Connect with us

ಇತರ

ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸೇರಿದ ಹಣ ದುರ್ಬಳಕೆ ಪ್ರಕರಣದಲ್ಲಿ ಶೇ.100ರಷ್ಟು ನನ್ನ ಪಾತ್ರವಿಲ್ಲ: ಶಾಸಕ ನಾಗೇಂದ್ರ ಹೇಳಿಕೆ

Published

on

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧಿತರಾಗಿ, ಜಾಮೀನಿನ ಮೇರೆಗೆ ಹೊರಗಿರುವ ಶಾಸಕ ಬಿ.ನಾಗೇಂದ್ರ ಜಾರಿ ನಿರ್ದೇಶನಾಲಯ (ED)ದ ಎದುರು ಸೋಮವಾರ ವಿಚಾರಣೆಗೆ ಹಾಜರಾದರು. ಜಾಲಹಳ್ಳಿಯ ಎಚ್ ಎಂಟಿ ಭವನದಲ್ಲಿರುವ ಇ.ಡಿ.ಕಚೇರಿಗೆ ಇಂದು ಮಧ್ಯಾಹ್ನ ಹಾಜರಾಗಿ ಸುಮಾರು ಐದಾರು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು. ಕಳೆದ ತಿಂಗಳು ವಿಚಾರಣೆಗೆ ಬರುವಂತೆ ಸಮನ್ಸ್ ಜಾರಿ ಮಾಡಿದ್ದರೂ ಅಂದು ಗೈರಾಗಿದ್ದ ನಾಗೇಂದ್ರ ಇಂದು ಇ.ಡಿ.ಅಧಿಕಾರಿಗಳ ಮುಂದೆ ಹಾಜರಾದರು. ವಿಚಾರಣೆ ಮುಗಿಸಿ ಹೊರಬಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಾಗೇಂದ್ರ, ಕಳೆದ ತಿಂಗಳು ಬರುವಂತೆ ಇ.ಡಿ. ಸಮನ್ಸ್ ಜಾರಿ ಮಾಡಿದ್ದರೂ ಬರುವುದಕ್ಕೆ ಆಗಿರಲಿಲ್ಲ. ಪ್ರಕರಣ ಸಂಬಂಧ ಸ್ಪಷ್ಟನೆ ಕೊಡಬೇಕಾಗಿತ್ತು. ಕೊಟ್ಟಿದ್ದೇನೆ ಹಳೆ ವಿಚಾರ ಹೊರತುಪಡಿಸಿ ಬೇರೇನೂ ಪ್ರಶ್ನೆಗಳನ್ನು ಕೇಳಿಲ್ಲ. ಯಾವುದೇ ದಾಖಲೆ ಒದಗಿಸುವಂತೆ ಸೂಚಿಸಿಲ್ಲ. ಪ್ರಕರಣ ಇತ್ಯರ್ಥವಾಗುವರೆಗೂ ವಿಚಾರಣೆಗೆ ಸಹಕರಿಸಬೇಕು. ಹೀಗಾಗಿ ವಿಚಾರಣೆ ಹಾಜರಾಗಿದ್ದೇನೆ ಎಂದರು.ಬಿಜೆಪಿಯು ಪಾದಯಾತ್ರೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಯಿಂದ ಕಾಂಗ್ರೆಸ್​​ಗೆ ಶಕ್ತಿ ಬಂದಿದೆ. ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರೆಲ್ಲ ಕೂಡ ಒಗ್ಗಟ್ಟಿನಲ್ಲಿದ್ಧಾರೆ. ಬಿಜೆಪಿ ಅವರ ಪಾದಯಾತ್ರೆ ಒಡೆದ ಮನೆಯಾಗಿದ್ದು ವಿಜಯೇಂದ್ರ ಏಕಾಂಗಿಯಾಗಿದ್ದಾರೆ. ಪಾದಯಾತ್ರೆಯ ಕ್ರೆಡಿಟ್ ವಾರ್ ನಡೆಯುತ್ತಿದ್ದು, ಬಿಜೆಪಿಯಲ್ಲೇ ಒಡಕು ಉಂಟಾಗಿದೆ ಎಂದರು.
ಪ್ರಕರಣದ ಹಿನ್ನೆಲೆ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದ್ದ ಬಹುಕೋಟಿ ಅಕ್ರಮ ಸಂಬಂಧ ನಾಗೇಂದ್ರ ವಿರುದ್ಧ ಪಿಎಂಎಲ್​ಎ ಕಾಯ್ದೆಯಡಿ ಪ್ರಕರಣ ದಾಖಲಿಸಿ ED ಬಂಧಿಸಿತ್ತು. ನಾಗೇಂದ್ರ ವಿರುದ್ಧ 2024ರಲ್ಲಿ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು.ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಮಾಜಿ ಸಚಿವ ನಾಗೇಂದ್ರಗೆ ಹೈದರಾಬಾದ್ ಫಸ್ಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್​​ನ ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ್, ಬ್ಯಾಂಕ್ ಅಧ್ಯಕ್ಷ ಇಟಕಾರಿ ಸತ್ಯನಾರಾಯಣ, ವಾಲ್ಮೀಕಿ ನಿಗಮದ ಎಂ.ಡಿ. ಜೆ.ಜಿ. ಪದ್ಮನಾಭ, ಸಹಚರರಾದ ನಾಗೇಶ್ವರ ರಾವ್, ನೆಕ್ಕುಂಟಿ ನಾಗರಾಜ್ ಹಾಗೂ ವಿಜಯ್ ಕುಮಾರ್ ಗೌಡ ಸೇರಿದಂತೆ 24 ಮಂದಿ ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಅವ್ಯವಹಾರ ಸಂಬಂಧ ಎಸ್ಐಟಿ ಹಾಗೂ ಸಿಬಿಐ ಪರ್ಯಾಯವಾಗಿ ತನಿಖೆ ನಡೆಸುತ್ತಿವೆ.

ಪತ್ತೆ ಹಚ್ಚಲಾದ 89.62 ಕೋಟಿ ಹಣವನ್ನ ಆಂಧ್ರ ಹಾಗೂ ತೆಲಂಗಾಣದ ವಿವಿಧ ಬ್ಯಾಂಕ್​ಗಳಲ್ಲಿ ನಕಲಿ ಖಾತೆಗಳಿಗೆ ವರ್ಗವಾಗಿರುವುದು ತಿಳಿದುಬಂದಿದೆ. ನಗರದ ಎಂ.ಜಿ. ರೋಡ್​ನಲ್ಲಿರುವ ಯೂನಿಯನ್ ಬ್ಯಾಂಕ್​ನಿಂದ ವರ್ಗಾವಣೆಯಾಗಿದ್ದ 187 ಕೋಟಿ ರೂ.ಹಣದಲ್ಲಿ 43.33 ಕೋಟಿ ಹಣವನ್ನ ರಾಜ್ಯದ ಗಂಗಾ ಕಲ್ಯಾಣ ಯೋಜನೆಗೆ ಮೀಸಲಿರಿಸಲಾಗಿತ್ತು. ಸರ್ಕಾರದ ನಿರ್ದೇಶನವನ್ನ ಗಾಳಿಗೆ ತೂರಿ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ನಗದಾಗಿ ಪರಿವರ್ತಿಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version