ಕಲ್ಲಡ್ಕ : ಸ್ವಚ್ಛ ಪರಿಸರ ನಮ್ಮ ಧ್ಯೇಯ, ಹಸಿರು ಬದುಕೆ ನಮ್ಮ ಶ್ರೇಯ, ಮಾನವನ ಆಸೆ ದುರಾಸೆಗಳೆ ಸರಮಾಲೆಯಿಂದ ಪರಿಸರವನ್ನು ನಾಶಪಡಿಸುತ್ತಾ ಸ್ವಾರ್ಥ ಜೀವನವನ್ನು ನಡೆಸುತ್ತಿದ್ದಾನೆ, ಅಕ್ಷರದಿಂದ ಸಂಸ್ಕಾರ ಬರಬೇಕು ಅಂಧಕಾರ ಹೋಗಬೇಕು ಆದರೆ ಅಹಂ ಭಾವನೆ ಬರಬಾರದು, ತಮ್ಮ ಜನ್ಮದಿನಕ್ಕೆ ಗಿಡವನ್ನು ನೆಟ್ಟು ಬೆಳೆಸಿ ಜೀವನದಿದ್ದಕ್ಕೂ ಪೋಷಿಸುವುದರಿಂದ ಜೀವನಕ್ಕೂ ಒಂದು ಅರ್ಥ ಸಿಗುತ್ತದೆ ಪರಿಸರಕ್ಕೆ ನಾವು ಎಷ್ಟೇ ಕೊಟ್ಟರೂ ಅದು ಅಲ್ಪವೇ ಏಕೆಂದರೆ ಪರಿಸರದಿಂದ ನಾವು ಹೊರತು ನಮ್ಮಿಂದ ಪರಿಸರ ಅಲ್ಲ, ಪರಿಸರವು ಮುನಿದರೆ ನಮ್ಮ ಬಾಳು ನಿಮಿಷದಲ್ಲೇ ಮುಗಿದುಹೋಗುತ್ತದೆ ಎಂಬುದಾಗಿ ಸಂಸ್ಕಾರ ಭಾರತಿ ಇದರ ಜಿಲ್ಲಾ ಉಪಾಧ್ಯಕ್ಷರಾದ ಅನಿಲ್ ಪಂಡಿತ್ ರವರು ಹೇಳಿದರು.
ಅವರು ಜೂನ್ 15 ಶನಿವಾರ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ)ಹಾಗೂ ಜವಾಹರ ಬಾಲ್ ಮಂಚ್ ಮಂಗಳೂರು ದಕ್ಷಿಣ ಕನ್ನಡ ಇದರ ಸಂಯುಕ್ತ ಆಶ್ರಯದಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ.ಮಜಿ.ವೀರಕಂಭ ಇಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ, ವನಮಹೋತ್ಸವ ಹಾಗೂ ಬಾಲಕಾರ್ಮಿಕ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ವಾತ್ಸಲ್ಯ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕರು ಹಾಗೂ ಜವಾಹರ ಬಾಲ್ ಮಂಚ್ ದಕ್ಷಿಣ ಕನ್ನಡ ಇದರ ಜಿಲ್ಲಾಧ್ಯಕ್ಷರು, ಕಿತ್ತೂರು ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರು ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶೈಲಜಾ ರಾಜೇಶ್ ರವರು ಪ್ರಕೃತಿ ನಾಶದಿಂದ ವಿಕೋಪಗಳು ಉಂಟಾಗುತ್ತದೆ ಪರಿಸರದ ಶಿಕ್ಷಣವನ್ನು ನೀಡಿ ಪ್ರಜ್ಞಾವಂತ ಸಮಾಜವನ್ನು ಬೆಳೆಸುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರಕೃತಿ ನಮ್ಮ ಜೀವನಕ್ಕೆ ಕೊಡುವ ಪ್ರತಿಯೊಂದು ಉಡುಗರೆಯ ಮೌಲ್ಯವನ್ನು ಅರಿತಾಗ ಪರಿಸರ ಪ್ರೇಮವು ಕೇವಲ ಒಂದು ನಿಲುವಾಗಿರದೆ ನಮ್ಮ ನಡೆಯಲ್ಲಿ ಮೂಡುವ ಸಂಸ್ಕಾರವಾಗಿ ರೂಪುಗೊಳ್ಳುತ್ತದೆ ಭೂಮಿಯನ್ನು ಕಾಪಾಡುವುದು ಯಾವುದೋ ಸಂಸ್ಥೆಯ ಹೊಣೆಗಾರಿಕೆಯಲ್ಲ ಪ್ರತಿಯೊಬ್ಬರ ಜಾಗೃತಿ ಜವಾಬ್ದಾರಿ ಮತ್ತು ದಿನನಿತ್ಯ ಸಣ್ಣ ಸಣ್ಣ ಕ್ರಮಗಳಿಂದಲೇ ದೊಡ್ಡ ಬದಲಾವಣೆಯು ಹೊಂದಲು ಸಾಧ್ಯ ಎಂದು ತಿಳಿಸಿದರು. ಸಭಾ ಕಾರ್ಯಕ್ರಮದ ಮೊದಲು ಶಾಲಾ ಆವರಣದಲ್ಲಿ ಹಣ್ಣಿನ ಗಿಡವನ್ನು ನೆಟ್ಟು ಅದರ ಮಹತ್ವ ಮತ್ತು ನಮಗೆ ಪ್ರಕೃತಿ ಎಷ್ಟು ಮುಖ್ಯ ಎಂದು ತಿಳಿಸಿ, ವಿದ್ಯಾರ್ಥಿಗಳಿಗೆ ಸ್ವಚ್ಛ ಮತ್ತು ಸುಂದರ ಪರಿಸರದ ವಿಷಯದಲ್ಲಿ ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ವಾತ್ಸಲ್ಯ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಸದಸ್ಯ ಇಂದಿರಾ, ಶಾಲಾ ನಾಯಕ ಮೊಹಮ್ಮದ್ ಹಾರೂನ್ ಫರ್ಹಾನ್, ಹಿರಿಯ ವಿದ್ಯಾರ್ಥಿ ಲಿಖಿತಾ, ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸ ಸ್ವಾಗತಿಸಿದರು, ಶಿಕ್ಷಕಿ ಸಂಪ್ರಿಯ ವಂದಿಸಿದರು. ಹಿರಿಯ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು ಸಹಕರಿಸಿದರು.