ಬಂಟ್ವಾಳ ಜುಲೈ 16: ಬಿ.ಸಿ. ರೋಡ್ನ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಬಳಿ ಗುರುವಾರ ಸಂಜೆ ಸಾರ್ವಜನಿಕರ ಕಣ್ಣೆದುರೇ ಚಾಕುವಿನಿಂದ ಭೀಕರ ಇರಿತಕ್ಕೊಳಗಾಗಿದ್ದ ಯುವತಿ ಲಾವಣ್ಯ ಚಿಕಿತ್ಸೆ ಫಲಿಸದೇ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಲಾವಣ್ಯಳನ್ನು ಅಟ್ಟಾಡಿಸಿ ಕೊಂದ ಹಂತಕನನ್ನು ಆಕೆಯ ಸಂಬಂಧಿ, ಕಕ್ಯಪದವು ಮೂಲದ ಚೇತನ್ ಎಂದು ಪೊಲೀಸರು ಗುರುತಿಸಿದ್ದಾರೆ.ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ಲಾವಣ್ಯ ಹಾಗೂ ಆರೋಪಿ ಚೇತನ್ ಪರಸ್ಪರ ಸಂಬಂಧಿಕರಾಗಿದ್ದರು. ಚೇತನ್ ಕಳೆದ ಕೆಲವು ಸಮಯದಿಂದ ಲಾವಣ್ಯಳನ್ನು ತೀವ್ರವಾಗಿ ಏಕಮುಖವಾಗಿ (One-sided Love) ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಲಾವಣ್ಯ ಈತನ ಪ್ರೇಮ ಪ್ರಸ್ತಾಪವನ್ನು ಕಡಾಖಂಡಿತವಾಗಿ ತಿರಸ್ಕರಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಚೇತನ್, ಲಾವಣ್ಯಳನ್ನು ಕೊಲ್ಲಲು ಮುಂಚಿತವಾಗಿಯೇ ಸಂಚು ರೂಪಿಸಿ ಬ್ಯಾಗ್ನಲ್ಲಿ ತಲ್ವಾರ್ ರೀತಿಯ ಮಾರಕಾಸ್ತ್ರ ತಂದಿದ್ದನು. ಕೆಲಸ ಮುಗಿಸಿ ಮನೆಗೆ ತೆರಳಲು ಲಾವಣ್ಯ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾಗ, ಚೇತನ್ ಬ್ಯಾಗ್ನಿಂದ ಚಾಕು ಹೊರತೆಗೆದಿದ್ದನು. ಪ್ರಾಣಭಯದಿಂದ ಲಾವಣ್ಯ ಓಡಿದರೂ ಬೆನ್ನಟ್ಟಿದ ಚೇತನ್, ಆಕೆಯ ಮೇಲೆ ಇರಿದು ಪರಾರಿಯಾಗಿದ್ದನು. ತಕ್ಷಣ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಯುವತಿ ಮೃತಪಟ್ಟಿದ್ದಾರೆ.