Connect with us

ಇತರ

RDPR ಎಇಇ ಗೆ ಲೋಕಾಯುಕ್ತ ಶಾಕ್! ನಗದು, ಚಿನ್ನಾಭರಣ, ಕೋಟ್ಯಂತರ ಮೌಲ್ಯದ ಸೈಟ್‌ಗಳು ಪತ್ತೆ

Published

on

​ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮಾಡಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆಯೇ ಭ್ರಷ್ಟ ಅಧಿಕಾರಿಯೊಬ್ಬರಿಗೆ ಬಿಸಿ ಮುಟ್ಟಿಸಿದ್ದಾರೆ. ಸಿರುಗುಪ್ಪದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (AEE) ಅವರಿಗೆ ಸೇರಿದ ನಿವಾಸ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಪಾಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ.

 

ಮೂರು ಕಡೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ ಲೋಕಾಯುಕ್ತ ಎಸ್‌ಪಿ ವಾಸುದೇವ್ ಅವರ ಖುದ್ದು ನೇತೃತ್ವದಲ್ಲಿ ಇಡೀ ಕಾರ್ಯಾಚರಣೆ ನಡೆದಿದೆ. ಎಇಇ ತಿಪ್ಪೇಸ್ವಾಮಿ ಅಕ್ರಮವಾಗಿ ಕೋಟ್ಯಂತರ ಆಸ್ತಿ ಸಂಪಾದಿಸಿದ್ದಾರೆ ಎಂಬ ನಿಖರ ಮಾಹಿತಿ ಮೇರೆಗೆ ಅಧಿಕಾರಿಗಳು ಪ್ರತ್ಯೇಕ ಮೂರು ತಂಡಗಳನ್ನು ರಚಿಸಿಕೊಂಡು ದಾಳಿ ನಡೆಸಿದ್ದಾರೆ. ಬಳ್ಳಾರಿಯ ಹನುಮಾನ್ ನಗರದಲ್ಲಿರುವ ತಿಪ್ಪೇಸ್ವಾಮಿ ಅವರ ಪ್ರಧಾನ ನಿವಾಸ, ಕುಡತಿನಿ ಪಟ್ಟಣದಲ್ಲಿರುವ ಅವರ ಮತ್ತೊಂದು ನಿವಾಸ, ಸಿರುಗುಪ್ಪದಲ್ಲಿರುವ ಅವರ ಅಧಿಕೃತ ಆರ್‌ಡಿಪಿಆರ್ ಕಚೇರಿ ಸೇರಿದಂತೆ ಒಟ್ಟು ಮೂರು ಕಡೆಗಳಲ್ಲಿ ಅಧಿಕಾರಿಗಳು ಏಕಕಾಲದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಮನೆಯಲ್ಲಿ ಸಿಕ್ಕ ಅಕ್ರಮ ಸಂಪತ್ತು ಎಷ್ಟು? ಬಳ್ಳಾರಿಯ ಹನುಮಾನ್ ನಗರದಲ್ಲಿರುವ ತಿಪ್ಪೇಸ್ವಾಮಿ ಅವರ ನಿವಾಸದ ಮೇಲೆ ನಡೆದ ದಾಳಿಯ ವೇಳೆ ಚಿನ್ನ, ಬೆಳ್ಳಿ ಹಾಗೂ ಆಸ್ತಿ ಪತ್ರಗಳು ಪತ್ತೆಯಾಗಿವೆ. ಪ್ರಾಥಮಿಕ ತಪಾಸಣೆಯ ಅವಧಿಯಲ್ಲೇ ಅಧಿಕಾರಿಗಳು ಈ ಕೆಳಗಿನ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಂಡು ದಾಖಲೆ ಪರಿಶೀಲಿಸುತ್ತಿದ್ದಾರೆ.

​ ಸುಮಾರು 300 ಗ್ರಾಂ ತೂಕದ ಚಿನ್ನದ ಆಭರಣಗಳು, 800 ಗ್ರಾಂ ತೂಕದ ಬೆಳ್ಳಿ ಆಭರಣ ಹಾಗೂ ಸಾಮಗ್ರಿಗಳು, ಮನೆಯಲ್ಲಿ ಗಂಟು ಕಟ್ಟಿ ಇಡಲಾಗಿದ್ದ 1 ಲಕ್ಷ ರೂಪಾಯಿ ನಗದು ಹಣ. ವಿವಿಧೆಡೆ ಖರೀದಿಸಲಾಗಿರುವ ಬರೋಬ್ಬರಿ 6 ಸೈಟ್‌ಗಳಿಗೆ (ನಿವೇಶನ) ಸಂಬಂಧಿಸಿದ ಪ್ರಮುಖ ದಸ್ತಾವೇಜುಗಳು ಪತ್ತೆಯಾಗಿದೆ.
ಬ್ಯಾಂಕ್ ಖಾತೆ ಸೀಜ್ ಮಾಡಿದ ಅಧಿಕಾರಿಗಳು ಕೇವಲ ಭೌತಿಕ ಆಸ್ತಿ ಮಾತ್ರವಲ್ಲದೆ ತಿಪ್ಪೇಸ್ವಾಮಿ ಅವರ ಬ್ಯಾಂಕ್ ವಹಿವಾಟುಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ನಿಗಾ ಇರಿಸಿದ್ದಾರೆ. ಪ್ರಾಥಮಿಕ ತನಿಖೆಯ ಭಾಗವಾಗಿ ತಿಪ್ಪೇಸ್ವಾಮಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 5 ಲಕ್ಷ ರೂಪಾಯಿ ಹಣವನ್ನು ಲೋಕಾಯುಕ್ತ ಅಧಿಕಾರಿಗಳು ತಕ್ಷಣವೇ ಜಪ್ತಿ (Freeze) ಮಾಡಿದ್ದಾರೆ. ಇವರ ಹೆಸರಿನಲ್ಲಿರುವ ಇತರೆ ಬ್ಯಾಂಕ್ ಲಾಕರ್‌ಗಳು ಹಾಗೂ ಹೂಡಿಕೆಗಳ ಬಗ್ಗೆಯೂ ತನಿಖೆ ಮುಂದುವರೆದಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version