಳನ್ನು ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿಗಳ ಆಧುನೀಕರಣ, ಗ್ರಾಮೀಣ ಸಂಪರ್ಕ ರಸ್ತೆಗಳ ಬಲವರ್ಧನೆ, ಸೇತುವೆಗಳ ನಿರ್ಮಾಣ, ಬಂದರುಗಳ ವಿಸ್ತರಣೆ ಮತ್ತು ನಿರಂತರ ಕುಡಿಯುವ ನೀರಿನ ಯೋಜನೆಗಳಿಗೆ ವಿಶೇಷ ಅನುದಾನ ಒದಗಿಸುವ ಮೂಲಕ ಜನಜೀವನವನ್ನು ಸುಗಮಗೊಳಿಸುವ ಕಾಯಕಲ್ಪಕ್ಕೆ ಮುನ್ನುಡಿ ಬರೆಯಲಾಗಿದೆ.
ಕರಾವಳಿಯ ಅಪಾರ ನೈಸರ್ಗಿಕ ಸಂಪತ್ತನ್ನು ಬಳಸಿಕೊಂಡು ಅಂತಾರಾಷ್ಟ್ರೀಯ ಗುಣಮಟ್ಟದ ಪ್ರವಾಸೋದ್ಯಮ ತಾಣಗಳನ್ನಾಗಿ ರೂಪಿಸಲು ಬೃಹತ್ ಕ್ರಿಯಾಯೋಜನೆ ರೂಪಿಸಲಾಗಿದೆ. ಪ್ರಾಕೃತಿಕ ಸೌಂದರ್ಯದ ಕಡಲತೀರಗಳ ಅಭಿವೃದ್ಧಿ (ಬೀಚ್ ಟೂರಿಸಂ), ಜಲಕ್ರೀಡೆಗಳು, ಬ್ಯಾಕ್ವಾಟರ್ ಪ್ರವಾಸೋದ್ಯಮ, ಪರಿಸರ ಸ್ನೇಹಿ (ಇಕೋ) ಪ್ರವಾಸೋದ್ಯಮ ಹಾಗೂ ಧಾರ್ಮಿಕ ಸರ್ಕ್ಯೂಟ್ಗಳ ಏಕೀಕರಣದ ಮೂಲಕ ದೇಶ-ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ದೃಢ ಹೆಜ್ಜೆಯನ್ನಿಡಲಾಗಿದೆ. ಇದು ಸ್ಥಳೀಯ ಮಟ್ಟದಲ್ಲಿ ಟ್ಯಾಕ್ಸಿ ಚಾಲಕರಿಂದ ಹಿಡಿದು ಹೋಟೆಲ್, ಹೋಂಸ್ಟೇ ಮತ್ತು ಸಣ್ಣ ವ್ಯಾಪಾರಿಗಳವರೆಗೆ ಎಲ್ಲರಿಗೂ ಆರ್ಥಿಕ ಪುನಶ್ಚೇತನ ನೀಡಲಿದೆ.
ಕೇವಲ ಭಾಷಾ ಪ್ರೇಮಕ್ಕಷ್ಟೇ ಸೀಮಿತವಾಗದೆ, ಇಲ್ಲಿನ ಯುವಜನತೆಯ ಭವಿಷ್ಯಕ್ಕೂ ಸರ್ಕಾರ ಭದ್ರ ಬುನಾದಿ ಹಾಕಿದೆ. ಪ್ರತಿಭಾವಂತ ಕರಾವಳಿಯ ಯುವಕರು ಉದ್ಯೋಗಕ್ಕಾಗಿ ಮುಂಬೈ, ಬೆಂಗಳೂರು ಇಲ್ಲವೇ ಗಲ್ಫ್ ರಾಷ್ಟ್ರಗಳಿಗೆ ವಲಸೆ ಹೋಗುವ ನೋವಿಗೆ ಮುಕ್ತಿ ಹಾಡಲು ಸ್ಥಳೀಯವಾಗಿಯೇ ಸಾವಿರಾರು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಐಟಿ, ಸಮುದ್ರೋತ್ಪನ್ನ ಕೈಗಾರಿಕೆಗಳು, ಪ್ರವಾಸೋದ್ಯಮ ಮತ್ತು ಬಂದರು ಆಧಾರಿತ ಯೋಜನೆಗಳ ಮೂಲಕ ಕರಾವಳಿಯ ಆರ್ಥಿಕತೆಗೆ ನವಚೈತನ್ಯ ತುಂಬುವ ನಿರ್ಧಾರಗಳು ಈ ಮಣ್ಣಿನ ಬದುಕನ್ನು ಹಸನು ಮಾಡಲಿವೆ. ಇದರೊಂದಿಗೆ ಕರಾವಳಿಯ ಪಾವಿತ್ರ್ಯತೆ ಮತ್ತು ಸೌಹಾರ್ದತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಪುಣ್ಯಸ್ಥಳಗಳು ಮತ್ತು ದೈವಸ್ಥಾನಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಟ್ಟಿರುವುದು ಭಕ್ತ ಸಮೂಹದಲ್ಲಿ ಧನ್ಯತಾ ಭಾವ ಮೂಡಿಸಿದೆ. ತಾಯ್ನುಡಿಯ ಗೌರವ, ಯುವಜನತೆಯ ಉದ್ಯೋಗದ ಆಸೆ, ಸುಭದ್ರ ಮೂಲಸೌಕರ್ಯ ಮತ್ತು ಶ್ರದ್ಧಾ ಕೇಂದ್ರಗಳ ರಕ್ಷಣೆಯನ್ನು ಒಂದೇ ವೇದಿಕೆಯಲ್ಲಿ ಸಾಕಾರಗೊಳಿಸಿದ ಈ ಸಂಪುಟ ಸಭೆಯು ಕರಾವಳಿ ಜನರ ಬದುಕಿನಲ್ಲಿ ನವೋದಯದ ಅಧ್ಯಾಯವನ್ನು ತೆರೆದಿದೆ. – ಪದ್ಮರಾಜ್ ಆರ್. ಪೂಜಾರಿ ಅಧ್ಯಕ್ಷರು, ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ