ಬೆಂಗಳೂರು: ನಗರದ ಮೆಜೆಸ್ಟಿಕ್ ಬಿಎಂಟಿಸಿ ನಿಲ್ದಾಣದಲ್ಲಿ ಮಂಗಳಮುಖಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೃತರನ್ನು ದೇವಿ ಎಂದು ಗುರುತಿಸಲಾಗಿದೆ. ರಾಮಮೂರ್ತಿನಗರದ ಗೌತಮ್ (29) ಬಂಧಿತ ಆರೋಪಿ. ನಿನ್ನೆ ರಾತ್ರಿ ಸುಮಾರು 3 ಗಂಟೆ ವೇಳೆಗೆ ಡಿಯೋ ಬೈಕ್ನಲ್ಲಿ ಮೆಜೆಸ್ಟಿಕ್ಗೆ ಬಂದಿದ್ದ ಗೌತಮ್, ದೇವಿ ಬಳಿ ₹200 ಹಣ ಕೇಳಿದ್ದಾನೆ. ಹಣ ನೀಡಲು ದೇವಿ ನಿರಾಕರಿಸಿದ ಹಿನ್ನೆಲೆಯಲ್ಲಿ ಡ್ರ್ಯಾಗರ್ನಿಂದ ದೇವಿಯ ತಲೆಗೆ ಹೊಡೆದಿದ್ದಾನೆ. ಬಳಿಕ ದೇವಿಯ ಬ್ಯಾಗ್ ಮತ್ತು ಮೊಬೈಲ್ ಕಸಿದುಕೊಂಡು, ಮತ್ತೆ ಮೂರು ಬಾರಿ ಡ್ರ್ಯಾಗರ್ನಿಂದ ಇರಿದಿದ್ದಾನೆ ಎನ್ನಲಾಗಿದೆ. ಬ್ಯಾಗ್ನಲ್ಲಿದ್ದ ₹200 ಹಣ ಹಾಗೂ ಮೊಬೈಲ್ ತೆಗೆದುಕೊಂಡು ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡ ದೇವಿ ಡ್ರ್ಯಾಗರ್ ಇರಿತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ರಾತ್ರಿ ವೇಳೆ ದರೋಡೆಗೆ ಇಳಿಯುತ್ತಿದ್ದ ಗೌತಮ್, ಕೊಲೆ ಬಳಿಕ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಉಪ್ಪಾರಪೇಟೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ₹200 ರೂಪಾಯಿಗಾಗಿ ನಡೆದ ಈ ಬರ್ಬರ ಕೊಲೆ ಪ್ರಕರಣ ಇದೀಗ ಮೆಜೆಸ್ಟಿಕ್ ಪ್ರದೇಶದಲ್ಲಿ ಆತಂಕ ಮೂಡಿಸಿದೆ.