ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ ದೇವಾಲಯಗಳ ಚರ-ಸ್ಥಿರಾಸ್ತಿಗಳು, ಚಿನ್ನ-ಬೆಳ್ಳಿ ಆಭರಣಗಳು ಹಾಗೂ ಪುರಾತನ ಬೆಲೆಬಾಳುವ ವಸ್ತುಗಳ ಸಮಗ್ರ ವಿವರಗಳನ್ನು ಡಿಜಿಟಲೀಕರಣಗೊಳಿಸಿ ಅಧಿಕೃತ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಕುರಿತು ವಿವರವಾದ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಸರ್ಕಾರ ಸಲ್ಲಿಸಬೇಕಾದ ವರದಿಯಲ್ಲಿ ರಾಜ್ಯ, ಜಿಲ್ಲೆ ಹಾಗೂ ತಾಲೂಕುವಾರು ದೇವಾಲಯಗಳ ಆಸ್ತಿಗಳ ಸಂಪೂರ್ಣ ಪಟ್ಟಿ ಇರಬೇಕು. ಪ್ರತಿಯೊಂದು ದೇವಾಲಯದಲ್ಲಿರುವ ಚಿನ್ನಾಭರಣಗಳು, ನಾಣ್ಯಗಳು, ವಿಗ್ರಹಗಳು, ಪವಿತ್ರ ಸಾಮಗ್ರಿಗಳ ಮಾರುಕಟ್ಟೆ ಮೌಲ್ಯ, ನಿಖರ ತೂಕ ಹಾಗೂ ಸಾಧ್ಯವಾದಲ್ಲಿ ಹೈ-ರೆಸಲ್ಯೂಶನ್ ಛಾಯಾಚಿತ್ರ ಮತ್ತು ವಿಡಿಯೋ ದಾಖಲೆಗಳನ್ನು ಒಳಗೊಂಡಿರಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ. ಇದರೊಂದಿಗೆ, ಈ ವಸ್ತುಗಳು ದೇಣಿಗೆ, ಉಡುಗೊರೆ ಅಥವಾ ಸರ್ಕಾರಿ ಅನುದಾನದ ಮೂಲಕ ಬಂದಿದ್ದೇ ಎಂಬ ಮೂಲ ವಿವರ, ಅವುಗಳ ವಿಮಾ ರಕ್ಷಣೆ, ಬ್ಯಾಂಕ್ ಲಾಕರ್ಗಳು ಅಥವಾ ಸ್ಟ್ರಾಂಗ್ ರೂಮ್ಗಳಲ್ಲಿ ಇರಿಸಲಾಗಿರುವ ಭದ್ರತಾ ವ್ಯವಸ್ಥೆ ಹಾಗೂ ಕೊನೆಯದಾಗಿ ಭೌತಿಕ ತಪಾಸಣೆ ನಡೆಸಿದ ದಿನಾಂಕದ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಸೂಚಿಸಲಾಗಿದೆ.