Published
8 months agoon
By
Akkare News
ಹೊಳೆಹೊನ್ನೂರು(ಶಿವಮೊಗ್ಗ): ದೆವ್ವ ಬಿಡಿಸುವ ನೆಪದಲ್ಲಿ ನಡೆದ ಪೂಜೆ ವೇಳೆ ಹೊಸ ಜಂಬರಘಟ್ಟೆ ಗ್ರಾಮದ ಗೀತಮ್ಮ (45) ಎಂಬವರು ಮೃತಪಟ್ಟ ಘಟನೆ ಸಮೀಪದ ಜಂಬರಗಟ್ಟೆಯಲ್ಲಿ ಸಂಭವಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ರವಿವಾರ ರಾತ್ರಿ ಗೀತಮ್ಮನನ್ನು ಆಶಾ ಎಂಬವರ ಬಳಿಗೆ ಕರೆದುಕೊಂಡು ಬಂದಿದ್ದರು. ಆಶಾಗೆ ಕಳೆದ 15 ದಿನಗಳಿಂದ ಗ್ರಾಮದ ದೇವರೊಂದು ಮೈ ಮೇಲೆ ಬರುತ್ತಿತ್ತು ಎನ್ನಲಾಗಿದೆ. ನಿನ್ನ ತಾಯಿಯ ದೇಹದಲ್ಲಿ ದೆವ್ವವೊಂದು ಸೇರಿದೆ. ಪೂಜೆ ಮಾಡಿ ಹೊರ ಹಾಕುತ್ತೇನೆ ಎಂದು ಮೃತ ಗೀತಮ್ಮನ ಪುತ್ರ ಸಂಜಯ್ಗೆ ತಿಳಿಸಿದ್ದಳು.
ಬಳಿಕ ಗೀತಮ್ಮನ ಮನೆ ಮುಂದೆ ಪೂಜೆ ಮಾಡಿದ್ದಾರೆ. ಈ ವೇಳೆ ಗೀತಮ್ಮನ ತಲೆ ಮೇಲೆ ಕಲ್ಲು ಹೊರಿಸಲಾಗಿದೆ. ಬಳಿಕ ಗೀತಮ್ಮ ಕೂಡ ದೆವ್ವ ಬಂದಂತೆ ವರ್ತಿಸಿದ್ದಾಳೆ. ಆಗ ಮರದ ಟೊಂಗೆಯೊಂದನ್ನು ಕಿತ್ತುಕೊಂಡು ಹಲ್ಲೆ ಮಾಡಿದ್ದಲ್ಲದೇ ತಣ್ಣೀರು ಎರಚಲಾಗಿದೆ. ಆಗ ಗೀತಮ್ಮ ಕುಸಿದು ಬಿದ್ದಿದ್ದಾಳೆ. ದೆವ್ವ ಬಿಟ್ಟಿದೆ ಎಂದು ಮನೆಗೆ ಕರೆದುಕೊಂಡು ಬಂದಿದ್ದಾರೆ. ಅಸ್ವಸ್ಥಳಾದ ಗೀತಮ್ಮನನ್ನು ಆಸ್ಪತ್ರೆಗೆ ಕರೆದೊಯ್ದಿದ್ದು ವೈದ್ಯರು ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಆಶಾಳನ್ನು ಬಂಧಿಸಲಾಗಿದೆ.