ಧರ್ಮಸ್ಥಳ ಜುಲೈ 30: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಎಸ್ಐಟಿ (SIT) ನಡೆಸಿದ ಉತ್ಖನನದ ವೇಳೆ ಪತ್ತೆಯಾಗಿದ್ದ ಅಸ್ಥಿಪಂಜರಗಳ ಪೈಕಿ ಮೂರು ಅಸ್ಥಿಪಂಜರಗಳ ಗುರುತು ಡಿಎನ್ಎ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ವಿಶೇಷವೆಂದರೆ, ಹತ್ಯೆಗೊಳಗಾದವರೆಲ್ಲರೂ ಮಹಿಳೆಯರು ಎಂಬ ಆರೋಪಗಳ ನಡುವೆ, ಪ್ರಸ್ತುತ ಡಿಎನ್ಎ ದೃಢಪಟ್ಟಿರುವ ಮೂವರೂ ಪುರುಷರು ಎಂಬುದು ಪರೀಕ್ಷೆಯಿಂದ ದೃಢಪಟ್ಟಿದೆ. ಮೂವರ ಕುಟುಂಬಸ್ಥರಿಂದ ಸಂಗ್ರಹಿಸಲಾಗಿದ್ದ ಡಿಎನ್ಎ ಮಾದರಿಗಳು ಅಸ್ಥಿಪಂಜರಗಳಿಗೆ ಸಂಪೂರ್ಣ ಹೊಂದಾಣಿಕೆಯಾಗಿವೆ:ಯು.ಬಿ. ಅಯ್ಯಪ್ಪ (70): ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ನಿವಾಸಿ. 2017ರ ಜೂನ್ 25ರಂದು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದಾಗ ನಾಪತ್ತೆಯಾಗಿದ್ದರು (ಶ್ರೀಮಂಗಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು). ಆದಿಶೇಷ (27): ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ನಿವಾಸಿ. ಬೆಂಗಳೂರಿನ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ ಇವರು 2013ರ ಅಕ್ಟೋಬರ್ 2ರಂದು ಮೊಬೈಲ್ ಮನೆಯಲ್ಲೇ ಇಟ್ಟು ನಾಪತ್ತೆಯಾಗಿದ್ದರು. ಕೃಷ್ಣಪ್ಪ (85): ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿ ನಿವಾಸಿ. ವಯೋಸಹಜ ಮರೆವಿನಿಂದ 2024ರ ಅಕ್ಟೋಬರ್ 22ರಂದು ಮನೆಯಿಂದ ಹೊರಟು ವಾಪಸ್ ಬಂದಿರಲಿಲ್ಲ (ಶ್ರೀನಿವಾಸಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು).ಜುಲೈ 15ರಂದು ಎಸ್ಐಟಿ ಸಲ್ಲಿಸಿದ್ದ ತನಿಖಾ ವರದಿಯಲ್ಲಿ ಈ ಡಿಎನ್ಎ ಫಲಿತಾಂಶದ ವಿವರಗಳನ್ನು ಉಲ್ಲೇಖಿಸಲಾಗಿದೆ. ಬಂಗ್ಲೆಗುಡ್ಡೆಯಲ್ಲಿ ಮಹಿಳೆಯರ ಹತ್ಯೆ ನಡೆದಿದೆ ಎಂಬ ವದಂತಿ ಹಾಗೂ ಆರೋಪಗಳ ನಡುವೆ, ಪ್ರಸ್ತುತ ಪತ್ತೆಯಾದ ಮೂವರೂ ವಯೋವೃದ್ಧ ಹಾಗೂ ಯುವ ಪುರುಷರಾಗಿದ್ದಾರೆ. ಕುಟುಂಬಸ್ಥರು ಸೂಕ್ತ ದಾಖಲೆಗಳೊಂದಿಗೆ ಎಸ್ಐಟಿಗೆ ಮನವಿ ಸಲ್ಲಿಸಿದರೆ ಅಸ್ಥಿಪಂಜರಗಳನ್ನು ಹಸ್ತಾಂತರಿಸಲು ಅವಕಾಶ ನೀಡಲಾಗುವುದು ಎಂದು ತಿಳಿದುಬಂದಿದೆ.