ಪುತ್ತೂರು: ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಕರ್ನಾಟಕ ಸರ್ಕಾರದ ಸಾರ್ವಜನಿಕ ರಜೆಯಾಗಿ ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಯಾದವ ಸಭಾ ತಾಲೂಕು ಸಮಿತಿ, ಪುತ್ತೂರು ವತಿಯಿಂದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಲಾಯಿತು.
ಭಗವಾನ್ ಶ್ರೀಕೃಷ್ಣರ ಜನ್ಮದಿನವನ್ನು ರಾಜ್ಯ ಸೇರಿದಂತೆ ದೇಶದಾದ್ಯಂತ ಲಕ್ಷಾಂತರ ಭಕ್ತರು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸುತ್ತಾರೆ. ಜನ್ಮಾಷ್ಟಮಿ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಭಾರತೀಯ ಸಂಸ್ಕೃತಿ, ಕುಟುಂಬ ಮೌಲ್ಯಗಳು ಮತ್ತು ನೈತಿಕ ಶಿಕ್ಷಣವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಸಾಂಸ್ಕೃತಿಕ ಹಬ್ಬವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ರಾಜ್ಯದಾದ್ಯಂತ ಬಾಲಕೃಷ್ಣ ವೇಷಭೂಷಣ, ಭಜನೆ, ಗೀತಾ ಪಾರಾಯಣ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಇವು ಮಕ್ಕಳಲ್ಲಿ ಸಂಸ್ಕಾರ, ಭಕ್ತಿ ಹಾಗೂ ಭಾರತೀಯ ಪರಂಪರೆಯ ಬಗ್ಗೆ ಅಭಿಮಾನ ಬೆಳೆಸಲು ನೆರವಾಗುತ್ತವೆ ಎಂದು ಸಮಿತಿ ತಿಳಿಸಿದೆ. ಆದರೆ, ಸಾರ್ವಜನಿಕ ರಜೆ ಇಲ್ಲದ ಕಾರಣ ಸರ್ಕಾರಿ ನೌಕರರು, ಖಾಸಗಿ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಕಾರ್ಯಕ್ರಮಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಕ್ಕಳೂ ಹಬ್ಬದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಅನುಭವದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.ಹೀಗಾಗಿ, ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಾರ್ವಜನಿಕ ರಜೆಯಾಗಿ ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ತಮ್ಮ ಮೂಲಕ ಶಿಫಾರಸು ಮಾಡಿ, ಮುಖ್ಯಮಂತ್ರಿ ಹಾಗೂ ಸಂಬಂಧಿತ ಇಲಾಖೆಗೆ ಅಗತ್ಯ ಮನವಿ ಸಲ್ಲಿಸುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಯಾದವ ಸಭಾ ತಾಲೂಕು ಸಮಿತಿ ಕೋರಿದೆ. ಈ ಸಂದರ್ಭದಲ್ಲಿ ಯಾದವ ಸಭಾ ತಾಲೂಕು ಸಮಿತಿ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಯಾದವ ಯುವ ವೇದಿಕೆ ಅಧ್ಯಕ್ಷ ಸುಶಾಂತ್ ಯಾದವ್, ಕಾರ್ಯದರ್ಶಿ ದಿನೇಶ್ ಯಾದವ್, ಯಾದವ ಸಭಾ ಕೇಂದ್ರಿಯ ಸಮಿತಿ ಸದಸ್ಯ ಶಿವಪ್ರಸಾದ್ ತಲೆಪ್ಪಾಡಿ, ಯಾದವ ಸಭಾ ಪ್ರಾದೇಶಿಕ ಸಮಿತಿ ಆರ್ಲಪದವು ಕೋಶಾಧಿಕಾರಿ ಶಿವರಾಮ ಮಣಿಯಾಣಿ ದೇವಸ್ಯ, ಪುತ್ತೂರು ನಗರ ಪ್ರಾದೇಶಿಕ ಸಮಿತಿ ಅಧ್ಯಕ್ಷ ದಾಮೋದರ ಮಣಿಯಾಣಿ ಸಂಪ್ಯ, ಎ-ಗ್ರೇಡ್ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕರುಣಾಕರ ಮಣಿಯಾಣಿ, ಯಾದವ ಸಭಾ ತಾಲೂಕು ಸಮಿತಿಯ ನಿಕಟಪೂರ್ವ ಕಾರ್ಯದರ್ಶಿ ನವೀನ್ ಮಣಿಯಾಣಿ ಮುಂಡೆಕೊಚ್ಚಿ ಹಾಗೂ ರಾಧಾಕೃಷ್ಣ ಮಣಿಯಾಣಿ ಕಲ್ಲರ್ಪೆ ಉಪಸ್ಥಿತರಿದ್ದರು.