Published
2 hours agoon
By
Akkare News
ಪುತ್ತೂರು: ಬನ್ನೂರು ಗ್ರಾಮದ ಸೇಡಿಯಾಪಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಆರಂಭಿಸಲು ರಾಜ್ಯ ಸರಕಾರ ಈಗಾಗಲೇ ಅನುಮತಿ ನೀಡಿದೆ. ಇದರ ಜೊತೆಗೆ ಅಲ್ಲಿ 300 ಬೆಡ್ನ ಆಸ್ಪತ್ರೆಯೂ ಆಗಲಿದೆ. ಆದರೆ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕಾರ್ಯ ಮಾಡುತ್ತಿದ್ದು ಸೇಡಿಯಾಪಿನಲ್ಲಿ ಆಸ್ಪತ್ರೆ ಮಾಡುವುದನ್ನು ವಿರೋಧಿಸುತ್ತಿದ್ದಾರೆ ಎಂದು ಕೋಡಿಂಬಾಡಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಮೆಡಕಲ್ ಕಾಲೇಜಿಗೆ ಬಜೆಟ್ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಪುತ್ತೂರಿನ ಜನರ ಕನಸು ಶಾಸಕ ಅಶೋಕ್ ಕುಮಾರ್ ರೈ ಅವರ ಮೂಲಕ ನನಸಾಗುತ್ತಿದೆ.
ಇದಕ್ಕೆ ಪೂರಕವಾಗಿ 300 ಹಾಸಿಗೆಗಳ ಸರಕಾರಿ ಆಸ್ಪತ್ರೆಯನ್ನು ಸೇಡಿಯಾಪಿನಲ್ಲೇ ಆರಂಭಿಸಲು ಸರಕಾರ ದಿಟ್ಟ ಹೆಜ್ಜೆ ಇರಿಸಿದೆ. ಇದಕ್ಕೆ ಬೇಕಾದ ಮೂಲಭೂತ ವ್ಯವಸ್ಥೆ ಸೇಡಿಯಾಪಿನಲ್ಲಿ ಇದೆ. ಗ್ರಾಮಾಂತರ ಪ್ರದೇಶಕ್ಕೆ ಒತ್ತು ನೀಡುವ ಉದ್ದೇಶದಿಂದ ಪೇಟೆ ಪ್ರದೇಶವನ್ನು ಬಿಟ್ಟು ಗ್ರಾಮೀಣ ಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. 2016ರಲ್ಲಿ ಆಗಿನ ಕಾಂಗ್ರೆಸ್ ಶಾಸಕಿ ಶಕುಂತಳಾ ಶೆಟ್ಟಿಯವರ ಅವಧಿಯಲ್ಲಿ 40 ಎಕ್ರೆ ಜಾಗವನ್ನು ಮೆಡಿಕಲ್ ಕಾಲೇಜಿಗೆ ನಿಗದಿ ಮಾಡಲಾಗಿತ್ತು. ನಂತರ ಬಂದ ಶಾಸಕ ಸಂಜೀವ ಮಠಂದೂರು ಅವರು ಅದನ್ನು ಸಿ.ಫುಡ್ ತಯಾರಿಕಾ ಘಟಕ ಮಾಡಲು ಪ್ರಯತ್ನ ಮಾಡಿದರು. ಇದಕ್ಕೆ ವಿರೋಧ ವ್ಯಕ್ತವಾದಾಗ ಯೋಜನೆಯನ್ನು ಕೈ ಬಿಟ್ಟರು. ನಂತರ ಶಾಸಕ ಅಶೋಕ್ ಕುಮಾರ್ ರೈ ಅವರು ಮೆಡಿಕಲ್ ಕಾಲೇಜ್ ಕನಸಿಗೆ ಪುನರ್ಜನ್ಮ ಕೊಡುವ ಕೆಲಸ ಮಾಡಿದರು.
ಈಗ ಕೆಲವೊಂದು ವಿಘ್ನಸಂತೋಷಿಗಳು ವಿನಾ ಕಾರಣ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಪುತ್ತೂರಿನಲ್ಲಿ ಅಭಿವೃದ್ದಿಯನ್ನು ಸಹಿಸದ ಕೆಲವರು ತಪ್ಪು ಮಾಹಿತಿ ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಈ ಕುರಿತು ಮುಂದಿನ ದಿನ ಜನಜಾಗೃತಿ ಮಾಡುವ ಕಾರ್ಯಕ್ರಮ ಆರಂಭಿಸಲಿದ್ದೇವೆ ಎಂದವರು ಹೇಳಿದರು.
ಸಾಮಾಜಿಕ ಮುಂದಾಳು ಎ ಜತೀಂದ್ರ ಶೆಟ್ಟಿ ಅಳಿಮರ ಅವರು ಮಾತನಾಡಿ, ವಿಶ್ವವಿದ್ಯಾನಿಲಯ ಕೋಣಾಜೆಯಲ್ಲಿ ಆಗುವಾಗ ವಿರೋಧವಿತ್ತು. ಆದರೆ ಮುಂದೇನಾಯಿತು. ಅದೇ ರೀತಿ ಪುತ್ತೂರು ಅಭಿವೃದ್ಧಿಯಾಗಬೇಕಾದರೆ ವಿಸ್ತಾರ ಆಗಲೇ ಬೇಕು. ಸೇಡಿಯಾಪಿನಲ್ಲಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಆಗುವುದರಿಂದ ಎಲ್ಲರಿಗೂ ಅದು ಸೆಂಟರ್ ಪ್ಲೇಸ್ ಎಂದವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಆಸ್ಕರ್ ಆನಂದ್ ಅವರು ಉಪಸ್ಥಿತರಿದ್ದರು.
300 ಬೆಡ್ನ ಆಸ್ಪತ್ರೆಗೆ ಕನಿಷ್ಠ 8 ಎಕ್ರೆ ಜಾಗ ಬೇಕಾಗಿರುವುದು
300 ಬೆಡ್ನ ಆಸ್ಪತ್ರೆಗೆ ಕನಿಷ್ಠ 8 ಎಕ್ರೆ ಜಾಗ ಬೇಕೆಂದು ಮೆಡಿಕಲ್ ಕಾಲೇಜು ಕುರಿತು ಸ್ಥಳಕ್ಕೆ ಆಗಮಿಸಿದ ಸಂಬಂಧಿಸಿದ ಇಲಾಖಾ ಇಂಜಿನಿಯರ್ ಮಾಹಿತಿ ನೀಡಿದ್ದಾರೆ. ಹೊಸ ರೂಲ್ಸ್ ಪ್ರಕಾರ ಮೆಡಿಕಲ್ ಕಾಲೇಜಿಗೆ ಕನಿಷ್ಠ 8 ಎಕ್ರೆ ಜಾಗ ಬೇಕಾಗಿದೆ. ಹಾಲಿ ಸರಕಾರಿ ಆಸ್ಪತ್ರೆ ಇರುವ ಜಾಗ ಕೇವಲ 5.16 ಎಕ್ರೆ ಇದೆ. ಅದು ಆಸ್ಪತ್ರೆಗೆ ಕಟ್ಟಡಕ್ಕೆ ಸಾಕಾಗುವುದಿಲ್ಲ. ಆಸ್ಪತ್ರೆ ಎಂದಾಕ್ಷಣ ಅಲ್ಲಿ ವಿಶಾಲಾವಾದ ಪಾರ್ಕಿಂಗ್, ಆಂಬುಲೆನ್ಸ್ಗಳು ಸರಾಗವಾಗಿ ಓಡಾಡಲು ರಸ್ತೆಗಳು ಬೇಕಾಗುತ್ತದೆ. ಅಂತಹ ಎಲ್ಲಾ ಸೌಲಭ್ಯ ಈಗಿನ ಆಸ್ಪತ್ರೆಯಲ್ಲಿ ಇಲ್ಲ. ಹಾಗಾಗಿ ಸೇಡಿಯಾಪು ಆಸ್ಪತ್ರೆಗೆ ಮತ್ತು ಮೆಡಿಕಲ್ ಕಾಲೇಜಿಗೆ ಸೂಕ್ತ ಸ್ಥಳ. ಈಗಾಗಲೇ ಅಧಿಕಾರಿಗಳು ಸ್ಥಳಕ್ಕೆ ಬಂದು ಮಣ್ಣು ಪರೀಕ್ಷೆ ಮಾಡಿ ಹೋಗಿದ್ದಾರೆ. ಡೋನ್ ಸರ್ವೆ ನಡೆದು ಕಟ್ಟಡದ ಸ್ಕೆಚ್ ಕೂಡಾ ಆಗಿದೆ. ಎಲ್ಲಾ ಕಡೆಯಿಂದಲೂ ಸಂಪರ್ಕ ರಸ್ತೆಯೂ ಇದೆ.
ವಿಶ್ವಪ್ರಸಾದ್ ಸೇಡಿಯಾಪು, ಮೆಡಿಕಲ್ ಕಾಲೇಜು ಹೋರಾಟ ಸಮಿತಿ