ಪುತ್ತೂರು: ಮೆಸ್ಕಾಂನ 3 ಜಿಲ್ಲೆ ಸೇರಿದಂತೆ ರಾಜ್ಯದ 15 ಜಿಲ್ಲೆಗಳಲ್ಲಿ ವಿದ್ಯುತ್ ಇಲಾಖೆಯನ್ನು ಕರ್ನಾಟಕದಲ್ಲಿ ಖಾಸಗೀಕರಣಗೊಳಿಸುವುದರ ವಿರುದ್ಧ ಜೂ.16ರಂದು ಬನ್ನೂರಿನಲ್ಲಿರುವ ಮೆಸ್ಕಾಂನ ಪುತ್ತೂರು ವಿಭಾಗದ ಕಚೇರಿಯಲ್ಲಿ ಮೆಸ್ಕಾಂನ ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು.
ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಈಗಾಗಲೇ ಕರ್ನಾಟಕದಲ್ಲಿ ಪ್ರಾರಂಭಗೊಂಡಿದೆ. ಟಾಟಾ ಕಂಪನಿಯವರು ಖಾಸಗಿಗೆ ಅರ್ಜಿ ಹಾಕಿದ್ದಾರೆ. ಖಾಸಗಿಯವರಿಗೆ ನೀಡಬೇಕಾದರೆ ಕರ್ನಾಟಕ ವಿದ್ಯುತ್ಚಕ್ತಿ ನಿಯಂತ್ರಣ ಆಯೋಗ ಸಾರ್ವಜನಿಕರ ಅಭಿಪ್ರಾಯ, ಆಕ್ಷೇಪಣೆಗಳನ್ನು ಪಡೆಯಬೇಕು. ಆಕ್ಷೇಪಣೆಗಳನ್ನು ಸಲ್ಲಿಸಲು ಜೂ.23ರ ತನಕ ಅವಕಾಶವಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಖಾಸಗೀಕರಣಗೊಂಡರೆ ಕೃಷಿ, ಕೈಗಾರಿಕೆ, ಗುತ್ತಿಗೆದಾರರು ಸಹಿತ ಎಲ್ಲಾ ವರ್ಗದವರಿಗೂ ಪರಿಣಾಮ ಬೀಳಲಿದೆ. ಹೀಗಾಗಿ ಪ್ರತಿಯೊಬ್ಬ ನಾಗರೀಕರು ಆಕ್ಷೇಪಣೆಗಳನ್ನು ಸಲ್ಲಿಸುವ ಮೂಲಕ ಖಾಸಗೀಕರಣದಿಂದ ಸಂಭವಿಸಬಹುದಾದ ಹೊಡೆತ, ಸಮಸ್ಯೆಗಳನ್ನು ತಡೆಯುವಂತೆ ಪ್ರತಿಭಟನೆಯಲ್ಲಿ ಆಗ್ರಹ ವ್ಯಕ್ತವಾಯಿತು.
ಬಿಎಸ್ಎನ್ಎಲ್ನ ಪರಿಸ್ಥಿತಿ ಮೆಸ್ಕಾಂಗೂ ಬರಬಹುದು-ರಾಮಚಂದ್ರ; ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್, ಡಿಪ್ಲೋಮ ಇಂಜಿನಿಯರ್ಸ್ ಎಸೋಸಿಯೇಶನ್ ರಾಜ್ಯಾಧ್ಯಕ್ಷ ರಾಮಚಂದ್ರ ಎ. ಮಾತನಾಡಿ, ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರೀಯೆ ಈಗಾಗಲೇ ಪ್ರಾರಂಭಗೊಂಡಿದೆ. ವಿದ್ಯುತ್ ಖಾಸಗೀಕರಣಗೊಂಡರೆ ಬಿಎಸ್ಎನ್ಎಲ್ನ ಪರಿಸ್ಥಿತಿ ಎದುರಿಸಬೇಕಾಗಬಹುದು. ಅಧಿಕ ಜನಸಂಖ್ಯೆ ಆದಾಯ ಬರುವ ಪ್ರಮುಖ ನಗರಗಳನ್ನು ಏರ್ಟೆಲ್, ಜಿಯೋದಂತಹ ಖಾಸಗಿ ಕಂಪನಿಗಳು ಪಡೆದುಕೊಂಡಿದೆ. ಆದಾಯ ಇಲ್ಲದೇ ಇರುವ ಗ್ರಾಮೀಣ ಪ್ರದೇಶಗಳು ಸರಕಾರಿ ಸಂಸ್ಥೆಗಳ ಕೈಯಲ್ಲಿದ್ದು ಅಲ್ಲಿ ಸಮಸ್ಯೆ ನಿಭಾಯಿಸಲು ಅಸಾಧ್ಯವಾಗಿದೆ. ಮುಂದೆ ಮೆಸ್ಕಾಂನ ಸ್ಥಿತಿಯೂ ಇದೇ ರೀತಿಯಾಗುವ ಸಾಧ್ಯತೆಯಿದೆ. ಟಾಟಾ ಸಂಸ್ಥೆಯ ಮಂಗಳೂರು ಮಹಾನಗರ ಪಾಲಿಕೆ, ಉಳ್ಳಾಲ, ಉಡುಪಿ, ಶಿವಮೊಗ್ಗ ನಗರ ಮಾತ್ರ ಖಾಸಗಿಕಣಕ್ಕೆ ಪ್ರಸ್ತಾವಣೆ ಸಲ್ಲಿಸಿದ್ದಾರೆ. ಸುಳ್ಯ, ನೆಲ್ಯಾಡಿ ಪುತ್ತೂರುಗಳನ್ನು ಅವರು ಬಿಟ್ಟಿದ್ದಾರೆ. ದೊಡ್ಡ ನಗರಗಳಲ್ಲಿ ಬೃಹತ್ ಕೈಗಾರಿಕೆಗಳು, ಅಪಾರ್ಟ್ ಮೆಂಟ್ಗಳಿದ್ದು ಅಲ್ಲಿ ದೊಡ್ಡ ಮಟ್ಟದ ಆದಾಯ ಬರುತ್ತದೆ. ಖಾಸಗಿಯವರು ಸ್ವಂತ ಲಾಭಾಕ್ಕಾಗಿ ಮಾತ್ರ ಮಾಡುತ್ತಾರೆಯೇ ವಿನಃ ಸಾರ್ವಜನಿಕ ಹಿತಾಶಕ್ತಿ ನೋಡಲು ಸಾಧ್ಯವಿಲ್ಲ. ಈಗಾಗಲೇ ಖಾಸಗೀಕರಣಗೊಂಡಿರುವ ದೆಹಲಿ, ಒಡಿಸ್ಸಾ, ಮಹಾರಾಷ್ಟ್ರ ಸಹಿತ ಹಲವು ರಾಜ್ಯಗಳಲ್ಲಿ ಅಲ್ಲಿನ ಜನತೆ ಬಹಳಷ್ಟು ಸಂಕಷ್ಟು ಎದುರಿಸುತ್ತಿದ್ದು ಈ ಪರಿಸ್ಥಿತಿ ಕರ್ನಾಟಕದ ಜನತೆಗೆ ಬಾರದಂತೆ ಪ್ರತಿಯೊಬ್ಬರೂ ಆಕ್ಷೇಪಣೆ ಸಲ್ಲಿಸುವಂತೆ ಅವರು ವಿನಂತಿಸಿದರು.ವಿದ್ಯುತ್ ಇಲಾಖೆ ಖಾಸಗೀಕರಣದಿಂದ ಇಲಾಖೆಗೆ ಮಾತ್ರ ಸಂಕಷ್ಟವಲ್ಲ. ರೈತರು, ಗ್ರಾಹಕರು, ಗುತ್ತಿಗೆದಾರರು, ಕೈಗಾರಿಕೋದ್ಯಮಿಗಳಿಗೂ ದೊಡ್ಡ ಮಟ್ಟದ ಹೊಡೆತ ಬೀಳಲಿದೆ. ಗೃಹ ಜ್ಯೋತಿಯಂತಹ ಉಚಿತ ವಿದ್ಯುತ್ ಯೋಜನೆ, ಪಂಪ್ಸೆಟ್ಗಳಿಗೆ ರಿಯಾಯಿತಿ ಸಹಿತ ಎಲ್ಲಾ ರಿಯಾಯಿತಿಗಳಿಗೂ ಹೊಡೆತ ಬೀಳಲಿದೆ. ನಾವು ಇಲಾಖೆಯ ಒಳಗಡೇ ಇರುವುದರಿಂದ ನಮಗೆ ಇದರ ಸುಳಿವು ದೊರೆತಿದ್ದು ಆಕ್ಷೇಪಣೆ ಪ್ರಾರಂಭಿಸಿದ್ದೇವೆ. ಸಾರ್ವಜನಿಕರು, ರೈತರು, ಕೈಕಾರಿಕೋದ್ಯಮಿಗಳು, ಗುತ್ತಿಗೆದಾರರು ಸಹಿತ ಪ್ರತಿಯೊಬ್ಬರೂ ಆಕ್ಷೇಪಣೆ ಸಲ್ಲಿಸುವ ಮೂಲಕ ಖಾಸಗೀಕರಣ ಎಂಬ ಪ್ರಕ್ರೀಯೆ ಕರ್ನಾಟಕ ರಾಜ್ಯದೊಳಗೆ ಪ್ರವೇಶಿಸದಂತೆ ಮುಂಜಾಗ್ರತೆ ವಹಿಸಬೇಕು. -ರಾಮಚಂದ್ರ, ಕಾರ್ಯನಿರ್ವಾಹಕ ಇಂಜಿನಿಯರ್, ರಾಜ್ಯಾಧ್ಯಕ್ಷರು ಡಿಪ್ಲೋಮ ಇಂಜಿನಿಯರ್ಸ್ ಎಸೋಸಿಯೇಶನ್