Published
2 years agoon
By
Akkare News
ಉಪ್ಪಿನಂಗಡಿ : ಬಲಿಷ್ಟ ಸಮಾಜವೊಂದರ ನಿರ್ಮಾಣದಲ್ಲಿ ಕೌಟುಂಬಿಕ ವ್ಯವಸ್ಥೆಯು ಮಹತ್ವದ ಪಾತ್ರ ನಿರ್ವಹಿಸುತ್ತಿದ್ದು ಸಮನ್ವಯ ಶಿಕ್ಷಣ ದೊರೆತ ಮಹಿಳೆಯರಿಂದ ಸುಭದ್ರ ತಳಹದಿಯ ಸಮಾಜ ಸೃಷ್ಟಿಯಾಗುತ್ತದೆ ಎಂದು ಖ್ಯಾತ ಸೂಫಿವರ್ಯರೂ ಆಧ್ಯಾತ್ಮಿಕ ಚಿಕಿತ್ಸಕರೂ ಆದ ಬಹು ಶಂಸುದ್ದೀನ್ ತಂಙಳ್ ಪವ್ವಲ್ ಅಭಿಪ್ರಾಯ ಪಟ್ಟಿದ್ದಾರೆ.
ಎಪ್ರಿಲ್ 21 ಆಧಿತ್ಯವಾರ ಕೆಮ್ಮಾರ ಶಂಸುಲ್ ಉಲಮಾ ಮಹಿಳಾ ಕಾಲೇಜಿನ 2024-25 ನೇ ಅಧ್ಯಯನ ವರ್ಷದ ವಿಧ್ಯಾರ್ಥಿನಿಯರಿಗೆ ದಾಖಲಾತಿ ಫಾರಂ ವಿತರಣಾ ಸಮಾರಂಭದಲ್ಲಿ ಅಬ್ದುಲ್ ಅಝೀಝ್ ಕೆಮ್ಮಾರ ಇವರಿಗೆ ಫಾರಂ ಹಸ್ತಾಂತರಿಸಿ ಮಾತಾನಾಡಿದರು.
ಸಂಸ್ಥೆಯ ಅಧ್ಯಕ್ಷ ಎಸ್ ಬಿ ದಾರಿಮಿ ಉದ್ಘಾಟಿಸಿ ಮಾತನಾಡಿ ಸಂಸ್ಥೆಗೆ ಸಹಕಾರ ನೀಡುವ ಮೂಲಕ ಪ್ರೋತ್ಸಾಹಿಸಿದವರನ್ನು ಅಭಿನಂದಿಸಿದರಲ್ಲದೇ ಮಹಿಳೆಯರು ಕಲಿತರೆ ಅದರ ಲಾಭ ಸಮಾಜಕ್ಕೇ ಮರಳಿ ದೊರಕುತ್ತದೆ ಎಂದರು.
ಗಂಡಿಬಾಗಿಲು ಖತೀಬ್ ಶೌಕತ್ ಅಲಿ ಪೈಝಿ, ಪಲಿಮಾರು ಅಬ್ದುಲ್ ರಹ್ಮಾನ್ ಪೈಝಿ, ಪೆರಿಯಡ್ಕ ಖತೀಬ್ ಅಬ್ದುಲ್ ರಹ್ಮಾನ್ ಪೈಝಿ, ಸ್ಥಳೀಯ ಅಧ್ಯಾಪಕ ಅಬ್ದುಲ್ಲ ಉಸ್ತಾದ್, ಹಸೈನಾರ್ ಹಾಜಿ ಕೊಯಿಲ, ಹುಸೈನ್ ಬಡಿಲ, ಎನ್ ಇಸ್ಮಾಯಿಲ್ ಕೆಮ್ಮಾರ, ಇಸಾಕ್ ಎನ್, ಇಬ್ರಾಹಿಂ ಶಕ್ತಿ ನಗರ ಮೊದಲಾದವರು ಉಪಸ್ಥಿತರಿದ್ದರು.
ಈ ವರ್ಷ ಹಜ್ ಯಾತ್ರೆಗೈಯ್ಯುವ ಗಂಡಿಬಾಗಿಲು ಮಸೀದಿ ಪ್ರದಾನ ಕಾರ್ಯದರ್ಶಿ ಆದಂ ಹಾಜಿ ಸನ್ಯಾಸಿ ಮೂಲೆ ಇವರಿಗೆ ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು.